ಕಾಂಗ್ರೆಸ್ ಪ್ರತಿಭಟನೆ 
ದೇಶ

Parliament Monsoon Session: 5ನೇ ದಿನವೂ ಗದ್ದಲದ ವಾತಾವರಣ; ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪ್ರತಿಪಕ್ಷಗಳ ಪಟ್ಟು, ಕಲಾಪ ಸೋಮವಾರಕ್ಕೆ ಮುಂದೂಡಿಕೆ..!

ಗುರುವಾರ ಸಂಸತ್‌ ದ್ವಾರದ ಬಳಿ ಎನ್‌ಡಿಎ ಹಾಗೂ ಇಂಡಿಯಾ ಮೈತ್ರಿಕೂಟದ ಸಂಸದರು ಪ್ರತ್ಯೇಕ ಪ್ರತಿಭಟನೆ ನಡೆಸಿ ಮುಖಾಮುಖಿಯಾಗಿದ್ದ ಹಿನ್ನೆಲೆಯಲ್ಲಿ, ಶುಕ್ರವಾರವೂ ರಾಜಕೀಯ ಸಂಘರ್ಷ ಮುಂದುವರಿಯಿತು.

ನವದೆಹಲಿ: ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಪ್ರತಿಭಟನೆ ಶುಕ್ರವಾರವೂ ಮುಂದುವರಿದಿದ್ದು, ಸಂಸತ್ ಮುಂಗಾರು ಅಧಿವೇಶನದ 5ನೇ ದಿನವೂ ಯಾವುದೇ ಮಹತ್ವದ ಕಲಾಪ ನಡೆಯದೆ ಲೋಕಸಭೆಯನ್ನು ಸೋಮವಾರದವರೆಗೆ ಮುಂದೂಡಲಾಗಿದೆ. ಇದೇ ವೇಳೆ ರಾಜ್ಯಸಭೆ ಕಲಾಪವನ್ನೂ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಇಂಡಿಯಾ ಮೈತ್ರಿಕೂಟದ ಸಂಸದರು ಸಂಸತ್‌ ಬಳಿ ಪ್ರತಿಭಟನೆ ನಡೆಸಿದರು.

ಗುರುವಾರ ಸಂಸತ್‌ ದ್ವಾರದ ಬಳಿ ಎನ್‌ಡಿಎ ಹಾಗೂ ಇಂಡಿಯಾ ಮೈತ್ರಿಕೂಟದ ಸಂಸದರು ಪ್ರತ್ಯೇಕ ಪ್ರತಿಭಟನೆ ನಡೆಸಿ ಮುಖಾಮುಖಿಯಾಗಿದ್ದ ಹಿನ್ನೆಲೆಯಲ್ಲಿ, ಶುಕ್ರವಾರವೂ ರಾಜಕೀಯ ಸಂಘರ್ಷ ಮುಂದುವರಿಯಿತು.

ಪ್ರತಿಪಕ್ಷಗಳು ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿದರೆ, ಎನ್‌ಡಿಎ ನಾಯಕರು ಪ್ರತಿಪಕ್ಷಗಳು ಉದ್ದೇಶಪೂರ್ವಕವಾಗಿ ಸಂಸತ್‌ನಲ್ಲಿ ಚರ್ಚೆಗೆ ಅಡ್ಡಿಪಡಿಸುತ್ತಿವೆ ಎಂದು ಆರೋಪಿಸಿದರು.

ಪ್ರತಿಭಟನೆಗೂ ಮುನ್ನ ಕಾಂಗ್ರೆಸ್ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಎಕ್ಸ್‌ನಲ್ಲಿ (X) ಪುನರುಚ್ಚರಿಸಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ, ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ನಡೆದ ಪೊಲೀಸ್ ಕ್ರಮದ ವಿರುದ್ಧ ಕ್ರಮ, ವಿವಾದದ ಕುರಿತು ಪ್ರಧಾನಿ ಮೋದಿ ಅವರು ದೇಶದ ಯುವಕರಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ.

