ಲಖನೌ: ಉತ್ತರ ಪ್ರದೇಶದ ಲಖನೌದಲ್ಲಿರುವ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ (KGMU) ತನ್ನ ಎಲ್ಲಾ ಹಾಸ್ಟೆಲ್ಗಳಲ್ಲಿ ಮಾಂಸಾಹಾರ ತಯಾರಿಕೆಯನ್ನು ನಿಷೇಧಿಸಿದೆ. ಆದರೆ ಹೊರಗಿನಿಂದ ಅಂತಹ ವಸ್ತುಗಳನ್ನು ಆರ್ಡರ್ ಗೆ ಯಾವುದೇ ನಿಷೇಧ ಹಾಕಿಲ್ಲ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
KGMU ಹಾಸ್ಟೆಲ್ಗಳಲ್ಲಿ ಮಾಂಸಾಹಾರಿ ಊಟ ತಯಾರಿಕೆ ಬಗ್ಗೆ ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಕಳವಳ ವ್ಯಕ್ತಪಡಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಪಟೇಲ್ ಕೆಜಿಎಂಯುನ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಆನಂದಿ ಬೆನ್ ಪಟೇಲ್, ಕ್ಯಾಂಪಸ್ನಲ್ಲಿರುವ ಮೂರು ಹಾಸ್ಟೆಲ್ಗಳಲ್ಲಿ ನಿರ್ದಿಷ್ಟವಾಗಿ ಮಾಂಸಾಹಾರಿ ಊಟ ತಯಾರಿಕೆ ಬಗ್ಗೆ ತಿಳಿದುಬಂದಿದೆ ಎಂದು ತಮ್ಮ ಭಾಷಣದಲ್ಲಿ ಹೇಳಿದ್ದರು.
ಹಾಸ್ಟೆಲ್ ಮೆಸ್ ಮಾಂಸಾಹಾರಿ ಊಟ ಒದಗಿಸದಿದ್ದರೂ, ಕ್ಯಾಂಪಸ್ನಲ್ಲಿರುವ ಅಥವಾ ಹಾಸ್ಟೆಲ್ಗಳಲ್ಲಿರುವ ವಿದ್ಯಾರ್ಥಿಗಳು ಅಂತಹ ಊಟ ತಯಾರಿಸಿದ್ರೆ ಅದರ ಬಗ್ಗೆ ವಿಶ್ವವಿದ್ಯಾಲಯ ಪರಿಶೀಲಿಸುತ್ತದೆ ಎಂದು ಅಧಿಕಾರಿಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಕೆಜಿಎಂಯುನಲ್ಲಿ ಮಾಂಸಾಹಾರಿ ಆಹಾರ ತಯಾರಿಸಲಾಗುವುದಿಲ್ಲ. ಕ್ಯಾಂಪಸ್ ಮತ್ತು ಹಾಸ್ಟೆಲ್ಗಳಲ್ಲಿ ಮೆಸ್ ಸೇವೆಗಳಿಗಾಗಿ ಟೆಂಡರ್ಗಳನ್ನು ಕರೆಯಲಾಗುತ್ತದೆ. ಮೆನು ನಿಗದಿಪಡಿಸಲಾಗಿದೆ ಮತ್ತು ಮಾಂಸಾಹಾರಿ ಊಟ ಇರಲ್ಲ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೊಟ್ಟೆ ಕೂಡಾ ಹಾಸ್ಟೆಲ್ ಮೆನುವಿನ ಭಾಗವಲ್ಲ ಮತ್ತು ಕ್ಯಾಂಪಸ್ನಲ್ಲಿರುವ ಎಲ್ಲರೂ ಇದನ್ನು ಒಪ್ಪುವುದಿಲ್ಲ ಎಂದು ಕೆಜಿಎಂಯು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಮಧ್ಯೆ "ನಾವು ವೈದ್ಯಕೀಯ ವಿಶ್ವವಿದ್ಯಾಲಯವಲ್ಲವೇ? ಮೊಟ್ಟೆ ತಿನ್ನುವುದರಲ್ಲಿ ಸಮಸ್ಯೆಯಿಲ್ಲದ ರೋಗಿಗಳಿಗೆ ವೈದ್ಯರು ಮೊಟ್ಟೆ ತಿನ್ನಲು ಶಿಫಾರಸ್ಸು ಮಾಡುವುದನ್ನು ನಿಲ್ಲಿಸಬೇಕೇ? ಅಖಿಲ ಭಾರತವನ್ನು ಪ್ರತಿನಿಧಿಸುವ ವಿದ್ಯಾರ್ಥಿಗಳ ಆದ್ಯತೆಗಳನ್ನು ನಿರ್ಲಕ್ಷಿಸಿ ನಾವು ಆಹಾರ ಪದ್ಧತಿಗಳನ್ನು ನಿರ್ಬಂಧಿಸುತ್ತಿಲ್ಲವೇ ಎಂದು ಎಂದು ಹಿರಿಯ ಅಧ್ಯಾಪಕ ಸದಸ್ಯರೊಬ್ಬರು ಪ್ರಶ್ನಿಸಿದ್ದಾರೆ.
ರಾಜ್ಯಪಾಲರು ಎತ್ತಿದ ಸಮಸ್ಯೆಗಳನ್ನು ಪರಿಹರಿಸಲು ಕೆಜಿಎಂಯು ಕುಲಪತಿ. ಡಾ. ಸೋನಿಯಾ ನಿತ್ಯಾನಂದ್ ಕಾರ್ಯಪಡೆಯೊಂದನ್ನು ರಚಿಸಿದ್ದಾರೆ ಎಂದು ಕೆಜಿಎಂಯು ವಕ್ತಾರ ಡಾ. ಕುಮಾರ್ ಶಾಂತನು ತಿಳಿಸಿದ್ದಾರೆ.
ಕೆಜಿಎಂಯು ಆಡಳಿತವು ನಡೆಸುವ 18 ಮೆಸ್ಗಳಲ್ಲಿ ಮಾಂಸಾಹಾರ ಬೇಯಿಸುವುದಿಲ್ಲ ಅಥವಾ ಬಡಿಸುವುದಿಲ್ಲ. ಎರಡು ಅಥವಾ ಮೂರು ಖಾಸಗಿ ಮೆಸ್ಗಳಿವೆ, ಇವುಗಳನ್ನು ಸಹಕಾರಿ ಆಧಾರದ ಮೇಲೆ ವಿದ್ಯಾರ್ಥಿಗಳ ಸಮೂಹವು ನಡೆಸುತ್ತದೆ, ಅಲ್ಲಿ ಮಾಂಸಾಹಾರ ತಯಾರಿಸಲಾಗುತ್ತದೆ. ಆದಾಗ್ಯೂ, ರಾಜ್ಯಪಾಲರ ಹೇಳಿಕೆಗಳ ನಂತರ ಮಾಂಸಾಹಾರಿ ಆಹಾರ ತಯಾರಿಕೆ ತಪ್ಪಿಸಲು ಅವರಿಗೆ ಕಟ್ಟುನಿಟ್ಟಿನ ಸಲಹೆಯನ್ನು ನೀಡಲಾಗಿದೆ.
ಆದಾಗ್ಯೂ, ವಿದ್ಯಾರ್ಥಿಗಳು ಮತ್ತು ಹಾಸ್ಟೆಲ್ ಬೋರ್ಡಿಂಗ್ಗಳು ಹೊರಗಿನಿಂದ ಮಾಂಸಾಹಾರಿ ಊಟ ಆರ್ಡರ್ ಮಾಡುವುದಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.