ಅಮರಾವತಿ: ಪ್ರಕರಣವೊಂದರಲ್ಲಿ ಕಸ್ಟಡಿಯಲ್ಲಿದ್ದಸಂಸದರೊಬ್ಬರಿಗೆ ಥರ್ಡ್ ಡಿಗ್ರಿ ಹಲ್ಲೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಸುನಿಲ್ ನಾಯಕ್ ಅವರನ್ನು ಆಂಧ್ರ ಪ್ರದೇಶ ಪೊಲೀಸರು ಸೋಮವಾರ ಪಾಟ್ನಾದಲ್ಲಿ ಬಂಧಿಸಿದ್ದಾರೆ.
ಸುನೀಲ್ ಅವರನ್ನು ಪಾಟ್ನಾದ ಅವರ ನಿವಾಸದಲ್ಲಿ ಪೊಲೀಸರು ಬಂಧಿಸಿದ್ದು, ಬಾಡಿ ವಾರಂಟ್ ಮೇರೆಗೆ ಬಿಹಾರದಿಂದ ಆಂಧ್ರ ಪ್ರದೇಶದ ಗುಂಟೂರಿಗೆ ಕರೆತರುತ್ತಿದ್ದಾರೆ ಎಂದು ತಿಳಿದುಬಂದಿದೆ.
ಆಂಧ್ರಪ್ರದೇಶದಲ್ಲಿ ಸಿಎಂ ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ಸಿಪಿ ಸರ್ಕಾರದ ಅವಧಿಯಲ್ಲಿ ಸಂಸದರಾಗಿದ್ದ ಮತ್ತು ಪ್ರಸ್ತುತ ಆಂಧ್ರ ವಿಧಾನಸಭೆಯ ಉಪ ಸ್ಪೀಕರ್ ಆಗಿರುವ ರಘುರಾಮಕೃಷ್ಣಂ ರಾಜು ಅವರಿಗೆ ಕಸ್ಟಡಿಯಲ್ಲಿದ್ದ ವೇಳೆ ಥರ್ಡ್ ಡಿಗ್ರಿ ಟ್ರಿಟ್ಮೆಂಟ್ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಟಿಡಿಪಿ ಸರ್ಕಾರ ತನಿಖೆ ಆದೇಶಿಸಿದೆ.
ಬಿಹಾರ ಕೇಡರ್ನಲ್ಲಿ ಪ್ರಸ್ತುತ ಐಜಿಯಾಗಿ ಸೇವೆ ಸಲ್ಲಿಸುತ್ತಿರುವ ಸುನಿಲ್ ನಾಯಕ್ ಅವರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಹಾಜರಾಗುವಂತೆ ಈ ಹಿಂದೆ ಆಂಧ್ರ ಪೊಲೀಸರು ಹಲವು ಬಾರಿ ನೋಟಿಸ್ ಜಾರಿ ಮಾಡಿದ್ದರು ಎನ್ನಲಾಗಿದೆ. ಆದರೆ ಸುನಿಲ್ ಕುಮಾರ್ ಆ ಯಾವುದೇ ನೋಟಿಸ್ಗೆ ಪ್ರತಿಕ್ರಿಯೆ ನೀಡದ ಹಿನ್ನೆಲೆ ಪಾಟ್ನಾಗೆ ತೆರಳಿದ್ದ ಆಂಧ್ರ ಪ್ರದೇಶ ಪೊಲೀಸರು ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಾಡಿ ವಾರಂಟ್ ಮೇಲೆ ಕರೆ ತರುತ್ತಿದ್ದಾರೆ ಎನ್ನಲಾಗಿದೆ.
ಏನಿದು ಪ್ರಕರಣ?
ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ನರಸಪುರಂನ ಸಂಸದರಾಗಿದ್ದ ರಘುರಾಮಕೃಷ್ಣ ರಾಜು ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು. ಹೈದರಾಬಾದ್ ಪೊಲೀಸರು ಸಂಸದನನ್ನು ಬಂಧಿಸಿದ್ದಾರೆ. ಆ ಸಮಯದಲ್ಲಿ ತನಗೆ ಚಿತ್ರಹಿಂಸೆ ನೀಡಲಾಗಿದೆ ಎಂದು ಸಂಸದ ರಘುರಾಮ್ ಆರೋಪಿಸಿದ್ದರು. ತನ್ನ ಮೇಲೆ ಪೊಲೀಸರು ಥರ್ಡ್ ಡಿಗ್ರಿ ಪ್ರಯೋಗಿಸಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದರು. ನನ್ನ ಕೈ ಕಾಲುಗಳ ಮೇಲೆ ಕ್ರೂರವಾಗಿ ಹೊಡೆದರು. ಈ ಹಿಂದೆ ಸರ್ಕಾರದ ಬಗ್ಗೆ ಯಾವುದೇ ದೂರು ನೀಡಿಲ್ಲ ಎಂದು ಅವರು ಹೇಳಿದ್ದಾರೆ.
ಬಳಿಕ ವೈಎಸ್ ಆರ್ ಕಾಂಗ್ರೆಸ್ ತೊರೆದಿದ್ದ ಅವರು ಟಿಡಿಪಿ ಸೇರ್ಪಡೆಯಾಗಿದ್ದರು. ಅಲ್ಲದೆ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಘುರಾಮ ಮತ್ತೆ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಸುನಿಲ್ ನಾಯಕ್ ಅವರ ಪಾತ್ರವೂ ದಾಖಲಾಗಿತ್ತು. ಅದರಂತೆ ಇದೀಗ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಸುನಿಲ್ ನಾಯಕ್ ಅಷ್ಟೇ ಅಲ್ಲದೇ ಸಿಐಡಿ ಐಜಿಪಿಯಾಗಿದ್ದ ಪಿ.ವಿ.ಸುನಿಲ್ ಕುಮಾರ್ ಮತ್ತು ಮತ್ತೊಬ್ಬ ಪಿಎಸ್ಐ ವಿರುದ್ಧ ಆರೋಪಿಸಿ ದೂರು ನೀಡಿದ್ದರು. 2024ರಲ್ಲಿ ವೈಎಸ್ಆರ್ಸಿಪಿ ಸರ್ಕಾರ ಹೋಗಿ ಟಿಡಿಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು, ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಆದೇಶಿಸಿತ್ತು. ಪ್ರಕರಣದಲ್ಲಿ ಆರೋಪಿತರಾಗಿರುವ ಮತ್ತೊಬ್ಬ ಹಿರಿಯ ಐಪಿಎಸ್ ಅಧಿಕಾರಿ ಪಿ.ವಿ.ಸುನಿಲ್ ಕುಮಾರ್ ಅವರನ್ನು ಸರ್ಕಾರ ನಿವೃತ್ತಿ ಹೊಂದುವವರೆಗೂ ಅಮಾನತು ಮಾಡಿ ಆದೇಶ ಹೊರಡಿಸಿದೆ ಎನ್ನಲಾಗಿದೆ