ಬೀದಿ ನಾಯಿಗಳಿಗೆ ವಿಷದ ಇಂಜೆಕ್ಷನ್ 
ದೇಶ

Telangana: ಬೀದಿ ನಾಯಿಗಳ ಮಾರಣ ಹೋಮ; ವಿಷದ ಇಂಜೆಕ್ಷನ್ ನೀಡಿ 500 ಶ್ವಾನಗಳ ಹತ್ಯೆ!

ಹನುಮಕೊಂಡ ಜಿಲ್ಲೆಯ ಶಯಂಪೇಟೆ ಮತ್ತು ಅರೆಪಲ್ಲಿ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯ ಬೀದಿ ನಾಯಿಗಳನ್ನು ಕೊಲ್ಲಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಹೈದರಾಬಾದ್: ತೆಲಂಗಾಣದಲ್ಲಿ ಬೀದಿ ನಾಯಿಗಳ ಮಾರಣ ಹೋಮ ನಡೆದಿದ್ದು, ವಿಷದ ಇಂಜೆಕ್ಷನ್ ಚುಚ್ಚಿ ಬರೊಬ್ಬರಿ 500 ನಾಯಿಗಳ ಹತ್ಯೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ತೆಲಂಗಾಣದ ಹನಮಕೊಂಡ ಮತ್ತು ಕಾಮರೆಡ್ಡಿ ಜಿಲ್ಲೆಗಳಾದ್ಯಂತ ಏಳು ಗ್ರಾಮಗಳಲ್ಲಿ ಬೀದಿ ನಾಯಿಗಳಿಗೆ ವಿಷದ ಇಂಜೆಕ್ಷನ್ ಚುಚ್ಚಿ ಹತ್ಯೆ ಮಾಡಲಾಗಿದೆ. ಈ ಪೈಕಿ ಹನುಮಕೊಂಡ ಜಿಲ್ಲೆಯೊಂದರಲ್ಲೇ 300ಕ್ಕೂ ಅಧಿಕ ನಾಯಿಗಳನ್ನು ಕೊಲ್ಲಲಾಗಿದೆ.

ಹನುಮಕೊಂಡ ಜಿಲ್ಲೆಯ ಶಯಂಪೇಟೆ ಮತ್ತು ಅರೆಪಲ್ಲಿ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯ ಬೀದಿ ನಾಯಿಗಳನ್ನು ಕೊಲ್ಲಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಹೊಸ ವರ್ಷದ ಮೊದಲ ಎರಡು ವಾರಗಳಲ್ಲಿ ಕನಿಷ್ಠ 500 ನಾಯಿಗಳನ್ನು ವಿಷಪೂರಿತ ಇಂಜೆಕ್ಷನ್ ನೀಡಿ ಕೊಂದಿದ್ದಾರೆ. ಇದು ತೆಲಂಗಾಣದ ರಾಜ್ಯದ ಇತಿಹಾಸದಲ್ಲಿ ಪ್ರಾಣಿ ಹಿಂಸೆಯ ವಿರುದ್ಧದ ಅತಿದೊಡ್ಡ ಕ್ರಮಗಳಲ್ಲಿ ಒಂದಾಗಿದೆ.

ಇದೀಗ ನಾಯಿಗಳ ಮಾರಣಹೋಮದ ವಿರುದ್ಧ ಸ್ವಯಂಸೇವಾ ಸಂಘಟನೆಯೊಂದು ಶಯಂಪೇಟೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಇಬ್ಬರು ಗ್ರಾಮದ ಸರಪಂಚರು ಸೇರಿದಂತೆ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪ್ರಸ್ತುತ ದೂರಿನ ಆಧಾರದ ಮೇಲೆ, ಪೊಲೀಸರು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದಾಖಲಾಗಿರುವ ಪ್ರಕರಣಗಳಲ್ಲಿ ಶಾಯಂಪೇಟೆ ಮತ್ತು ಅರೆಪಲ್ಲಿಯ ಸರಪಂಚರು, ಅವರ ಗಂಡಂದಿರು, ಉಪ ಸರಪಂಚರು, ಇಬ್ಬರು ಗ್ರಾಮ ಕಾರ್ಯದರ್ಶಿಗಳು ಮತ್ತು ಇಬ್ಬರು ದಿನಗೂಲಿ ಕಾರ್ಮಿಕರು ಸೇರಿದ್ದಾರೆ.

ದೂರಿನ ಪ್ರಕಾರ, ಇಬ್ಬರು ಜನರು ನಾಯಿಗಳಿಗೆ ವಿಷ ಚುಚ್ಚುಮದ್ದು ನೀಡಿದ್ದರಿಂದ ಅವುಗಳ ಸಾವಿಗೆ ಕಾರಣವಾಯಿತು ಎಂದು ಆರೋಪಿಸಲಾಗಿದೆ. ನಂತರ, ಸತ್ತ ಬೀದಿ ನಾಯಿಗಳನ್ನು ಗ್ರಾಮದ ಕಸದ ತೊಟ್ಟಿಯಲ್ಲಿ ಎಸೆಯಲಾಗಿದೆ. ಜನವರಿ 6 ಮತ್ತು ಜನವರಿ 8 ರ ನಡುವಿನ ಈ ಮೂರು ದಿನಗಳಲ್ಲಿ ಈ ಘಟನೆಗಳು ನಡೆದಿವೆ ಎಂದು ಹೇಳಲಾಗಿದೆ.

