ಚೆನ್ನೈ: ಇತ್ತೀಚೆಗೆ ಬಿಜೆಪಿಗೆ ಗುಡ್ ಬೈ ಹೇಳಿದ್ದ ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು ರಾಜಕಾರಣಿ ಅಣ್ಣಾಮಲೈ ತಮ್ಮ ನಿರ್ಧಾರದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ತಮಿಳುನಾಡಿನಲ್ಲಿ ಬಿಜೆಪಿಗೆ ಶೇ. 10ಕ್ಕಿಂತಲೂ ಹೆಚ್ಚು ಮತಗಳು ಸಿಗುವುದಕ್ಕೆ ಕಾರಣರಾಗಿದ್ದ ಅಣ್ಣಾಮಲೈ, ಬಿಜೆಪಿ ಕಾರ್ಯವಿಧಾನ, ಧೋರಣೆ ಬಗ್ಗೆ ಅಸಮಾಧಾನಗೊಂಡಿದ್ದಾರೆ.
ಇಂಡಿಯಾ ಟುಡೆ ತಮಿಳುನಾಡು ಸಮಾವೇಶದಲ್ಲಿ ಮಾತನಾಡಿರುವ ಅಣ್ಣಾಮಲೈ, ಬಿಜೆಪಿಯ ಕೇಂದ್ರ ನಾಯಕತ್ವದ ಧೋರಣೆ ಬಗ್ಗೆ ವರ್ಷಗಳಿಂದ ಇದ್ದ ಬೇಸರ ಪಕ್ಷ ತೊರೆಯುವಂತೆ ಮಾಡಿತು ಎಂದಿದ್ದಾರೆ.
ಭಾರತದ ಅಭಿವೃದ್ಧಿಯು ಕೇವಲ ಗುಜರಾತ್ ಒಂದಕ್ಕೇ ಸೀಮಿತವಾಗಿರಬಾರದು ಎಂದು ಅಣ್ಣಾಮಲೈ ಅಭಿಪ್ರಾಯಪಟ್ಟಿದ್ದಾರೆ.
“ಎಲ್ಲಾ ಎಐ (AI) ಕಂಪನಿಗಳು, ಚಿಪ್/ಸೆಮಿಕಂಡಕ್ಟರ್ ತಯಾರಿಕಾ ಘಟಕಗಳು, 2030ರ ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು 2036ರ ಒಲಿಂಪಿಕ್ಸ್ನಂತಹ ಬೃಹತ್ ಯೋಜನೆಗಳು ಕೇವಲ ಗುಜರಾತ್ಗೆ ಹೋಗುವುದನ್ನು ಒಪ್ಪಲು ಸಾಧ್ಯವಿಲ್ಲ. ಭಾರತದ ಅಭಿವೃದ್ಧಿ ಮಾದರಿ ಬದಲಾಗಬೇಕು,” ಎಂದು ಅವರು ಹೇಳಿದ್ದಾರೆ.
ಇನ್ನು ಪಕ್ಷದಲ್ಲಿನ ಆಂತರಿಕ ವಿಷಯಗಳ ಬಗ್ಗೆಯೂ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅಣ್ಣಾಮಲೈ,
ಬಿಜೆಪಿಯ ನಿರ್ಧಾರಗಳು ಕ್ರಮೇಣ ‘ದೆಹಲಿ-ಕೇಂದ್ರಿತ’ವಾಗುತ್ತಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ. ಪಕ್ಷದ ವಿಕೇಂದ್ರೀಕರಣವಾಗಬೇಕು ಮತ್ತು ರಾಜ್ಯ ಮಟ್ಟದ ನಾಯಕರಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಹೇಳಿದ್ದಾರೆ.
‘ತಮಿಳುನಾಡಿನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದುದು ನನಗೆ ಅನುಭವಕ್ಕೆ ಬಂದಿತ್ತು. ಯುವಜನರು ಬದಲಾವಣೆ ಬಯಸುತ್ತಿದ್ದರು. ನಾವು ಆ ಧ್ವನಿಯನ್ನು ಕೇಳಿಸಿಕೊಳ್ಳುತ್ತಿರಲಿಲ್ಲ ಅನಿಸಿತು. ಜನತೆಗೆ ಹೊಸ ಮಾದರಿಯ ಆಡಳಿತ, ಹೊಸ ಐಡಿಯಾಗಳು ಬೇಕಿತ್ತು. ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ. ದೆಹಲಿಯಲ್ಲಿ ಕುಳಿತು ಒಂದು ರಾಜ್ಯದ ಬಗ್ಗೆ ರಾಷ್ಟ್ರ ಮಟ್ಟದ ಧೋರಣೆಯಿಂದ ನೋಡುವುದು ಎಲ್ಲಾ ಸಮಯದಲ್ಲೂ ಸರಿ ಎನಿಸುವುದಿಲ್ಲ’ ಎಂದು ಕರ್ನಾಟಕ ಕೇಡರ್ನ ಮಾಜಿ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅಭಿಪ್ರಾಯಪಟ್ಟಿದ್ದಾರೆ.