ಆರ್. ನಲ್ಲಕಣ್ಣು 
ದೇಶ

ಸಿಪಿಐ ಹಿರಿಯ ನಾಯಕ, ಶತಾಯುಷಿ ಆರ್. ನಲ್ಲಕಣ್ಣು ನಿಧನ

"ನಲ್ಲಕಣ್ಣು ಅವರು ಫೆಬ್ರವರಿ 25 ರಂದು ಮಧ್ಯಾಹ್ನ 1.55 ಕ್ಕೆ ನಿಧನರಾದರು ಎಂದು ನಾವು ತೀವ್ರ ದುಃಖದಿಂದ ನಿಮಗೆ ತಿಳಿಸುತ್ತಿದ್ದೇವೆ" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಚೆನ್ನೈ: ದೀರ್ಘಕಾಲದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಭಾರತೀಯ ಕಮ್ಯುನಿಸ್ಟ್ ಪಕ್ಷದ(ಸಿಪಿಐ) ಹಿರಿಯ ನಾಯಕ ಆರ್. ನಲ್ಲಕಣ್ಣು ಅವರು ಬುಧವಾರ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 101 ವರ್ಷ ವಯಸ್ಸಾಗಿತ್ತು.

ಇಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಫೆಬ್ರವರಿ 1 ರಂದು ನಲ್ಲಕಣ್ಣು ಅವರನ್ನು ತೀವ್ರ ನಿಗಾ ಘಟಕಕ್ಕೆ(ಐಸಿಯು) ದಾಖಲಿಸಲಾಗಿತ್ತು ಎಂದು ಆಸ್ಪತ್ರೆ ತಿಳಿಸಿದೆ. ವಿಶೇಷ ಆರೈಕೆಯ ಹೊರತಾಗಿಯೂ, ಅವರು ಚಿಕಿತ್ಸೆಗಳಿಗೆ ಉತ್ತಮವಾಗಿ ಸ್ಪಂದಿಸುತ್ತಿಲ್ಲ ಮತ್ತು ಅವರ ಸ್ಥಿತಿ ಗಂಭೀರವಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

"ನಲ್ಲಕಣ್ಣು ಅವರು ಫೆಬ್ರವರಿ 25 ರಂದು ಮಧ್ಯಾಹ್ನ 1.55 ಕ್ಕೆ ನಿಧನರಾದರು ಎಂದು ನಾವು ತೀವ್ರ ದುಃಖದಿಂದ ನಿಮಗೆ ತಿಳಿಸುತ್ತಿದ್ದೇವೆ" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

2023 ರಲ್ಲಿ ಸಿಪಿಎಂ ಹಿರಿಯ ನಾಯಕ ಎನ್. ಶಂಕರಯ್ಯ ಅವರ ನಿಧನದ ನಂತರ, ನಲ್ಲಕಣ್ಣು ತಮಿಳುನಾಡಿನ ಕೊನೆಯ ಶತಾಯುಷಿ ಕಮ್ಯುನಿಸ್ಟ್ ನಾಯಕರಾಗಿದ್ದರು.

ನಲ್ಲಕಣ್ಣು ಅವರನ್ನು ಕಾಮ್ರೇಡ್ ಆರ್.ಎನ್.ಕೆ ಎಂದು ಜನ ಪ್ರೀತಿಯಿಂದ ಕರೆಯುತ್ತಿದ್ದರು. ಡಿಸೆಂಬರ್ 26, 1925 ರಂದು ತಮಿಳುನಾಡಿನ ತೂತುಕುಡಿ ಬಳಿಯ ಶ್ರೀವೈಕುಂಠಂನಲ್ಲಿ ರಾಮಸಾಮಿ ಮತ್ತು ಕರುಪ್ಪಾಯಿ ಅಮ್ಮಾಳ್ ದಂಪತಿಗೆ ಜನಿಸಿದ ನಲ್ಲಕಣ್ಣು ಅವರು, ಮಧ್ಯಮ ವರ್ಗದ ರೈತ ಕುಟುಂಬದಲ್ಲಿ ಬೆಳೆದರು. ಭಾರತದ ಸ್ವಾತಂತ್ರ್ಯ ಚಳವಳಿಯು ವೇಗವನ್ನು ಪಡೆಯುತ್ತಿದ್ದಾಗ ಶ್ರೀವೈಕುಂಠಂನ ಕಾರ್ನೇಷನ್ ಶಾಲೆಯಲ್ಲಿ ಅವರು ವಿದ್ಯಾಭ್ಯಾಸ ಮಾಡುವಾಗಲೇ ಹೋರಾಟಕ್ಕೆ ಧುಮುಕಿದ್ದರು. ವಿದ್ಯಾರ್ಥಿಯಾಗಿ ಅವರು ಹತ್ತಿರದ ಪ್ರದೇಶಗಳಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗಿಯಾಗಿದ್ದರು. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದರು. ಅಲ್ಲದೆ ಈ ಹೋರಾಟದಲ್ಲಿ ಭಾಗವಹಿಸಿದ್ದ ಕಾರಣಕ್ಕಾಗಿ ಅವರು ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

ವಿಮಾನ ಸುರಕ್ಷತೆಯಲ್ಲಿ ರಾಜಿಯಿಲ್ಲ: ಪೈಲಟ್‌ಗಳ ಡ್ರಗ್‌ ಟೆಸ್ಟ್‌ ನಿಯಮದಲ್ಲಿ ಮಹತ್ವದ ಬದಲಾವಣೆ, ವರ್ಷವಿಡೀ ಯಾದೃಚ್ಛಿಕ ತಪಾಸಣೆಗೆ ಕೇಂದ್ರ ಸರ್ಕಾರ ಮುಂದು..!

ಹಿರಿಯೂರು ಬಳಿ ಸಮರ್ಥ್ ಶಾಮನೂರು ಕಾರು ಅಪಘಾತ: ಕಾಂಗ್ರೆಸ್ ಶಾಸಕ ಅಪಾಯದಿಂದ ಪಾರು!

20 TMC ನಾಯಕರ ಅನರ್ಹತೆ ಪ್ರಕರಣ: ಅಭಿಷೇಕ್‌ ಬ್ಯಾನರ್ಜಿ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಅಸ್ತು; ಬಂಡಾಯ ಸಂಸದರಿಗೆ Notice ಜಾರಿ..!

ಶ್ರೀಶೈಲ: ಹೋಟೆಲ್‌ನಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ; ಕಾರಣ ನಿಗೂಢ