ತಿರುಪ್ಪತ್ತೂರು: ಪ್ರೇಮ ವಿವಾಹ ಮಾಡಿಕೊಂಡ ಮಗಳನ್ನು ಮನೆಗೆ ಕರೆತರುವ ಪ್ರಯತ್ನದಲ್ಲಿ ಆಕೆಯ ಕಾಲು ಹಿಡಿದು ಕಣ್ಣೀರು ಹಾಕಿ ಬೇಡಿಕೊಂಡ ಪೋಷಕರ ಭಾವನಾತ್ಮಕ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ತಮಿಳುನಾಡಿನ ತಿರುಪ್ಪತ್ತೂರು ಜಿಲ್ಲೆಯಲ್ಲಿ ನಡೆದ ಪ್ರೇಮವಿವಾಹ ಪ್ರಕರಣದ ಈ ವಿಡಿಯೋ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ತಿರುಪ್ಪತ್ತೂರು ಜಿಲ್ಲೆಯ ಜೋಲಾರ್ಪೇಟೆ ಸಮೀಪದ ಕಟ್ಟೇರಿ ಲಾರಿ ಶೆಡ್ ಪ್ರದೇಶದ ನಿವಾಸಿಗಳಾದ ಕಾಳಿ ಮತ್ತು ಪ್ರವೀಣಾ ದಂಪತಿಯ ಪುತ್ರಿ ದಿವ್ಯದರ್ಶಿನಿ (19) ಎಂಬ ಯುವತಿ ಕೃಷ್ಣಗಿರಿಯ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೂರನೇ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ.
ಅಂತೆಯೇ ಜೋಲಾರ್ಪೇಟೆ ಸಮೀಪದ ಅಮ್ಮಯ್ಯಪ್ಪನ್ ನಗರದ ನಿವಾಸಿ ಹಾಗೂ ಧ್ವನಿವರ್ಧಕ (ಲೌಡ್ಸ್ಪೀಕರ್) ಕೇಂದ್ರ ನಡೆಸುತ್ತಿರುವ ತಿರುಪತಿ ಅವರ ಪುತ್ರ ಪೆರುಮಾಳ್ (23) ಅವರೊಂದಿಗೆ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು.
ಈ ಪ್ರೇಮ ಸಂಬಂಧದ ಬಗ್ಗೆ ದಿವ್ಯದರ್ಶಿನಿ ಅವರ ಪೋಷಕರಿಗೆ ತಿಳಿದ ಬಳಿಕ ಅವರು ಈ ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಪೋಷಕರ ವಿರೋಧವನ್ನು ಲೆಕ್ಕಿಸದ ದಿವ್ಯದರ್ಶಿನಿ ಜುಲೈ 4ರಂದು ಮನೆಯಿಂದ ಓಡಿ ಹೋಗಿ ಪೆರುಮಾಳ್ ಅವರನ್ನು ಸೇರಿಕೊಂಡರು.
ನಂತರ ಇಬ್ಬರೂ ಏಳಗಿರಿ ಬೆಟ್ಟದಲ್ಲಿರುವ ಮುರುಗನ್ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ವಿವಾಹದ ಬಳಿಕ ರಕ್ಷಣೆ ಕೋರಿ ಈ ಪ್ರೇಮಿ ದಂಪತಿ ತಿರುಪ್ಪತ್ತೂರು ಮಹಿಳಾ ಪೊಲೀಸ್ ಠಾಣೆಗೆ ತೆರಳಿ ಆಶ್ರಯ ಪಡೆದರು.
ಈ ಹಿನ್ನೆಲೆಯಲ್ಲಿ ರಾಜಿ ಮಾತುಕತೆ ನಡೆಸಲು ಪೊಲೀಸರು ಉಭಯ ಕುಟುಂಬಗಳ ಸದಸ್ಯರನ್ನು ಪೊಲೀಸ್ ಠಾಣೆಗೆ ಕರೆಸಿದರು. ಈ ವಿಷಯ ತಿಳಿದು ಕಾಳಿ, ಪ್ರವೀಣಾ ಹಾಗೂ ಸುಮಾರು 10 ಮಂದಿ ಸಂಬಂಧಿಕರು ಠಾಣೆಗೆ ಆಗಮಿಸಿದರು. ಅಲ್ಲಿ ಮಗಳು ತನ್ನ ಪತಿಯೊಂದಿಗೆ ಇರುವುದನ್ನು ಕಂಡ ಪೋಷಕರು ಭಾವುಕರಾಗಿ ಕಣ್ಣೀರಿಟ್ಟರು.
'ಓದಿಸಿ, ಬೆಳೆಸಿ, ಪ್ರೀತಿಯಿಂದ ಸಾಕಿದ ನಮಗೆ ದ್ರೋಹ ಮಾಡಬೇಡ'
"ನಿನ್ನನ್ನು ಓದಿಸಿ, ಬೆಳೆಸಿ, ಪ್ರೀತಿಯಿಂದ ಸಾಕಿದ ನಮಗೆ ಹೀಗೆ ದ್ರೋಹ ಮಾಡಿದ್ದೀಯಲ್ಲ" ಎಂದು ಅಳುತ್ತಾ ಅವರು ಮಗಳನ್ನು ಮನೆಗೆ ಕರೆದುಕೊಂಡು ಹೋಗಲು ಮನವೊಲಿಸಲು ಪ್ರಯತ್ನಿಸಿದರು. ಆದರೆ ದಿವ್ಯದರ್ಶಿನಿ ಅದಕ್ಕೆ ನಿರಾಕರಿಸಿದರು.
ಇದರಿಂದ ಮನನೊಂದ ತಾಯಿ ಪ್ರವೀನಾ ಹಾಗೂ ತಂದೆ ಕಾಳಿ, ಮಗಳ ಕಾಲು ಹಿಡಿದು, "ನಮ್ಮ ಜೊತೆಗೆ ಮನೆಗೆ ಬಾ" ಎಂದು ಬೇಡಿಕೊಂಡು ಕಣ್ಣೀರಿಟ್ಟರು. ಈ ವೇಳೆ ಪೊಲೀಸರು ಅವರನ್ನು ಠಾಣೆಯಿಂದ ಹೊರಗೆ ಕಳುಹಿಸಲು ಪ್ರಯತ್ನಿಸಿದ್ದರೆಂದು ವರದಿಯಾಗಿದೆ.
ಇದನ್ನು ವಿರೋಧಿಸಿ ದಿವ್ಯದರ್ಶಿನಿ ಅವರ ಪೋಷಕರು ಹಾಗೂ ಸಂಬಂಧಿಕರು ಪೊಲೀಸ್ ಠಾಣೆ ಎದುರಿನ ರಸ್ತೆಯಲ್ಲಿ ಕುಸಿದು ಬಿದ್ದು ಜೋರಾಗಿ ಅಳುತ್ತಾ ಪ್ರತಿಭಟನೆ ನಡೆಸಿದರು. ಇದರಿಂದ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಕೊನೆಗೆ ದಿವ್ಯದರ್ಶಿನಿ ಅವರ ಇಚ್ಛೆಯನ್ನು ಗೌರವಿಸಿದ ಪೊಲೀಸರು ರಾತ್ರಿ ಸುಮಾರು 9.30ರ ವೇಳೆಗೆ ಅವರನ್ನು ಅವರ ಪತಿ ಪೆರುಮಾಳ್ ಅವರೊಂದಿಗೆ ಕಳುಹಿಸಿದರು.