ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಮಯದಲ್ಲಿ ಮತದಾರರ ಬೆರಳುಗಳ ಮೇಲೆ ಶಾಯಿ ಗುರುತು ಹಾಕಿದ್ದರ ಬಗ್ಗೆ ವಿವಾದ ಉಂಟಾಗಿದೆ. ವಿರೋಧ ಪಕ್ಷಗಳು ಅಳಿಸಲಾಗದ ಶಾಯಿಯ ಬದಲಿಗೆ ಮಾರ್ಕರ್ ಪೆನ್ನುಗಳನ್ನು ಬಳಸಲಾಗಿದೆ ಎಂದು ಆರೋಪಿಸಿವೆ. ಇದು ಚುನಾವಣಾ ಅಕ್ರಮಕ್ಕೆ ಕಾರಣವಾಗಬಹುದು ಎಂದು ಆರೋಪಿಸಿದ್ದಾರೆ.
ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಮುಖ್ಯಸ್ಥ ರಾಜ್ ಠಾಕ್ರೆ ಚುನಾವಣಾ ಪ್ರಕ್ರಿಯೆಯ ಸಮಗ್ರತೆಯನ್ನು ಪ್ರಶ್ನಿಸಿದರು. ಚುನಾವಣೆಯಲ್ಲಿ ಗೆಲ್ಲಲು ಸರ್ಕಾರವು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಸರ್ಕಾರವು ಚುನಾವಣೆಯಲ್ಲಿ ಗೆಲ್ಲಲು ನೋಡುತ್ತಿದೆ. ಇದು ಆರೋಗ್ಯಕರ ಪ್ರಜಾಪ್ರಭುತ್ವದ ಸಂಕೇತವಲ್ಲ. ಅಧಿಕಾರ ದುರುಪಯೋಗಕ್ಕೆ ಮಿತಿ ಇದೆ ಎಂದು ರಾಜ್ ಠಾಕ್ರೆ ಹೇಳಿದರು.
ಆಡಳಿತ ಪಕ್ಷ ಶಾಯಿ ಬಳಸುವ ಬದಲು ಮಾರ್ಕರ್ ಪೆನ್ನುಗಳನ್ನು ಬಳಸುತ್ತಿದ್ದಾರೆ. ಇದು ಸ್ವೀಕಾರಾರ್ಹವಲ್ಲ. ಇಂತಹ ವಂಚನೆ ಚುನಾವಣೆಗಳಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು.
ರಾಜಕೀಯ ಪಕ್ಷಗಳೊಂದಿಗೆ ಸಾಕಷ್ಟು ಸಮಾಲೋಚನೆ ನಡೆಸದೆ ಹೊಸ ಕಾರ್ಯವಿಧಾನಗಳನ್ನು ಪರಿಚಯಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ನಕಲಿ ಮತ್ತು ಡಬಲ್ ಮತದಾನದ ಸಮಸ್ಯೆಗಳು ಹಾಗೂ ವಿವಿಪಿಎಟಿ ವ್ಯವಸ್ಥೆಯನ್ನು ಉಲ್ಲೇಖಿಸಿ, ಪ್ರಿಂಟಿಂಗ್ ಆಕ್ಸಿಲಿಯರಿ ಡಿಸ್ಪ್ಲೇ ಯುನಿಟ್ (PADU) ಹೆಚ್ಚುವರಿ ಸಾಧನಗಳನ್ನು ಏಕಪಕ್ಷೀಯವಾಗಿ ತರಲಾಗುತ್ತಿದೆ. ನಾವು ನಕಲಿ ಮತ್ತು ಡಬಲ್ ಮತದಾರರು ಮತ್ತು ವಿವಿಪಿಎಟಿ ಸಮಸ್ಯೆಯನ್ನು ಎತ್ತಿದ್ದೇವೆ. ಈಗ ಅವರು ಕೆಲವು ಪಡು ಘಟಕಗಳನ್ನು ತಂದಿದ್ದಾರೆ. ಅಂತಹ ಸಾಧನಗಳನ್ನು ಬಳಸುವ ಮೊದಲು ನಮ್ಮನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಚುನಾವಣೆಯಲ್ಲಿ ಭಾಗವಹಿಸಿದ ಮತದಾರರ ಪೈಕಿ ಕೆಲವರು ಮತದಾನದ ನಂತರ ತಮ್ಮ ಬೆರಳುಗಳ ಮೇಲಿನ ಶಾಯಿ ಗುರುತನ್ನು ಅಳಿಸಿಹಾಕಬಹುದು ಎಂದು ಹೇಳಿಕೊಂಡಿದ್ದಾರೆ.
ಆರೋಪಗಳಿಗೆ ಪ್ರತಿಕ್ರಿಯಿಸಿದ ಮುಂಬೈ ಮಹಾನಗರ ಪಾಲಿಕೆ ಆಯುಕ್ತ ಭೂಷಣ್ ಗಗ್ರಾನಿ, ಶಾಯಿ ಬಳಕೆಗೆ ಸಂಬಂಧಿಸಿದ ಎಲ್ಲಾ ದೂರುಗಳನ್ನು ನಾವು ತನಿಖೆ ಮಾಡುತ್ತೇವೆ. ಪ್ರಾಥಮಿಕ ಅವಲೋಕನವೆಂದರೆ ಉಗುರಿನ ಮೇಲಿನ ಶಾಯಿಯನ್ನು ತೆಗೆಯಬಹುದು, ಆದರೆ ಚರ್ಮದ ಮೇಲಿನ ಶಾಯಿ ಅಳಿಸಿಹೋಗುವುದಿಲ್ಲ ಎಂದರು.