ನೀಟ್ ವಿಚಾರ ಚರ್ಚೆಗೆ ಅವಕಾಶ ನೀಡಿ: ರಿಜಿಜು ಮನವಿ

ಈ ನಡುವೆ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಲೋಕಸಭೆಯಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಪ್ರತಿಪಕ್ಷಗಳಿಗೆ ಮನವಿ ಮಾಡಿದರು.

ಪ್ರಧಾನಿ ಮೋದಿ ಅವರು ಈಗಾಗಲೇ ಈ ವಿಚಾರದಲ್ಲಿ ದೇಶಕ್ಕೆ ಭರವಸೆ ನೀಡಿದ್ದಾರೆ. ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಮತ್ತೊಮ್ಮೆ ಚರ್ಚಿಸಿ, ಸದನದಲ್ಲಿ ಚರ್ಚೆಗೆ ಸಹಕರಿಸುವಂತೆ ಮನವಿ ಮಾಡಿರುವುದಾಗಿ ರಿಜಿಜು ಹೇಳಿದರು.

ನೀಟ್ ವಿಚಾರದಲ್ಲಿ ಚರ್ಚೆ ನಡೆಯಬೇಕು ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಪ್ರಧಾನಿಮಂತ್ರಿಗಳು ದೇಶಕ್ಕೆ ಭರವಸೆ ನೀಡಿದ್ದಾರೆ. ಸೋನಂ ವಾಂಗ್ಚುಕ್ ಕೂಡ ಉಪವಾಸ ಮುಗಿಸಿ ಈ ವಿಚಾರದಲ್ಲಿ ಚರ್ಚೆಗೆ ಆಗ್ರಹಿಸಿದ್ದಾರೆ. ನಾವು ಚರ್ಚೆ ನಡೆಸದಿದ್ದರೆ ಅದು ದೇಶಕ್ಕೆ ಸರಿಯಾದ ಸಂದೇಶ ನೀಡುವುದಿಲ್ಲ ಎಂದು ತಿಳಿಸಿದರು.

ರಾಜ್ಯಸಭೆಯಲ್ಲೂ ಗದ್ದಲ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮದ ವಿಚಾರವಾಗಿ ಪ್ರತಿಪಕ್ಷಗಳ ಪ್ರತಿಭಟನೆ ಮುಂದುವರಿದ ಹಿನ್ನೆಲೆಯಲ್ಲಿ ರಾಜ್ಯಸಭೆ ಕಲಾಪವನ್ನು ಮೊದಲು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಯಿತು.

ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರು ಶೂನ್ಯ ವೇಳೆಯ ಕಲಾಪ ಆರಂಭಿಸಲು ಮುಂದಾದಾಗ ಪ್ರತಿಪಕ್ಷ ಸದಸ್ಯರು ಘೋಷಣೆಗಳನ್ನು ಕೂಗಿದರು. ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ನೀಟ್ ವಿಚಾರವನ್ನು ಪ್ರಸ್ತಾಪಿಸಲು ಮುಂದಾದರೂ, ಗದ್ದಲದ ಹಿನ್ನೆಲೆಯಲ್ಲಿ ಸದನವನ್ನು ಮುಂದೂಡಲಾಯಿತು.

ಲೋಕಸಭೆಯಲ್ಲೂ ಗದ್ದಲ, ಕಲಾಪ ಸೋಮವಾರಕ್ಕೆ ಮುಂದೂಡಿಕೆ

ಲೋಕಸಭೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು ಭಾನುವಾರ ನಡೆಯಲಿರುವ ಕಾರ್ಗಿಲ್ ವಿಜಯ್ ದಿವಸ್ ಕುರಿತು ಪ್ರಸ್ತಾಪಿಸಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ ಬಳಿಕ, ಪ್ರತಿಪಕ್ಷ ಸದಸ್ಯರು "ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು" ಎಂದು ಘೋಷಣೆ ಕೂಗಿದರು.

ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಸದನದ ನಿಯಮಗಳ ಪ್ರಕಾರ ಚರ್ಚೆಗೆ ಅವಕಾಶ ನೀಡುವುದಾಗಿ ಈಗಾಗಲೇ ಭರವಸೆ ನೀಡಿದ್ದೇನೆ ಎಂದು ಸ್ಪೀಕರ್ ಪ್ರತಿಪಕ್ಷ ಸದಸ್ಯರಿಗೆ ನೆನಪಿಸಿದರು.

"ಪ್ರಶ್ನೋತ್ತರ ಅವಧಿ ಸದನದ ಪ್ರಮುಖ ಭಾಗವಾಗಿದೆ. ಇದರ ಮೂಲಕ ಸದಸ್ಯರು ಸರ್ಕಾರವನ್ನು ಪ್ರಶ್ನಿಸಬಹುದು. ಕಲಾಪಕ್ಕೆ ಅಡ್ಡಿಪಡಿಸಬೇಡಿ" ಎಂದು ಮನವಿ ಮಾಡಿದರು.

ಆದರೆ, ಪ್ರತಿಭಟನೆ ಮುಂದುವರಿದ ಹಿನ್ನೆಲೆಯಲ್ಲಿ ಲೋಕಸಭೆಯನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಯಿತು. ಬಳಿಕವೂ ಪರಿಸ್ಥಿತಿ ಬದಲಾಗದ ಕಾರಣ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.

ಸೋಮವಾರದಿಂದ ಆರಂಭವಾದ ಮುಂಗಾರು ಅಧಿವೇಶನದ ಐದು ದಿನಗಳಲ್ಲೂ ಪ್ರತಿಪಕ್ಷಗಳ ಪ್ರತಿಭಟನೆ ಮತ್ತು ಘೋಷಣೆಗಳಿಂದಾಗಿ ಸಂಸತ್‌ನ ಎರಡೂ ಸದನಗಳಲ್ಲಿ ಯಾವುದೇ ಪ್ರಮುಖ ಕಲಾಪ ಪೂರ್ಣಗೊಳ್ಳಲು ಸಾಧ್ಯವಾಗಿಲ್ಲ. ಮುಂಗಾರು ಅಧಿವೇಶನ ಆಗಸ್ಟ್ 13ರವರೆಗೆ ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೆಆರ್ ಎಸ್, ಕಬಿನಿ ಖಾಲಿ ಖಾಲಿ: ಏಷ್ಯಾದ ಮೊದಲ ವಿದ್ಯುತ್ ಉತ್ಪಾದನಾ ಘಟಕ ಸ್ಥಗಿತ; ರಾಜ್ಯದಲ್ಲಿ ಕರೆಂಟ್ ಕೊರತೆ ಸಾಧ್ಯತೆ!

ಅಜ್ಜಿ ತಿಥಿಯ ದಿನ Prajwal Revanna ಕರೆತರಲು ಕುಟುಂಬ ಯತ್ನ; ಪೆರೋಲ್ ನೀಡಲು ಸಾಧ್ಯವಿಲ್ಲ ಎಂದ ಕಾರಾಗೃಹ ಇಲಾಖೆ

ದಿಟ್ಟಿಸಿ ನೋಡಿದ್ದೇ ತಪ್ಪಾಯಿತೇ? ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು; ಟಂ-ಟಂ ಚಾಲಕನ ಭೀಕರ ಹತ್ಯೆ

ಇಂದೇ ಧರ್ಮೇಂದ್ರ ಪ್ರಧಾನ್ ರಾಜೀನಾಮೆ? ಮಧ್ಯಾಹ್ನ 12.30 ಕ್ಕೆ CJP, ಕೇಂದ್ರ ಸರ್ಕಾರದ ನಡುವೆ ಮಹತ್ವದ ಮಾತುಕತೆ

Sonam Wangchuk 26 ದಿನಗಳ ಉಪವಾಸ ಅಂತ್ಯ: Dharmendra Pradhan ರಾಜೀನಾಮೆ ನೀಡದ ಹೊರತು ಪ್ರತಿಭಟನೆ ನಿಲ್ಲಲ್ಲ ಎಂದ CJP..!