ನವದೆಹಲಿ: ಉಕ್ರೇನ್ ಕರಾವಳಿಯ ಸರಕು ಹಡಗಿನ ಮೇಲಿನ ದಾಳಿಯಲ್ಲಿ ನಾಲ್ವರು ಭಾರತೀಯರು ಮೃತಪಟ್ಟ ಹಿನ್ನೆಲೆಯಲ್ಲಿ ಭಾರತ ಸರ್ಕಾರ ರಷ್ಯಾದ ರಾಯಭಾರಿಯನ್ನು ಕರೆಸಿ, ತೀವ್ರ ಪ್ರತಿಭಟನೆ ದಾಖಲಿಸಿದೆ.
ನವದೆಹಲಿಯಲ್ಲಿರುವ ರಷ್ಯಾದ ಚಾರ್ಜ್ ಡಿ'ಅಫೇರ್ಸ್ (CDA) ವ್ಲಾಡಿಮಿರ್ ಲಡಾನೋವ್ ಅವರನ್ನು ವಿದೇಶಾಂಗ ಸಚಿವಾಲಯಕ್ಕೆ ಕರೆಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಭಾರತೀಯರ ಸಾವಿಗೆ ಕಾರಣವಾದ ಸರಕು ಸಾಗಣೆ ಹಡಗಿನ ಮೇಲಿನ ದಾಳಿಯು ಸ್ವೀಕಾರಾರ್ಹವಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರಷ್ಯಾದ ರಾಜತಾಂತ್ರಿಕರಿಗೆ ತಿಳಿಸಿದೆ.
ಇಂತಹ ದಾಳಿಗಳು ಅಂತರರಾಷ್ಟ್ರೀಯ ಸಮುದ್ರ ವ್ಯಾಪಾರದ ಸುರಕ್ಷತೆ, ಭದ್ರತೆ ಮತ್ತು ಸ್ಥಿರತೆಯನ್ನು ಹಾಳುಮಾಡುತ್ತವೆ" ಎಂದು ಸಚಿವಾಲಯ ಹೇಳಿದೆ.
ನಿರಪರಾಧ ನಾಗರಿಕರ ಸಾವಿಗೆ ಕಾರಣವಾಗುವ ರೀತಿಯಲ್ಲಿ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸುವುದು ಯಾವುದೇ ಕಾರಣಕ್ಕೂ ಒಪ್ಪಲಾಗದು. ಈ ಕುರಿತು ಭಾರತದ ತೀವ್ರ ಕಳವಳವನ್ನು ತಮ್ಮ ಸರ್ಕಾರಕ್ಕೆ ತಲುಪಿಸುವಂತೆ ರಷ್ಯಾ ರಾಜತಾಂತ್ರಿಕರಿಗೆ ಮನವಿ ಮಾಡಲಾಗಿದೆ ಎಂದು ಎಂಇಎ ಪ್ರಕಟಣೆಯಲ್ಲಿ ತಿಳಿಸಿದೆ.
ಜುಲೈ 19ರಂದು ಗಿನಿಯಾ-ಬಿಸ್ಸಾವ್ ಧ್ವಜ ಹೊಂದಿದ್ದ MV Golden Leo ಹಡಗು ಉಕ್ರೇನ್ನ ಒಡೆಸಾ ಬಂದರಿನಿಂದ ಧಾನ್ಯ ಸಾಗಾಟ ಮಾಡಿ ಹೊರಡುತ್ತಿದ್ದ ವೇಳೆ ಕ್ಷಿಪಣಿ ದಾಳಿಗೆ ಒಳಗಾಗಿತ್ತು. ಹಡಗಿನಲ್ಲಿ ಒಟ್ಟು 17 ಸಿಬ್ಬಂದಿ ಇದ್ದು, ಅವರಲ್ಲಿ ಐವರು ಭಾರತೀಯರಾಗಿದ್ದರು.
ಉಕ್ರೇನ್ನ ಸಮುದ್ರ ಮಾರ್ಗದಲ್ಲಿ ಸಂಚರಿಸುತ್ತಿದ್ದ ನಾಗರಿಕ ವಾಣಿಜ್ಯ ಹಡಗಿನ ಮೇಲೆ ರಷ್ಯಾ ದಾಳಿ ನಡೆಸಿದ್ದು, ಸಿಬ್ಬಂದಿಯಲ್ಲಿ ಭಾರತ ಮತ್ತು ಸಿರಿಯಾ ಪ್ರಜೆಗಳೂ ಇದ್ದರು ಎಂದು ಉಕ್ರೇನ್ ವಿದೇಶಾಂಗ ಸಚಿವ ಆಂಡ್ರಿ ಸಿಬಿಹಾ ಅವರು ತಿಳಿಸಿದ್ದಾರೆ.
ನಾಲ್ವರು ಭಾರತೀಯರ ದುರ್ಮರಣ, ಒಬ್ಬರ ಸ್ಥಿತಿ ಗಂಭೀರ
ವಿದೇಶಾಂಗ ಸಚಿವಾಲಯದ ಮಾಹಿತಿ ಪ್ರಕಾರ, ದಾಳಿಯಲ್ಲಿ ನಾಲ್ವರು ಭಾರತೀಯರು ದುರ್ಮರಣಕ್ಕೀಡಾಗಿದ್ದು, ಮತ್ತೋರ್ವ ಭಾರತೀಯ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದು, ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲ ರೀತಿಯ ನೆರವು ನೀಡಲು ಕ್ರಮ ಕೈಗೊಳ್ಳುತ್ತಿದೆ ಎಂದು ಎಂಇಎ ತಿಳಿಸಿದೆ.
ಈ ನಡುವೆ ಕೇಂದ್ಪ ಸರ್ಕಾರ ಮೃತಪಟ್ಟ ಭಾರತೀಯರ ಕುಟುಂಬಗಳಿಗೆ ಆಳವಾದ ಸಂತಾಪ ಸೂಚಿಸಿದ್ದು, ಗಾಯಗೊಂಡಿರುವ ಭಾರತೀಯ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದೆ.
ಭಾರತ, ವಾಣಿಜ್ಯ ಹಡಗುಗಳನ್ನು ಗುರಿಯಾಗಿಸುವುದು, ನಿರಪರಾಧ ಸಿಬ್ಬಂದಿಯ ಜೀವಕ್ಕೆ ಅಪಾಯ ಉಂಟುಮಾಡುವುದು ಹಾಗೂ ಅಂತರರಾಷ್ಟ್ರೀಯ ನೌಕಾಯಾನ ಮತ್ತು ವ್ಯಾಪಾರಕ್ಕೆ ಅಡ್ಡಿಯಾಗುವ ಯಾವುದೇ ಕ್ರಮವನ್ನು ತೀವ್ರವಾಗಿ ಖಂಡಿಸುವುದಾಗಿ ಪುನರುಚ್ಚರಿಸಿದೆ.