ರೈಲು ಪ್ರಯಾಣದ ಕುರಿತು ಯಾವಾಗಲು ಪರ ಮತ್ತು ವಿರೋಧದ ಚರ್ಚೆಗಳು ಸಾಮಾನ್ಯವಾಗಿರುತ್ತವೆ. ಬಾಲಿವುಡ್ ನಟ ಸೋನು ಸೂದ್ ಇತ್ತೀಚೆಗೆ ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸಿದ್ದು, ಇದೇ ರೀತಿಯ ಕ್ಷಣವನ್ನು ಅನುಭವಿಸಿದರು. ಹಲವು ವರ್ಷಗಳಲ್ಲಿ ಭಾರತೀಯ ರೈಲ್ವೆ ಯಾವ ರೀತಿ ಅಭಿವೃದ್ಧಿ ಕಂಡಿದೆ ಎಂಬುದರ ಕುರಿತು ನಟ ಮಾತನಾಡಿದ್ದಾರೆ. ಎಕ್ಸ್ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಮುಂಬೈನಲ್ಲಿ ನಟನಾಗುವ ತನ್ನ ಕನಸನ್ನು ಅನುಸರಿಸುವಾಗ ಸೋನು ತನ್ನ ಆರಂಭಿಕ ಪ್ರಯಾಣದ ದಿನಗಳನ್ನು ನೆನಪಿಸಿಕೊಂಡರು.
'ಇಂದು ನಾವು ವಂದೇ ಭಾರತ್ ಎಕ್ಸ್ಪ್ರೆಸ್ ಮೂಲಕ ಪ್ರಯಾಣಿಸುತ್ತಿದ್ದೇವೆ ಮತ್ತು ನಾನು ಹೇಳಬಲ್ಲೆ, ಇದು ರೈಲ್ವೆಯ ವಿಷಯದಲ್ಲಿ ಅದ್ಭುತ ಬೆಳವಣಿಗೆ ಮತ್ತು ಗುಣಮಟ್ಟ, ಬಡಿಸುತ್ತಿರುವ ಆಹಾರ, ಸಿಬ್ಬಂದಿ, ಅವರು ನೀಡುವ ಪ್ರೀತಿ ಎಲ್ಲವೂ. ಈ ರೈಲು ಪ್ರಯಾಣವು ನನ್ನ ಮೊದಲ ಪ್ರಯಾಣವನ್ನು ನೆನಪಿಸಿತು. ನಾನು ನಾಗ್ಪುರದಲ್ಲಿ ಅಧ್ಯಯನ ಮಾಡಿದೆ ಮತ್ತು ನಂತರ ನಟನಾಗಲು ಮುಂಬೈಗೆ ಹೊರಟೆ' ಎಂದಿದ್ದಾರೆ.
'ಆಗ, ಪ್ರಯಾಣಿಕರು ಉದ್ದವಾದ ಕಂಪ್ಯೂಟರ್ ಕಾಗದಗಳನ್ನು ತೆಗೆದುಕೊಂಡು ಅವುಗಳನ್ನು ನೆಲದ ಮೇಲೆ ಹರಡಿ ರಾತ್ರಿಯಲ್ಲಿ ಮಲಗಿ ಸಮಯ ಕಳೆಯುತ್ತಿದ್ದರು. ಆದರೆ, ಇಂದು ಹಲವು ವರ್ಷಗಳ ನಂತರ, ನಾವು ಮತ್ತೆ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ, ಭಾರತೀಯ ರೈಲ್ವೆ ಸಾಕಷ್ಟು ಬೆಳವಣಿಗೆ ಕಂಡಿದೆ ಎಂದು ನಾನು ಹೇಳಬಲ್ಲೆ. ಅವುಗಳ ಗುಣಮಟ್ಟ ಅಸಾಧಾರಣವಾಗಿದೆ' ಎಂದು ಅವರು ಹೇಳಿದರು.
