ರಾಹುಲ್ ಗಾಂಧಿ - ಮಲ್ಲಿಕಾರ್ಜುನ ಖರ್ಗೆ 
ದೇಶ

ರಾಮ ಮಂದಿರ ದೇಣಿಗೆ 'ಕಳ್ಳತನ' ಪ್ರಕರಣ: ಪ್ರಧಾನಿ ನರೇಂದ್ರ ಮೋದಿಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಪತ್ರ!

ಕಷ್ಟಪಟ್ಟು ಗಳಿಸಿದ ಹಣವನ್ನು ಶ್ರದ್ಧಾಭಕ್ತಿಯಿಂದ ದೇಣಿಗೆಯಾಗಿ ನೀಡಿದ ಲಕ್ಷಾಂತರ ಭಕ್ತರು, ಈ 'ಕಳ್ಳತನದಿಂದಾಗಿ ತಮಗೆ ದ್ರೋಹವಾಗಿದೆ' ಎಂದು ಭಾವಿಸುತ್ತಿದ್ದಾರೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ನವದೆಹಲಿ: ಅಯೋಧ್ಯೆಯ ರಾಮ ಮಂದಿರಕ್ಕೆ ನೀಡಲಾದ ದೇಣಿಗೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಕಷ್ಟಪಟ್ಟು ಗಳಿಸಿದ ಹಣವನ್ನು ಶ್ರದ್ಧಾಭಕ್ತಿಯಿಂದ ದೇಣಿಗೆಯಾಗಿ ನೀಡಿದ ಲಕ್ಷಾಂತರ ಭಕ್ತರು, ಈ 'ಕಳ್ಳತನದಿಂದಾಗಿ ತಮಗೆ ದ್ರೋಹವಾಗಿದೆ' ಎಂದು ಭಾವಿಸುತ್ತಿದ್ದಾರೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಈ ವಿಷಯದ ಬಗ್ಗೆ ಪ್ರಧಾನಿಯವರ ಮೌನ ಸ್ವೀಕಾರಾರ್ಹವಲ್ಲ. ಹೊಣೆಗಾರಿಕೆ ಮತ್ತು ಮರುಪಾವತಿಯನ್ನು ಖಚಿತಪಡಿಸಿಕೊಳ್ಳುವಂತೆ ಸಂಸತ್ತಿನ ಉಭಯ ಸದನಗಳಲ್ಲಿ ವಿರೋಧ ಪಕ್ಷದ ನಾಯಕರು ಒತ್ತಾಯಿಸಿದ್ದಾರೆ.

'ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಹಣಕಾಸು ವ್ಯವಹಾರಗಳ ಬಗ್ಗೆ ಸ್ವತಂತ್ರ ಮತ್ತು ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಪ್ರಧಾನಿ ಮೋದಿಗೆ ನಮ್ಮ ಜಂಟಿ ಪತ್ರ'. 'ಶ್ರದ್ಧೆ, ಭಕ್ತಿ ಮತ್ತು ನಂಬಿಕೆಯಿಂದ ಕಷ್ಟಪಟ್ಟು ಗಳಿಸಿದ ಹಣವನ್ನು ದೇಣಿಗೆಯಾಗಿ ನೀಡಿದ ಲಕ್ಷಾಂತರ ಭಕ್ತರು ಈ ಕಳ್ಳತನದಿಂದಾಗಿ ತಾವು ವಂಚನೆಗೊಳಗಾದಂತೆ ಭಾವಿಸುತ್ತಿದ್ದಾರೆ' ಎಂದು ಖರ್ಗೆ ಭಾನುವಾರ 'ಎಕ್ಸ್'ನಲ್ಲಿ ಪೋಸ್ಟ್ ಒಂದರ ಮೂಲಕ ತಿಳಿಸಿದ್ದಾರೆ; ಅವರು ಇದೇ ವೇಳೆ ಜುಲೈ 18ರ ದಿನಾಂಕವಿರುವ ಪತ್ರವನ್ನೂ ಹಂಚಿಕೊಂಡಿದ್ದಾರೆ.

