ಭಾರತ ಹಿಂದೂ ರಾಷ್ಟ್ರವಾದರೆ ಮುಸ್ಲಿಮರ ಪರಿಸ್ಥಿತಿ ಏನಾಗುತ್ತದೆ ಎಂಬ ಪ್ರಶ್ನೆಗೆ ಯೋಗಗುರು ಬಾಬಾ ರಾಮದೇವ್ ಸಾರ್ವಜನಿಕ ಸಭೆಯೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ. ಹರಿದ್ವಾರದ ಸಮೀಪದ ದೇವಬಂದ್ನಲ್ಲಿ 2009ರಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡ ಅವರು, "ಅಂದು ನನ್ನನ್ನು ಅಲ್ಲಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಆಗ ನಾನು, ನಮ್ಮ ಧರ್ಮಗಳು ಬೇರೆಬೇರೆಯಾಗಿರಬಹುದು, ಆದರೆ ನಮ್ಮ ಪೂರ್ವಜರು ಒಂದೇ ಎಂದು ಹೇಳಿದ್ದೆ. ಆದ್ದರಿಂದ ಹಿಂದೂ ರಾಷ್ಟ್ರ ನಿರ್ಮಾಣವಾದರೆ ಯಾರೂ ಭಯಪಡಬೇಕಾದ ಅಗತ್ಯವಿಲ್ಲ. ನಮ್ಮೆಲ್ಲರ ಪೂರ್ವಜರು ಸನಾತನಿ ಹಿಂದೂ ಆರ್ಯ-ವೇದಿಕರು" ಎಂದು ಹೇಳಿದ್ದಾರೆ.
ಮುಸ್ಲಿಮರಿಗೆ ಸಲಹೆಯನ್ನೂ ನೀಡಿರುವ ಅವರು, 'ತನ್ನದೇ ಪೂರ್ವಜರ ಪರವಾಗಿ ನಿಲ್ಲದವನು ಯಾರ ಪರವಾಗಿಯೂ ನಿಲ್ಲಲು ಸಾಧ್ಯವಿಲ್ಲ. ನಿಮ್ಮ ಪೂರ್ವಜರು, ಋಷಿಮುನಿಗಳ ಬೋಧನೆಗಳನ್ನು ಅನುಸರಿಸಿ. ಗಡ್ಡ ಇಟ್ಟುಕೊಳ್ಳಿ, ಮೀಸೆ ಬೋಳಿಸಿಕೊಳ್ಳಿ. ಯಾವ ಟೋಪಿ ಬೇಕಾದರೂ ಧರಿಸಿ, ಯಾವ ಪೇಟವನ್ನಾದರೂ ಕಟ್ಟಿಕೊಳ್ಳಿ, ನಿಮಗೆ ಇಷ್ಟವಾದ ಉಡುಪು ಧರಿಸಿ. ಆದರೆ ನಿಮ್ಮ ಪೂರ್ವಜರಂತೆ ಉತ್ತಮ ಚಾರಿತ್ರ್ಯವನ್ನು ಹೊಂದಿರಿ. ಹಿಂದೂಸ್ತಾನದಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರಿಗೆ ಯಾವುದೇ ಅಪಾಯವಿಲ್ಲ" ಎಂದು ರಾಮದೇವ್ ಹೇಳಿದ್ದಾರೆ.