ಬೀದಿ ನಾಯಿ ಮುಕ್ತ ಗ್ರಾಮದ ಭರವಸೆ ನೀಡಿದ್ದ ಅಭ್ಯರ್ಥಿಗಳು

ಇನ್ನು ಇತ್ತೀಚಿನ ಗ್ರಾಮ ಪಂಚಾಯತ್ ಚುನಾವಣೆಯ ಸಮಯದಲ್ಲಿ ವಿವಿದ ಪಕ್ಷಗಳ ಅಭ್ಯರ್ಥಿಗಳು ಮತದಾರರಿಗೆ ಬೀದಿ ನಾಯಿ ಮುಕ್ತ ಗ್ರಾಮದ ಭರವಸೆ ನೀಡಿದ್ದರು. ಇದೇ ಕಾರಣಕ್ಕಾಗಿ ಸ್ಥಳೀಯ ಚುನಾವಣಾ ಭರವಸೆಯನ್ನು ಈಡೇರಿಸಲು ಸಂಘಟಿತ ಹತ್ಯೆ ಕಾರ್ಯಾಚರಣೆ ಆಯೋಜಿಸಿದ್ದರು ಎನ್ನಲಾಗಿದೆ.

ಸಾರ್ವಜನಿಕ ಒತ್ತಡದಿಂದ ನಿರ್ಧಾರ

ಇನ್ನು ನಾಯಿಗಳ ಮಾರಣಹೋಮದ ಕುರಿತು ಮಾತನಾಡಿರುವ ಗ್ರಾಮ ಹಿರಿಯರು, ಈ ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿ ಇತ್ತು. ಹೀಗಾಗಿ ಸಾರ್ವಜನಿಕ ಒತ್ತಡದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಳ್ಳಿಗಳಲ್ಲಿ, ವಿಶೇಷವಾಗಿ ಸರಪಂಚ ಚುನಾವಣೆಯ ಅವಧಿಯಲ್ಲಿ ಬೀದಿ ನಾಯಿಗಳ ಸಂಖ್ಯೆಯಲ್ಲಿನ ಹೆಚ್ಚಳವು ದೊಡ್ಡ ಸಮಸ್ಯೆಯಾಗಿದೆ. ಅದಕ್ಕಾಗಿಯೇ ಅವರು ಇದನ್ನು ಮಾಡಿದ್ದಾರೆ ಎಂದು ಹೇಳಿದರು.

ಆದಾಗ್ಯೂ, ಬೀದಿ ನಾಯಿಗಳ ಸಮಸ್ಯೆಯನ್ನು ಪರಿಹರಿಸಲು ಮಾನವೀಯ ಕ್ರಮಗಳನ್ನು ತೆಗೆದುಕೊಳ್ಳುವಂತೆ NGO ಸರ್ಕಾರವನ್ನು ಒತ್ತಾಯಿಸಿದೆ. ಅಂತೆಯೇ ಕೊಲ್ಲುವ ಬದಲು, ಜನನ ನಿಯಂತ್ರಣ ಕಾರ್ಯಕ್ರಮಗಳು, ಪ್ರಾಣಿಗಳಿಗೆ ಸಂತಾನಹರಣ ಮತ್ತು ಲಸಿಕೆ ಹಾಕಬಹುದಿತ್ತು ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೆ 'ಇರಾನ್ ದಾಳಿ' ಬೆದರಿಕೆ: ಕತಾರ್‌ನ ಅಮೆರಿಕ ಸೇನಾ ನೆಲೆಯಿಂದ ಕೆಲವು ಸಿಬ್ಬಂದಿ ಸ್ಥಳಾಂತರ!

ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ಪ್ರಬಲ ಸ್ಫೋಟ: ಮೂವರು ಸಾವು, ಇಬ್ಬರು ಗಂಭೀರ ಗಾಯ

ರಾಜ್‌ಕೋಟ್​ ಪಂದ್ಯ: ಬೌಲರ್ ಗಳ ಬೆಂಡೆತ್ತಿದ ಕೀವಿಸ್ ಪಡೆ; ಭಾರತಕ್ಕೆ ಹೀನಾಯ ಸೋಲು!

ಕೂಡಲೇ ಇರಾನ್ ತೊರೆಯಿರಿ: ಭಾರತೀಯ ನಾಗರಿಕರಿಗೆ 2ನೇ ಬಾರಿಗೆ ಸಲಹೆ!

ಚೀನಾದ ಆಡಳಿತರೂಢ ಕಮ್ಯುನಿಸ್ಟ್ ಪಕ್ಷದೊಂದಿಗೆ ನೋಂದಾಯಿಸದ ಆರ್‌ಎಸ್‌ಎಸ್‌ಗೆ ಏನು ಕೆಲಸ?: ಪ್ರಿಯಾಂಕ್ ಖರ್ಗೆ

SCROLL FOR NEXT