ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಭರವಸೆಗೆ ಬಗ್ಗದ 'ಕಾಕ್ರೋಚ್ ಜನತಾ ಪಾರ್ಟಿ' ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆಯನ್ನು ಮುಂದುವರೆಸಿದೆ. ಈ ನಡುವೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಮತ್ತೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರತಿಭಟನಾಕಾರರು ಎಲ್ಲಿ ಹೇಳ್ತಾರೋ ಅಲ್ಲಿಯೇ ಮಾತುಕತೆ ನಡೆಸಲು ಕೇಂದ್ರ ಸಿದ್ಧವಿದೆ ಎಂದು ಕೇಂದ್ರ ಸಚಿವ ಜೀತೇಂದ್ರ ಸಿಂಗ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜೀತೇಂದ್ರ ಸಿಂಗ್, ಪ್ರತಿಭಟನಾಕಾರರು ಕೇಳುವ ಸಮಯವನ್ನು ನೀಡಲು ನಾವು ಸಿದ್ಧರಿದ್ದೇವೆ. ಮಾತುಕತೆಯ ಸಮಯದಲ್ಲಿ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಮತ್ತು ನಾನು ಇಬ್ಬರೂ ಇರುತ್ತೇವೆ. ನನ್ನ ಕಚೇರಿಯಲ್ಲಾಗಲಿ ಅಥವಾ ಜೆ.ಪಿ. ನಡ್ಡಾ ಅವರ ನಿವಾಸದಲ್ಲಾಗಲಿ ಪ್ರತಿಭಟನಾಕಾರರು ಬಯಸುವ ಯಾವುದೇ ಸ್ಥಳದಲ್ಲಿ ಭೇಟಿಯಾಗಿ ಮಾತುಕತೆ ನಡೆಸಲು ನಾವು ಸಿದ್ಧರಿದ್ದೇವೆ ಎಂದರು.
ಇಂದಿನಿಂದ ನಾಲ್ಕು ಬಾರಿ ನಿಮ್ಮನ್ನು ಸಂಪರ್ಕಿಸಲು ನಾವು ಪ್ರಯತ್ನಿಸಿದ್ದೇವೆ. ಮಾತುಕತೆ ನಡೆಸುವ ಸಲುವಾಗಿ ನಮ್ಮೊಂದಿಗೆ ಕುಳಿತು ಚರ್ಚಿಸಲು ಬರುವಂತೆ ನಾನು ಮತ್ತೊಮ್ಮೆ ನಿಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು.
ಪ್ರತಿಭಟನಾ ಸ್ಥಳದಲ್ಲಿಯೇ ಅಥವಾ ತಟಸ್ಥ ಸ್ಥಳವೊಂದರಲ್ಲಿ ಪ್ರತಿಭಟನೆ ನಡೆಯಬೇಕು ಎಂದು ಸಿಜೆಪಿ (CJP)ಯ ಪಟ್ಟು ಹಿಡಿದಿದ್ದು, ಮಾತುಕತೆಗೆ ಪ್ರಮುಖ ತೊಡಕಾಗಿ ಪರಿಣಮಿಸಿದೆ.
ಇದಕ್ಕೂ ಮುನ್ನಾ ಕೇಂದ್ರ ಸಚಿವ ಜೆ.ಪಿ. ನಡ್ಡಾ 'ಕಾಕ್ರೋಚ್ ಜನತಾ ಪಾರ್ಟಿ'ಯನ್ನು (CJP) ಮಾತುಕತೆಗೆ ಆಹ್ವಾನಿಸಿದ್ದರು, ಆದರೆ ಆ ಪಕ್ಷದ ನಾಯಕರು ಆ ಪ್ರಸ್ತಾವನೆಯನ್ನು ತಿರಸ್ಕರಿಸಿದರು ಎಂದು ಮೂಲಗಳು ತಿಳಿಸಿವೆ. ಬುಧವಾರವೂ ಸಹ ನಡ್ಡಾ ಅವರೊಂದಿಗೆ ಮಾತುಕತೆ ನಡೆಸಲು ಸಿಜೆಪಿಗೆ ಆಹ್ವಾನ ನೀಡಲಾಗಿತ್ತು. ಆದರೆ ಸರ್ಕಾರದೊಂದಿಗೆ ಕೇವಲ ತಟಸ್ಥ ಸ್ಥಳದಲ್ಲಿ ಮಾತ್ರ ಮಾತುಕತೆ ನಡೆಸುವುದಾಗಿ ಹೇಳಿ ಆ ಪಕ್ಷವು ಆಹ್ವಾನವನ್ನು ನಿರಾಕರಿಸಿತ್ತು.
"ಇಂದು ಮಾತುಕತೆಗಾಗಿ ಜೆ.ಪಿ. ನಡ್ಡಾ ಅವರು ಸಿಜೆಪಿಗೆ ಆಹ್ವಾನ ಕಳುಹಿಸಿದ್ದರು, ಆದರೆ ಪ್ರತಿಭಟನಾ ಸ್ಥಳದಲ್ಲಿ ವೇದಿಕೆಯ ಮೇಲಿದ್ದವರು ಆ ಆಹ್ವಾನವನ್ನು ತಿರಸ್ಕರಿಸಿದರು ಎಂದು ಮೂಲವೊಂದು ಪಿಟಿಐಗೆ ತಿಳಿಸಿದೆ.
ನೀಟ್ (NEET) ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಳೆದ ತಿಂಗಳಿನಿಂದ ಜಂತರ್ ಮಂತರ್ನಲ್ಲಿ ಸಿಜೆಪಿ ಪ್ರತಿಭಟನೆ ನಡೆಸುತ್ತಿದೆ.
17 ಮೆಟ್ರೋ ನಿಲ್ದಾಣಗಳು ಬಂದ್: ಈ ಮಧ್ಯೆ ಕಾಕ್ರೋಜ್ ಜನತಾ ಪಾರ್ಟಿ ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿ ಮೆಟ್ರೋ ರೈಲು ನಿಗಮವು (DMRC) ಮುಂದಿನ ಆದೇಶದವರೆಗೆ ಝಂಡೇವಾಲನ್ ಮೆಟ್ರೋ ನಿಲ್ದಾಣವನ್ನು ಮುಚ್ಚಿದೆ. ಇದರೊಂದಿಗೆ ರಾಜಧಾನಿಯಲ್ಲಿ ಮುಚ್ಚಲಾದ ಒಟ್ಟು ಮೆಟ್ರೋ ನಿಲ್ದಾಣಗಳ ಸಂಖ್ಯೆ 17ಕ್ಕೇರಿದೆ.