ನವದೆಹಲಿ: ಸದ್ಯದಲ್ಲೇ ಕೇಂದ್ರ ಸಚಿವ ಸಂಪುಟ ಪುನರ್ ರಚನೆಯಾಗಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಉಪ ಪ್ರಧಾನಿಯಾಗಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಮುಂಗಾರು ಅಧಿವೇಶನಕ್ಕೂ ಮುನ್ನ ಅಂದರೆ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟ ಪುನರ್ ರಚನೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಸಚಿವ ಸಂಪುಟ ಪುನರ್ ರಚನೆ ಪ್ರಕ್ರಿಯೆಯಲ್ಲಿ 'ಆಪರೇಷನ್ ಟೈಗರ್ ' ಯಶಸ್ಸಿನ ಹಿಂದಿನ ನಾಯಕನಿಗೆ ಪದೋನ್ನತಿ ನೀಡುವ ನಿರೀಕ್ಷೆಯಿದೆ ಎಂದು ಮರಾಠಿ ಮಾಧ್ಯಮ ವರದಿ ಮಾಡಿದೆ.
ಎನ್ ಡಿಎ ಸರ್ಕಾರದಲ್ಲಿ ಶಿವಸೇನಾ ಶಿಂಧೆ ಬಣದ ಬಲವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಶ್ರೀಕಾಂತ್ ಶಿಂಧೆ, ಓಂರಾಜೆ ನಿಂಬಾಳ್ಕರ್ ಮತ್ತು ಸಂಜಯ್ ಬಂದು ಜಾಧವ್ ಅವರಿಗೆ ಸಂಪುಟದಲ್ಲಿ ಸ್ಥಾನ ದೊರೆಯಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರನಾಗಿರುವ ಶ್ರೀಕಾಂತ್ ಶಿಂಧೆ ಆಪರೇಷನ್ ಟೈಗರ್ ಹಿಂದಿನ ಮಾಸ್ಟರ್ ಮೈಂಡ್ ಎನ್ನಲಾಗುತ್ತಿದೆ. ಈ ಕಾರ್ಯಾಚರಣೆಯಲ್ಲಿ ಏಳು ಸಂಸದರು ಉದ್ಧವ್ ಠಾಕ್ರೆ ಬಣ ತೊರೆದು ಎನ್ ಡಿಎ ಮೈತ್ರಿ ಪಕ್ಷವಾದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾಗೆ ಇತ್ತೀಚಿಗೆ ಸೇರ್ಪಡೆಯಾದರು.