ನವದೆಹಲಿ: ನ್ಯಾಯಾಂಗದಲ್ಲಿ ಭ್ರಷ್ಟಾಚಾರವನ್ನು ಉಲ್ಲೇಖಿಸುವ ಪಾಠದ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನಂತರ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಸಂಸ್ಥೆ(NCERT) ತನ್ನ ವೆಬ್ಸೈಟ್ನಿಂದ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವನ್ನು ತೆಗೆದುಹಾಕಿದೆ ಎಂದು ಮೂಲಗಳು ಬುಧವಾರ ತಿಳಿಸಿವೆ. ಸರ್ಕಾರಿ ಮೂಲಗಳ ಪ್ರಕಾರ, ವಿವಾದಾತ್ಮಕ ವಿಷಯವನ್ನು ಸೇರಿಸಿರುವುದು ಕೇಂದ್ರಕ್ಕೆ ಇಷ್ಟವಿಲ್ಲ.
ಪಿಟಿಐ ವರದಿಯ ಪ್ರಕಾರ, ಈಗಾಗಲೇ ಮುದ್ರಿಸಲಾದ ಪುಸ್ತಕದ ಪ್ರತಿಗಳಿಂದ ವಿವಾದಾತ್ಮಕ ಭಾಗಗಳನ್ನು ತೆಗೆದು ಹಾಕಲು ಎನ್ ಸಿಆರ್ ಇಆರ್ ಟಿ ಮುಂದಾಗಿದೆ. ಆದಾಗ್ಯೂ, ಈ ಪಾಠವನ್ನು ಕಲಿಸಬೇಕೆ ಅಥವಾ ಬೇಡವೇ ಎಂಬುದರ ಕುರಿತು ತಮಗೆ ಇನ್ನೂ ಯಾವುದೇ ನಿರ್ದೇಶನ ಬಂದಿಲ್ಲ ಎಂದು ರಾಷ್ಟ್ರ ರಾಜಧಾನಿಯ ಹಲವಾರು ಶಾಲೆಗಳು ಪಿಟಿಐಗೆ ತಿಳಿಸಿವೆ.
ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಸಿಂಘ್ವಿ ಅವರು ಎನ್ಸಿಇಆರ್ಟಿ ಪಠ್ಯಪುಸ್ತಕದಲ್ಲಿ ನ್ಯಾಯಾಂಗದ ಬಗ್ಗೆ "ಆಕ್ಷೇಪಾರ್ಹ" ಪಾಠದ ಬಗ್ಗೆ ತುರ್ತು ಪರಿಗಣನೆಗೆ ಪ್ರಸ್ತಾಪಿಸಿದ ನಂತರ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ ಪಾಂಚೋಲಿ ಅವರನ್ನು ಒಳಗೊಂಡ ಮೂವರು ನ್ಯಾಯಾಧೀಶರ ಪೀಠ, ಸ್ವಯಂಪ್ರೇರಿತವಾಗಿ ವಿಚಾರಣೆಗೆ ತೆಗೆದುಕೊಂಡಿದೆ.
8ನೇ ತರಗತಿಯ ಪಠ್ಯಕ್ರಮದಲ್ಲಿ ನ್ಯಾಯಾಂಗ ಭ್ರಷ್ಟಾಚಾರದ ಕುರಿತು ಅಧ್ಯಾಯವನ್ನು ಸೇರಿಸುವುದಕ್ಕೆ ಸಿಜೆಐ ಕಾಂತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಭೂಮಿಯ ಮೇಲಿನ ಯಾರಿಗೂ ನ್ಯಾಯಾಂಗವನ್ನು ಕೆಣಕಲು ಅಥವಾ ಅದರ ಸಮಗ್ರತೆಯ ಮೇಲೆ ದಾಳಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಗುಡುಗಿದ್ದಾರೆ.
ಈ ವಿಷಯವನ್ನು ಸ್ವತಃ ಗಮನಿಸಿರುವುದಾಗಿ ಹೇಳಿದ ಸಿಜೆಐ, ಈ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರು ಸೇರಿದಂತೆ ಹಲವಾರು ಕರೆಗಳು ಮತ್ತು ಸಂದೇಶಗಳನ್ನು ಸ್ವೀಕರಿಸುತ್ತಿರುವುದಾಗಿ ತಿಳಿಸಿದರು.
ವಿವಾದ ಏನು?
8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ರಚಿಸಲಾದ ಹೊಸ NCERT ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಮತ್ತು ಭಾರತದಲ್ಲಿ ನ್ಯಾಯಾಂಗ ಬಿಕ್ಕಟ್ಟಿನ ಕುರಿತು ಪಾಠ ಇದೆ.
‘ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರ’ ಎಂಬ ಅಧ್ಯಾಯವನ್ನು ಹೊಂದಿರುವ ಪರಿಷ್ಕೃತ ಪುಸ್ತಕವು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ನ್ಯಾಯಾಧೀಶರ ಕೊರತೆ, ಸಂಕೀರ್ಣ ಕಾನೂನು ಕಾರ್ಯವಿಧಾನಗಳು ಮತ್ತು ಅಸಮರ್ಪಕ ಮೂಲಸೌಕರ್ಯದಂತಹ ಕಾರಣಗಳನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್ ಸುಮಾರು 81,000 ಬಾಕಿ ಇರುವ ಪ್ರಕರಣಗಳಿಂದ ತುಂಬಿದೆ ಎಂದು ಅಧ್ಯಾಯವು ವಿವರಿಸುತ್ತದೆ. ಭ್ರಷ್ಟಾಚಾರವು ನ್ಯಾಯಾಂಗ ವಿಶ್ವಾಸಾರ್ಹತೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಮೇಲೆ ಇದು ಗಮನಹರಿಸಿದೆ.