'ನೀವು ಮಾಡುತ್ತಿರುವ ಉತ್ತಮ ಕೆಲಸಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಇಂತಹ ಅದ್ಭುತ ಕೆಲಸಗಳನ್ನು ಮಾಡುತ್ತಲೇ ಇರಿ. ನಮ್ಮ ದೇಶದ ಅಭಿವೃದ್ಧಿಗೆ ಇದೆಲ್ಲವೂ ಬಹಳ ಮುಖ್ಯ. ಶುಭವಾಗಲಿ' ಎಂದು ಸೋನು ಮಾತು ಮುಗಿಸಿದ್ದಾರೆ.
ಸೋನು ಸೂದ್ ಅವರ ಈ ವಿಡಿಯೋಗೆ ಆನ್ಲೈನ್ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಬಳಕೆದಾರರು ಬೆಂಬಲ ಸೂಚಿಸಿದರೆ, ಮತ್ತೆ ಕೆಲವರು ಸಾಮಾನ್ಯ ಜನರ ಬವಣೆ ಇಂದಿಗೂ ಹಾಗೆಯೇ ಇದೆ ಎಂದಿದ್ದಾರೆ.
'ಸರ್, ವಿಐಪಿ ಟ್ರೀಟ್ಮೆಂಟ್ ಅತ್ಯುತ್ತಮ ಸೌಲಭ್ಯಗಳನ್ನು ಮಾತ್ರ ನೀಡುತ್ತದೆ. ವಿಐಪಿ ಟ್ರೀಟ್ಮೆಂಟ್ ಇಲ್ಲದೆ ಪ್ರಯಾಣಿಸಲು ಪ್ರಯತ್ನಿಸಿ' ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.
ಮತ್ತೊಬ್ಬರು, 'ಒಂದು ದಿನ, ದಯವಿಟ್ಟು ಎಸಿ ಇಲ್ಲದ ಜನರಲ್ ಕ್ಯಾಬಿನ್ನಲ್ಲಿ ಪ್ರಯಾಣಿಸಿ. ನಿಮಗೆ ವಾಸ್ತವ ಅರಿವಾಗುತ್ತದೆ' ಎಂದಿದ್ದಾರೆ.
'ಸಾಮಾನ್ಯ ಜನರು ಏನು ಎದುರಿಸುತ್ತಿದ್ದಾರೆಂದು ನಿಮಗೆ ತಿಳಿದಿಲ್ಲ. ರೈಲು ವಿಳಂಬ. ಟಿಕೆಟ್ಗಳ ಲಭ್ಯತೆ ಈಗಲೂ ಸಮಸ್ಯೆಯಾಗಿಯೇ ಇದೆ' ಎಂದು ಮತ್ತೋರ್ವ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ಆದಾಗ್ಯೂ, ಕೆಲವು ಬಳಕೆದಾರರು ನಟನ ಮಾತನ್ನು ಒಪ್ಪಿಕೊಂಡಿದ್ದು, ಕಳೆದ ವರ್ಷಗಳಲ್ಲಿನ ಪ್ರಗತಿಯನ್ನು ಶ್ಲಾಘಿಸಿದ್ದಾರೆ.
'ಕಮೆಂಟ್ ವಿಭಾಗವು ನಕಾರಾತ್ಮಕತೆಯಿಂದ ತುಂಬಿದೆ. ಹೌದು, ಭಾರತೀಯ ರೈಲ್ವೆ ಸಮಸ್ಯೆಗಳನ್ನು ಹೊಂದಿದೆ ಮತ್ತು ಯಾರೂ ಅದನ್ನು ನಿರಾಕರಿಸುವುದಿಲ್ಲ. ಆದರೆ, ಕಾರ್ಯಕ್ಷಮತೆಯನ್ನು 5 ವರ್ಷಗಳ ಚಕ್ರಗಳಲ್ಲಿ ನಿರ್ಣಯಿಸಬೇಕು. ವಂದೇ ಭಾರತ್, ಅಮೃತ್ ಭಾರತ್ ನಿಲ್ದಾಣ, ವಿದ್ಯುದೀಕರಣ, ಸ್ವಚ್ಛತಾ ಕೇಂದ್ರಗಳು, ಕವಚ, NE & DFC ಯಲ್ಲಿ ರೈಲ್ವೆ ಗಮನಾರ್ಹ ಪ್ರಗತಿ ಸಾಧಿಸಿದೆ' ಎಂದು ಒಬ್ಬರು ಬರೆದಿದ್ದಾರೆ.