ರಾಮ ಮಂದಿರಕ್ಕೆ ನೀಡಲಾದ ದೇಣಿಗೆ ಕಳ್ಳತನದ ಆರೋಪವು ಜೂನ್‌ನ ಮೊದಲ ವಾರದಲ್ಲಿ ಬೆಳಕಿಗೆ ಬಂದಿತ್ತು. ಜೂನ್ 25 ರಂದು, ಟ್ರಸ್ಟ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಈ ಪ್ರಕರಣದಲ್ಲಿ ಎಫ್‌ಐಆರ್ (FIR) ದಾಖಲಿಸಿ, ಎಂಟು ಮಂದಿಯನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ರಸ್ಟ್‌ನ ಇಬ್ಬರು ಹಿರಿಯ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಸಂಸತ್ತಿನಲ್ಲಿ ಟ್ರಸ್ಟ್ ರಚನೆಯನ್ನು ಪ್ರಧಾನಿ ಘೋಷಿಸಿದ್ದರೂ, ಅದರ ಸದಸ್ಯರನ್ನು ಸಂಪೂರ್ಣವಾಗಿ ಅವರ ಸರ್ಕಾರವೇ ನೇಮಿಸಿದೆ ಎಂದು ರಾಹುಲ್ ಗಾಂಧಿ ಮತ್ತು ಖರ್ಗೆ ಇಬ್ಬರೂ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಟ್ರಸ್ಟ್‌ನ ಸದಸ್ಯರು ಆರ್‌ಎಸ್‌ಎಸ್, ವಿಎಚ್‌ಪಿ ಮತ್ತು ಅವುಗಳ ಅಂಗಸಂಸ್ಥೆಗಳೊಂದಿಗೆ ನಂಟು ಹೊಂದಿದ್ದಾರೆ ಎಂಬುದು ಸಾರ್ವಜನಿಕರಿಗೆ ತಿಳಿದಿರುವ ವಿಷಯ. ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿಯೂ ಅವರ ಆಪ್ತ ಸಹವರ್ತಿಯಾಗಿದ್ದರು ಎಂದು ಕಾಂಗ್ರೆಸ್ ನಾಯಕರು ತಿಳಿಸಿದರು.

'ಇಂತಹ ಅಪರಾಧದ ವಿಷಯದಲ್ಲಿ ನಿಮ್ಮ ಈಗಿನ ಮೌನ ಸ್ವೀಕಾರಾರ್ಹವಲ್ಲ. ಹೊಣೆಗಾರಿಕೆಯನ್ನು ಖಚಿತಪಡಿಸುವುದು ಮತ್ತು ಪರಿಹಾರವನ್ನು ಒದಗಿಸುವುದು ನಿಮ್ಮ ಕರ್ತವ್ಯ. ನಗದು, ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಎಲ್ಲ ಕಾಣಿಕೆಗಳ ನಿರ್ವಹಣೆ ಹಾಗೂ ಟ್ರಸ್ಟ್‌ನ ಆರ್ಥಿಕ ವ್ಯವಹಾರಗಳ ಕುರಿತು ತಕ್ಷಣವೇ ಸ್ವತಂತ್ರ ಮತ್ತು ಸಮಗ್ರ ತನಿಖೆಗೆ ಆದೇಶಿಸುವಂತೆ ನಾವು ನಿಮ್ಮನ್ನು ಒತ್ತಾಯಿಸುತ್ತೇವೆ' ಎಂದು ಅವರು ಹೇಳಿದರು.

