ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕಾಕೂರೋಚ್ ಜನತಾ ಪಾರ್ಟಿ (CJP) ಹಮ್ಮಿಕೊಂಡಿರುವ ‘ಚಲೋ ಸಂಸದ್’ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರ ಗೃಹ ಸಚಿವಾಲಯವು ತಕ್ಷಣವೇ ಹೆಚ್ಚುವರಿ 20 ಸಿಆರ್ಪಿಎಫ್ (CRPF) ತುಕಡಿಗಳನ್ನು ದೆಹಲಿಗೆ ರವಾನಿಸಿದೆ.
ಮಂಗಳವಾರ ರಾತ್ರಿ ಕೇಂದ್ರ ಗೃಹ ಸಚಿವಾಲಯ ಈ ಆದೇಶ ಹೊರಡಿಸಿದ್ದು, ಆದೇಶ ಬೆನ್ನಲ್ಲೇ ಸಿಆರ್ಪಿಎಫ್ ಸಿಬ್ಬಂದಿಯನ್ನು ಕೋಲ್ಕತ್ತಾದಿಂದ ವಿಮಾನದ ಮೂಲಕ ದೆಹಲಿಗೆ ಕಳುಹಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ತಿಳಿದುಬಂದಿದೆ.
ಭದ್ರತಾ ಇಲಾಖೆಯ ಮೂಲಗಳ ಪ್ರಕಾರ, ಸಿಜೆಪಿ ಪ್ರತಿಭಟನೆಗಳು, ವಿವಿಧ ರಾಜಕೀಯ ಪಕ್ಷಗಳ ಧರಣಿ ಹಾಗೂ ಜುಲೈ 20ರಿಂದ ಆರಂಭವಾಗಿರುವ ಸಂಸತ್ತಿನ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ಹೆಚ್ಚುವರಿ ಪಡೆ ನಿಯೋಜಿಸಲಾಗುತ್ತಿದೆ.
ದೆಹಲಿಗೆ ಕಳುಹಿಸಲಾಗುತ್ತಿರುವ 20 ಸಿಆರ್ಪಿಎಫ್ ತುಕಡಿಗಳಲ್ಲಿ ಪ್ರತಿಯೊಂದರಲ್ಲಿ ಸುಮಾರು 100 ಸಿಬ್ಬಂದಿ ಇದ್ದಾರೆ. ಇವರು ಈ ವರ್ಷದ ಆರಂಭದಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ವೇಳೆ ಅಲ್ಲಿ ನಿಯೋಜಿತರಾಗಿದ್ದರು. ನಂತರ ರಾಜ್ಯ ಸರ್ಕಾರದ ಮನವಿಯ ಮೇರೆಗೆ ಅಲ್ಲಿಯೇ ಉಳಿದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ಪ್ರತಿಭಟನೆಗಳ ವೇಳೆ ಹಲವು ಕಡೆ ಹಿಂಸಾತ್ಮಕ ಘರ್ಷಣೆಗಳು ನಡೆದ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯ ಎದುರಾಗಿದೆ. ಈ ಕಾರಣದಿಂದಲೇ ಹೆಚ್ಚುವರಿ ಸಿಆರ್ಪಿಎಫ್ ಪಡೆಯನ್ನು ದೆಹಲಿಗೆ ಕಳುಹಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಹೊಸ ನಿಯೋಜನೆಗೂ ಮುನ್ನವೇ ಕೇಂದ್ರ ಸರ್ಕಾರ ದೆಹಲಿ ಪೊಲೀಸರಿಗೆ ನೆರವಾಗಲು ಸುಮಾರು 30 ತುಕಡಿ ಸಿಆರ್ಪಿಎಫ್ ಹಾಗೂ ವಿಶೇಷ ಗಲಭೆ ನಿಯಂತ್ರಣ ಪಡೆ 'ರ್ಯಾಪಿಡ್ ಆಕ್ಷನ್ ಫೋರ್ಸ್' (RAF) ಅನ್ನು ನಿಯೋಜಿಸಿತ್ತು. ಇದೀಗ ಹೆಚ್ಚುವರಿಯಾಗಿ 20 ತುಕಡಿಗಳನ್ನು ರವಾನಿಸುವ ಮೂಲಕ ರಾಜಧಾನಿಯಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ಕೇಂದ್ರ ಸರ್ಕಾರದ ಈ ಕ್ರಮದಿಂದ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಸಂಸತ್ತಿನ ಅಧಿವೇಶನದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.