ನವದೆಹಲಿ: ಕೇಂದ್ರ ಹಣಕಾಸುವ ಸಚಿವ ನಿರ್ಮಲಾ ಸೀತಾರಾಮನ್ ಅವರು ಭಾನುವಾರ 2026-27ನೇ ಸಾಲಿನ ಬಜೆಟ್ ಮಂಡಿಸಿದ್ದು, ರೈತರು, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ವೃತ್ತಿಪರರನ್ನು ಬೆಂಬಲಿಸಲು, ಮಹಿಳೆಯರ ನೇತೃತ್ವದ ಗ್ರಾಮೀಣ ಉದ್ಯಮಗಳನ್ನು ಬಲಪಡಿಸುವತ್ತ ವಿಶೇಷ ಗಮನ ಹರಿಸಿದ್ದಾರೆ.
ಇಂದು ಲೋಕಸಭೆಯಲ್ಲಿ 9ನೇ ಬಾರಿ ಬಜೆಟ್ ಮಂಡಿಸಿದ ನಿರ್ಮಲಾ ಅವರು, ಮೀನುಗಾರಿಕೆ ವಲಯವನ್ನು ಉತ್ತೇಜಿಸಲು 500 ಜಲಾಶಯಗಳು ಅಥವಾ ಅಮೃತ ಸರೋವರಗಳ ಸಮಗ್ರ ಅಭಿವೃದ್ಧಿಯ ಪ್ರಸ್ತಾಪ ಮಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸಲು ಪಶುಸಂಗೋಪನೆಯಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಸರ್ಕಾರವು ಕ್ರಮಗಳನ್ನು ಘೋಷಿಸಿದರು.
ಕೇರಳ ಮತ್ತು ತಮಿಳುನಾಡು ಮುಂತಾದ ತೆಂಗು ಬೆಳೆಯುವ ರಾಜ್ಯಗಳನ್ನು ಗುರಿಯಾಗಿಸಿಕೊಂಡು, ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಸುಧಾರಿಸುವ ಮತ್ತು 10 ಮಿಲಿಯನ್ ತೆಂಗಿನ ಬೆಳೆಗಾರರು ಸೇರಿದಂತೆ ಸುಮಾರು 30 ಮಿಲಿಯನ್ ಜನರಿಗೆ ಪ್ರಯೋಜನವನ್ನು ನೀಡುವ ಗುರಿಯನ್ನು ಹೊಂದಿರುವ ತೆಂಗಿನಕಾಯಿ ಪ್ರಚಾರ ಯೋಜನೆಯನ್ನು ಹಣಕಾಸು ಸಚಿವರು ಘೋಷಿಸಿದರು.
ಕರಾವಳಿ ಪ್ರದೇಶಗಳಲ್ಲಿ ತೆಂಗು, ಗೋಡಂಬಿ ಮತ್ತು ಕೋಕೋ ಬೆಳೆಗಳ ಉತ್ಪಾದಕತೆಯನ್ನು ಹೆಚ್ಚಿಸಲು ವಿಶೇಷ ಕಾರ್ಯಕ್ರಮವನ್ನು ಘೋಷಿಸಲಾಗಿದೆ. 2030 ರ ವೇಳೆಗೆ ಭಾರತೀಯ ಗೋಡಂಬಿ ಮತ್ತು ಕೋಕೋವನ್ನು ಜಾಗತಿಕ ಪ್ರೀಮಿಯಂ ಬ್ರ್ಯಾಂಡ್ಗಳಾಗಿ ರೂಪಿಸಲು ಸರ್ಕಾರ ಗುರಿಯನ್ನು ಹೊಂದಿದೆ. ಇಳುವರಿ ಕಡಿಮೆಯಾಗಿರುವ ಹಳೆಯ ತೋಟಗಳನ್ನುಆಧುನೀಕರಿಸಲು ಮತ್ತು ಹೆಚ್ಚಿನ ಸಾಂದ್ರತೆಯ ಕೃಷಿ ಅಳವಡಿಸಲು ನೆರವು ನೀಡಲಾಗುವುದು. ವಾಲ್ನಟ್ , ಬಾದಾಮಿ ಮತ್ತು ಪೈನ್ ನಟ್ಸ್ಗಳ ಕೃಷಿಯನ್ನು ವಿಸ್ತರಿಸಲು ಯುವಜನರನ್ನು ಈ ವಲಯಕ್ಕೆ ಸೆಳೆಯಲು ವಿಶೇಷ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
ರೈತರಿಗೆ ಕೃಷಿ ಮಾಹಿತಿ, ಮಾರುಕಟ್ಟೆ ದರ ಮತ್ತು ಹವಾಮಾನ ಮುನ್ಸೂಚನೆಯನ್ನು ಅವರದ್ದೇ ಭಾಷೆಯಲ್ಲಿ ನೀಡಲು ಬಹುಭಾಷಾ AI ಕೃಷಿ ಉಪಕರಣವನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ.
ಗ್ರಾಮೀಣ ಮಹಿಳೆಯರ ಆದಾಯವನ್ನು ಹೆಚ್ಚಿಸಲು, ಮಹಿಳಾ ನೇತೃತ್ವದ ಉದ್ಯಮಗಳಿಗಾಗಿ ಸ್ವಸಹಾಯ ಉದ್ಯಮಿ(SHE) ಮಾರ್ಟ್ಗಳನ್ನು ಸ್ಥಾಪಿಸಲು ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ.