ಅಯೋಧ್ಯೆ: ರಾಮ ಮಂದಿರದಲ್ಲಿ ದೇಣಿಗೆ ಕಳ್ಳತನದ ಆರೋಪದ ನಡುವೆ, ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿದ ನಂತರ ವಿಎಚ್ಪಿ ನಾಯಕ ಚಂಪತ್ ರಾಯ್, ಇದೇ ಮೊದಲ ಬಾರಿಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಹೇಳಿಕೆ ನೀಡಿದ್ದು, ವಿಶೇಷ ತನಿಖಾ ತಂಡ (SIT) ತನಿಖೆ ನಡೆಸುತ್ತಿದ್ದು, ಅದು ಮೊದಲು ಪೂರ್ಣಗೊಂಡು, ಪ್ರಾಥಮಿಕ ವರದಿಯಲ್ಲಿ ಏನು ಬರುತ್ತದೆ ಎಂಬುದನ್ನು ತಿಳಿಯಲು ಟ್ರಸ್ಟ್ ಬಯಸಿದ್ದರಿಂದ ಇಲ್ಲಿಯವರೆಗೂ ಏನನ್ನೂ ಪ್ರತಿಕ್ರಿಯಿಸದೆ ಮೌನವಾಗಿದ್ದೆ ಎಂದಿದ್ದಾರೆ.
ಶ್ರೀ ರಾಮ ಜನ್ಮಭೂಮಿ ದೇವಾಲಯದ ಸಂಕೀರ್ಣದಲ್ಲಿ ದೇಣಿಗೆ ಎಣಿಕೆ ವೇಳೆಯಲ್ಲಿ ಕಳ್ಳತನ ನಡೆದಿದೆ ಎಂದು ಜೂನ್ 6 ರಿಂದ ವರದಿಗಳು ಆರಂಭವಾದ ನಂತರ ತನ್ನ ವಿರುದ್ಧ ಅನೇಕ ಆರೋಪಗಳು ಎದ್ದಿವೆ. ಎಸ್ಐಟಿ ಮೊದಲು ತನ್ನ ಪ್ರಾಥಮಿಕ ತನಿಖೆ ಪೂರ್ಣಗೊಳಿಸಿ ಪರಿಶೀಲಿಸಬೇಕೆಂದು ಟ್ರಸ್ಟ್ ಬಯಸಿದ್ದರಿಂದ ಬಹಿರಂಗವಾಗಿ ಏನನ್ನೂ ಹೇಳಿಕೆ ನೀಡಿರಲಿಲ್ಲ ಎಂದು ತಿಳಿಸಿದ್ದಾರೆ.
ಆದರೆ ಈಗ ಮಾತನಾಡುತ್ತಿದ್ದೇನೆ. ತಾಳ್ಮೆ ಇರಲಿ, ಎಸ್ ಟಿಐ ಪ್ರಾಥಮಿಕ ವರದಿಯೇ ಅಂತಿಮ ಎಂದು ಪರಿಗಣಿಸಬಾರದು ಎಂದು ಹೇಳಿದ್ದಾರೆ. ಎಸ್ಐಟಿಯ ಅಂತಿಮ ತೀರ್ಮಾನಗಳಿಗಾಗಿ ಜನರು ಕಾಯಬೇಕಾಗಿದೆ. ತನಿಖೆ ಪೂರ್ಣಗೊಂಡ ನಂತರವೇ ಪ್ರಕರಣದ ಸುತ್ತಲಿನ ತಪ್ಪು ಮಾಹಿತಿ ಮತ್ತು ತಪ್ಪು ಕಲ್ಪನೆಗಳನ್ನು ಪರಿಹರವಾಗಲಿದೆ ಎಂದು ಅವರು ಹೇಳಿದ್ದಾರೆ.
'ನನ್ನ ಸಾರ್ವಜನಿಕ ಜೀವನ ತೆರೆದ ಪುಸ್ತಕ: ತಮ್ಮ ದಶಕಗಳ ಸಾರ್ವಜನಿಕ ಸೇವೆ ಕುರಿತು ಅವರು ಮಾತನಾಡಿದ್ದು, ಅಕ್ಟೋಬರ್ 1991 ರಿಂದ ಸಂಸ್ಥೆಯ ಮೂಲಕ ಅಯೋಧ್ಯೆಯಲ್ಲಿ ಕೆಲಸ ಮಾಡುತ್ತಿದ್ದು, ಸುಮಾರು 45 ವರ್ಷಗಳ ಸಾರ್ವಜನಿಕ ಜೀವನವು ಯಾವಾಗಲೂ ಪಾರದರ್ಶಕವಾಗಿದೆ. ತಾನು ಕೆಲಸ ಮಾಡಿದ ಕಡೆಗಳೆಲ್ಲಾ ಪರಿಶೀಲನೆ ನಡೆಸಬಹುದು ಎಂದು ಅವರು ಹೇಳಿಕೊಂಡಿದ್ದಾರೆ.