'ಹಿಂದೂ ರಾಷ್ಟ್ರ' ಎಂಬ ಪರಿಕಲ್ಪನೆಗೆ ಯಾರೂ ಭಯಪಡಬೇಕಾದ ಅಗತ್ಯವಿಲ್ಲ ಎಂದು ಯೋಗಗುರು ರಾಮದೇವ ಹೇಳಿದ್ದಾರೆ. ಭಾರತದ ವಿವಿಧ ಧಾರ್ಮಿಕ ಸಮುದಾಯಗಳ ಪೂರ್ವಜರು ಒಂದೇ 'ಸನಾತನಿ' ಮೂಲವನ್ನು ಹೊಂದಿದ್ದಾರೆ ಎಂದು ಅವರು ವಾದಿಸಿದ್ದು, ಈ ಪೂರ್ವಜರ ಸಂಪ್ರದಾಯಗಳನ್ನು ಅಳವಡಿಸಿಕೊಳ್ಳುವುದರಿಂದ ಸಂಘರ್ಷಕ್ಕಿಂತ ಐಕ್ಯತೆ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಮದೇವ್ ಅವರ ನಿಲುವು
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಾಬಾ ರಾಮದೇವ್, ಭಾರತದ ಪ್ರಾಚೀನ ಸಾಂಸ್ಕೃತಿಕ ಬೇರುಗಳನ್ನು ಒಪ್ಪಿಕೊಳ್ಳುವುದು ಹಾಗೂ ಹಿಂದೂ ರಾಷ್ಟ್ರದ ಪರಿಕಲ್ಪನೆಯಲ್ಲಿ ಭಾಗಿಯಾಗುವುದು ಅಲ್ಪಸಂಖ್ಯಾತ ಸಮುದಾಯಗಳಿಗೆ, ವಿಶೇಷವಾಗಿ ಮುಸ್ಲಿಮರಿಗೆ, ಭಯ ಹುಟ್ಟಿಸುವ ವಿಷಯವಾಗಬಾರದು. ಮುಸ್ಲಿಮರು ತಮ್ಮ ಪೂರ್ವಜರ ಸಂಪ್ರದಾಯಗಳನ್ನು ಅಳವಡಿಸಿಕೊಳ್ಳಬೇಕು ಎಂದೂ ಅವರು ಸಲಹೆ ನೀಡಿದ್ದಾರೆ.
ನಮ್ಮ ಧರ್ಮಗಳು ಬೇರೆಬೇರೆಯಾಗಿರಬಹುದು, ಆದರೆ ನಮ್ಮ ಪೂರ್ವಜರು ಒಂದೇ. ನಾವು ಒಳಗೆ ಪ್ರವೇಶಿಸಿದಾಗ ಅಲ್ಲಿ ಬರೆದಿದ್ದಂತೆ, ಇಲ್ಲಿಯೂ ಸಹ 'ಹಿಂದೂ ರಾಷ್ಟ್ರ' ಎಂಬ ಪರಿಕಲ್ಪನೆಗೆ ಯಾರೂ ಭಯಪಡಬೇಕಾದ ಅಗತ್ಯವಿಲ್ಲ ಎಂದು ಬರೆಯಲಾಗಿದೆ. ನಮ್ಮೆಲ್ಲರ ಪೂರ್ವಜರು ಸನಾತನಿ ಹಿಂದೂಗಳೇ. ಹಿಂದೂ ರಾಷ್ಟ್ರ ಸ್ಥಾಪನೆಯಾದರೆ ಮುಸ್ಲಿಮರು ಎಲ್ಲಿ ಹೋಗಬೇಕು ಎಂದು ಕೆಲವರು ಕೇಳುತ್ತಾರೆ. ನನ್ನ ಅಭಿಪ್ರಾಯದಲ್ಲಿ, ಮುಸ್ಲಿಮರು ತಮ್ಮ ಪೂರ್ವಜರ ಸಂಪ್ರದಾಯಗಳನ್ನು ಅಳವಡಿಸಿಕೊಳ್ಳಬೇಕು. ತನ್ನದೇ ಪೂರ್ವಜರ ಪರವಾಗಿ ನಿಲ್ಲದವನು ಯಾರ ಪರವಾಗಿಯೂ ನಿಲ್ಲಲು ಸಾಧ್ಯವಿಲ್ಲ. ನಿಮ್ಮ ಪೂರ್ವಜರು ಮತ್ತು ಋಷಿಮುನಿಗಳ ಬೋಧನೆಗಳನ್ನು ಅನುಸರಿಸಿ. ಗಡ್ಡ ಇಟ್ಟುಕೊಳ್ಳಿ, ಮೀಸೆ ಬೋಳಿಸಿಕೊಳ್ಳಿ, ನಿಮಗೆ ಇಷ್ಟವಾದ ಉಡುಪು ಧರಿಸಿ. ಆದರೆ ನಿಮ್ಮ ಪೂರ್ವಜರಂತೆ ಉತ್ತಮ ಚಾರಿತ್ರ್ಯವನ್ನು ಹೊಂದಿರಿ ಎಂದು ಹೇಳಿರುವ ಮಾತು ವೈರಲ್ ಆಗಿದೆ.
