ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (CJP) ಸೋಮವಾರ ನಡೆಸಿದ 'ಸಂಸತ್ ಚಲೋ' ಪ್ರತಿಭಟನೆ ವೇಳೆ ಬರ್ಗರ್ ತಿನ್ನುತ್ತಿರುವ ವಿಡಿಯೋಗಳು ವೈರಲ್ ಆದ ನಂತರ ಸಿಜೆಪಿ ವಕ್ತಾರ ಹುದ್ದೆಯಿಂದ ವಿಜೇತ ದಹಿಯಾ ಅವರನ್ನು ವಜಾಗೊಳಿಸಲಾಗಿದೆ. ಎಲ್ಲಾ ಅಧಿಕೃತ ಕರ್ತವ್ಯಗಳಿಂದ ಮುಕ್ತಗೊಳಿಸಲಾಗಿದೆ.
ಸೋಮವಾರದ ಪ್ರತಿಭಟನೆಯ ಸಂದರ್ಭದಲ್ಲಿ ದಹಿಯಾ ಬರ್ಗರ್ ತಿನ್ನುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿವೆ. ದಹಿಯಾ ಅವರ ಅಸಡ್ಡೆಯ ವರ್ತನೆಯನ್ನು ಬಲವಾಗಿ ಖಂಡಿಸುವುದಾಗಿ ಸಿಜೆಪಿ ಹೇಳಿಕೆಯಲ್ಲಿ ತಿಳಿಸಿದೆ.
ಇಂತಹ ನಡವಳಿಕೆ ಸ್ವೀಕಾರಾರ್ಹವಲ್ಲ, ಇದು ಸಂಪೂರ್ಣ ವಿವೇಚನೆ ಕೊರತೆಯನ್ನು ತೋರಿಸುತ್ತದೆ. ನಮ್ಮ ಹೋರಾಟದ ಮೌಲ್ಯಗಳು ಹಾಗೂ ತತ್ವಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಪಕ್ಷ ಹೇಳಿದೆ.
ಸಿಜೆಪಿಯ ಯುವ ವಿದ್ಯಾರ್ಥಿಗಳು ಸಂಸತ್ತಿನತ್ತ ಪ್ರತಿಭಟನೆಯಲ್ಲಿ ತೆರಳುತ್ತಿದ್ದಾಗ, ಪೊಲೀಸರಿಂದ ಲಾಠಿ ರುಚಿ ಎದುರಿಸುತ್ತಿದ್ದಾಗ, ದಹಿಯಾ ಬರ್ಗರ್ ತಿನ್ನುತ್ತಿರುವ ವಿಡಿಯೋಗಳು ಆನ್ಲೈನ್ನಲ್ಲಿ ಟೀಕೆಗೆ ಗುರಿಯಾಗಿತ್ತು.
ಈ ಸಂಬಂಧ ಮಂಗಳವಾರ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ದಹಿಯಾ, ನಾನು ಯಾರಿಗೂ ಹೊಣೆಗಾರನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. "ನಾನು ಯಾಕೆ ಬರ್ಗರ್ ತಿಂದೆ? ಇದೀಗ ಇದೊಂದು ದೊಡ್ಡ ವಿಷಯವಾಗಿದೆ. ಹಾಗಾದರೆ, ಮನುಷ್ಯರು ಬರ್ಗರ್ ಯಾಕೆ ತಿನ್ನುತ್ತಾರೆ? ಅವರಿಗೆ ಹಸಿವಾಗಿರುತ್ತೆ ಇಲ್ಲವೇ ಬರ್ಗರ್ ತಿನ್ನಬೇಕೆನಿಸಿರಬಹುದು. ಅಷ್ಟೇ ಎಂದು ವಿಡಿಯೋದಲ್ಲಿ ಹೇಳುತ್ತಾ ಬರ್ಗರ್ ತಿಂದಿದ್ದಾರೆ.
ನನ್ನನ್ನು ಯಾಕೆ ಪ್ರಶ್ನಿಸಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಏನೇ ಆಗಲಿ, ನೀವು ನನ್ನನ್ನು ಇಷ್ಟೊಂದು ಪ್ರಶ್ನಿಸುತ್ತಿದ್ದೀರಿ... ಅಂದರೆ, ಪ್ರತಿಭಟನಾಕಾರನಾಗಿರುವುದು ಒಂದು ಉದ್ಯೋಗವೇ? ಹೌದೇ? ಈ ಹುದ್ದೆಗೆ ನೀವು ನನ್ನನ್ನು ಆಯ್ಕೆ ಮಾಡಿದ್ದೀರಾ? ಹೋಗಿ ಸರ್ಕಾರವನ್ನು ಪ್ರಶ್ನಿಸಿ! ನಿಮ್ಮ ಈ ಅರ್ಥಹೀನ ಆಲೋಚನೆಗಳು... ನಾನು ಇದರಲ್ಲಿ ಸಿಕ್ಕಿಹಾಕಿಕೊಳ್ಳಲು ಬಯಸುವುದಿಲ್ಲ, ನಿಮ್ಮಂತಹ ಮೂರ್ಖರನ್ನು ಮೆಚ್ಚಿಸಲು ರಾಜಕೀಯಕ್ಕೆ ಬರಲು ನಾನು ಇಷ್ಟಪಡುವುದಿಲ್ಲ ಎಂದು ಅವರು ಹೇಳಿದ್ದಾರೆ. ನಾನು ಏನೇ ಮಾಡುತ್ತಿದ್ದರೂ ದೇಶಕ್ಕಾಗಿ ಮಾಡುತ್ತಿದ್ದೇನೆ, ನನ್ನ ಸ್ವಂತ ಇಚ್ಛೆಯಿಂದ ಮಾಡುತ್ತಿದ್ದೇನೆ ಮತ್ತು ನಾನು ಯಾರಿಗೂ ಹೊಣೆಗಾರನಲ್ಲ ಮತ್ತು ನಾನು ಬರ್ಗರ್ ತಿನ್ನುತ್ತೇನೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
NEET ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ತಾಂತ್ರಿಕ ದೋಷಗಳಂತಹ ಪ್ರಮುಖ ಪರೀಕ್ಷೆಗಳಲ್ಲಿನ ಅಕ್ರಮಗಳ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸಂಸತ್ತಿನತ್ತ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ದೆಹಲಿ ಪೊಲೀಸರು ಸೋಮವಾರ ಅಶ್ರುವಾಯು ಪ್ರಯೋಗಿಸಿದರು ಮತ್ತು ಲಾಠಿಚಾರ್ಜ್ ನಡೆಸಿದ್ದರು.