ತಮ್ಮ ಕಾಣಿಕೆಗಳನ್ನು ಹೇಗೆ ಬಳಸಲಾಗಿದೆ ಎಂಬುದು ಪ್ರತಿಯೊಬ್ಬ ಭಕ್ತರಿಗೂ ತಿಳಿಯುವಂತಾಗಲು, ತನಿಖಾ ವರದಿಯ ಅಂಶಗಳು ಮತ್ತು ಟ್ರಸ್ಟ್‌ನ ಲೆಕ್ಕಪತ್ರಗಳನ್ನು ಸಾರ್ವಜನಿಕಗೊಳಿಸಬೇಕು. ಹುದ್ದೆ ಅಥವಾ ಪ್ರಭಾವದ ಲೆಕ್ಕಿಸದೆ, ಇದಕ್ಕೆ ಹೊಣೆಗಾರರಾದ ಎಲ್ಲರನ್ನೂ ಜವಾಬ್ದಾರರನ್ನಾಗಿಸಬೇಕು. ನೀವು ಎಷ್ಟು ಪಾರದರ್ಶಕವಾಗಿ ಮತ್ತು ತ್ವರಿತವಾಗಿ ಕ್ರಮ ಕೈಗೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ಸರ್ಕಾರ ಮತ್ತು ಟ್ರಸ್ಟ್‌ನ ವಿಶ್ವಾಸಾರ್ಹತೆ ಅವಲಂಬಿತವಾಗಿದೆ. ಭಾರತದ ಜನರು ಇದನ್ನು ಗಮನಿಸುತ್ತಿದ್ದಾರೆ. ಜೈ ಹಿಂದ್!' ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಈ ಕುರಿತ ಪತ್ರವನ್ನು ಹಂಚಿಕೊಂಡ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಪ್ರಧಾನಿಯವರು ಈ ವಿಷಯದ ಬಗ್ಗೆ ಮೌನ ಮುರಿಯಬೇಕು. ಅಯೋಧ್ಯೆಯಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸಂಬಂಧಿಸಿದ ಚಂದಾ ಚೋರಿ ಅಸ್ಥಾ ಧೋಕಾ ಕುರಿತು ಇಬ್ಬರು ಎಲ್‌ಒಪಿಗಳು ಪ್ರಧಾನಿಗೆ ಪತ್ರ ಬರೆದಿರುವುದು ಸೂಕ್ತವಾಗಿದೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಕ್ರೋಚ್​ಗಳ 'ಸಂಸತ್ ಚಲೋ'ಗೆ ಮಣಿದ ಮೋದಿ? ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸಾಧ್ಯತೆ; CJP ಜತೆ ಜೆಪಿ ನಡ್ಡಾ ಮಾತುಕತೆ!

Jantar Mantar protest: 'ಸಂಸತ್ ಚಲೋ' ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೊಲೀಸರ ಲಾಠಿಚಾರ್ಜ್! Video

'ಸಂಸತ್ ಚಲೋ' ನಂತರವೂ ಉಪವಾಸ ಅಂತ್ಯಗೊಳಿಸಲ್ಲ; ಸತ್ಯಾಗ್ರಹ ಹಿಂಪಡೆಯಲು 3 ಷರತ್ತು ವಿಧಿಸಿದ ವಾಂಗ್‌ಚುಕ್!

'ಆ ಪಾತ್ರ ನಿರ್ವಹಿಸಿದ ರೀತಿ...': ನಟಿ ರಕುಲ್ ಪ್ರೀತ್ ಸಿಂಗ್ ಅಭಿನಯಕ್ಕೆ ರಾಕಿಂಗ್‌ ಸ್ಟಾರ್‌ ಯಶ್ ಫಿದಾ!

'ಸದನದಲ್ಲೇ ಮೂಳೆ ಮುರಿಯುತ್ತೇವೆ': ತಮಿಳುನಾಡು ಸಿಎಂ ವಿಜಯ್‌ಗೆ ಬೆದರಿಕೆ ಹಾಕಿದ ಡಿಎಂಕೆ ಶಾಸಕನ ಬಂಧನ