ಯೋಗಗುರು ಬಾಬಾ ರಾಮದೇವ್ ಅವರ ಹೇಳಿಕೆಗೆ ಎನ್ಸಿಪಿ (ಎಸ್ಪಿ) ರಾಷ್ಟ್ರೀಯ ವಕ್ತಾರ ನಸೀಮ್ ಸಿದ್ದೀಕಿ ಪ್ರತಿಕ್ರಿಯಿಸಿ, "ನಾನು ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಮೊದಲನೆಯದಾಗಿ, ಭಾರತವು ಹಿಂದೂ ರಾಷ್ಟ್ರವಲ್ಲ. ಭಾರತವು ಎಲ್ಲಾ ಧರ್ಮಗಳಿಗೆ ಸಮಾನ ಗೌರವ ನೀಡುವ ತತ್ವದ ಮೇಲೆ ನಿರ್ಮಿತವಾದ ಜಾತ್ಯತೀತ ರಾಷ್ಟ್ರವಾಗಿದೆ. ಪ್ರತಿಯೊಬ್ಬರಿಗೂ ತಮಗೆ ಇಷ್ಟವಾದ ಉಡುಪು ಧರಿಸುವ, ತಮ್ಮ ಧರ್ಮವನ್ನು ಆಚರಿಸುವ ಹಾಗೂ ಧಾರ್ಮಿಕ ಸಂಪ್ರದಾಯಗಳನ್ನು ಅನುಸರಿಸುವ ಸಂಪೂರ್ಣ ಸ್ವಾತಂತ್ರ್ಯವಿದೆ. ಇಂತಹ ಹೇಳಿಕೆಗಳು ದೇಶದ ಏಕತೆ ಮತ್ತು ಅಖಂಡತೆಗೆ ಗಂಭೀರ ಅಪಾಯವನ್ನುಂಟು ಮಾಡುತ್ತವೆ. ದೇಶದಲ್ಲಿ ಸಾಮರಸ್ಯ ಮತ್ತು ಸಹೋದರತ್ವ ನೆಲೆಸಿರಬೇಕು ಎಂಬುದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ ಎಂದರು.
ರಾಮದೇವ್ ಅವರ ಹೇಳಿಕೆಗೆ ಜಮಿಯತ್ ಉಲಮಾ-ಎ-ಹಿಂದ್ ಸೇರಿದಂತೆ ಹಲವು ಇಸ್ಲಾಮಿಕ್ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಸಂಘಟನೆಯ ನಾಯಕರು ರಾಮದೇವ್ ಅವರಿಗೆ ಇಂತಹ ಹೇಳಿಕೆ ನೀಡುವ ಅಧಿಕಾರವಿಲ್ಲ ಎಂದು ಟೀಕಿಸಿದ್ದು, ಭಾರತವು ಡಾ. ಬಿ.ಆರ್. ಅಂಬೇಡ್ಕರ್ ರೂಪಿಸಿದ ಸಂವಿಧಾನದ ಆಧಾರದ ಮೇಲೆ ಆಡಳಿತ ನಡೆಸುವ ದೇಶವಾಗಿದೆ ಎಂದು ವಾದಿಸಿದ್ದಾರೆ.
'ಹಿಂದೂ ರಾಷ್ಟ್ರ' ಪರಿಕಲ್ಪನೆ ಕುರಿತು ದೇಶದಲ್ಲಿ ತೀವ್ರ ಭಿನ್ನಾಭಿಪ್ರಾಯಗಳಿದ್ದು, ಬಾಬಾ ಬಾಗೇಶ್ವರ್ ಸೇರಿದಂತೆ ಹಲವು ಪ್ರಮುಖ ಧಾರ್ಮಿಕ ನಾಯಕರು ಹಾಗೂ ಸಾರ್ವಜನಿಕರು ಈ ವಿಷಯದ ಕುರಿತು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.