ಲಖನೌ: ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಮತ್ತು ಉತ್ತರ ಪ್ರದೇಶ ಪಂಚಾಯತ್ ರಾಜ್ ಸಚಿವ ಓಂ ಪ್ರಕಾಶ್ ರಾಜ್ಭರ್ ಶನಿವಾರ ಸಮಾಜವಾದಿ ಪಕ್ಷದ ವಿರುದ್ಧ ತಮ್ಮ ವಾಗ್ದಾದಾಳಿಯನ್ನು ತೀವ್ರಗೊಳಿಸಿದ್ದು, ಅಖಿಲೇಶ್ ಯಾದವ್ ಅವರು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬಹುದು ಮತ್ತು ಶಿವಪಾಲ್ ಸಿಂಗ್ ಯಾದವ್ ಪಕ್ಷದ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಬಲ್ಲಿಯಾ ಜಿಲ್ಲೆಯ ಬೈರಿಯಾ ಪ್ರದೇಶದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಓಂ ಪ್ರಕಾಶ್ ರಾಜ್ಭರ್ ಅವರು, ಶಿವಸೇನೆ(ಯುಬಿಟಿ) ಮತ್ತು ತೃಣಮೂಲ ಕಾಂಗ್ರೆಸ್ನಂತೆ ಎಸ್ಪಿ ಸಹ ವಿಭಜನೆಯತ್ತ ಸಾಗುತ್ತಿದೆ ಎಂದು ಪುನರುಚ್ಚರಿಸಿದರು.
ಎಸ್ಪಿ ನಾಯಕರ ಒಂದು ಬಣ, ಬಿಜೆಪಿಯೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಿದ ಅವರು, ಈ ಪ್ರಕ್ರಿಯೆಯು ಬಲ್ಲಿಯಾದಿಂದ ಪ್ರಾರಂಭವಾಗಲಿದೆ ಎಂದರು. ಅಲ್ಲದೆ ಬಲ್ಲಿಯಾ "ಬಂಡುಕೋರರ ಭೂಮಿ" ಎಂದು ಬಣ್ಣಿಸಿದರು.
ವಿರೋಧ ಪಕ್ಷದೊಳಗೆ ರಾಜಕೀಯ ಭವಿಷ್ಯ ಕಡಿಮೆ ಎಂದು ಭಾವಿಸಿರುವುದರಿಂದ ಕೆಲವು ಎಸ್ಪಿ ಸಂಸದರು ಆಡಳಿತ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ ಎಂದು ರಾಜ್ಭರ್ ಹೇಳಿದ್ದಾರೆ.
ಅಖಿಲೇಶ್ ಯಾದವ್ ಅವರ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ಅವರೊಂದಿಗಿನ ಸಂಬಂಧವನ್ನು ಟೀಕಿಸಿದ ರಾಜ್ಭರ್, ಎಸ್ಪಿ ಮುಖ್ಯಸ್ಥರು, ಶಿವಪಾಲ್ ಅವರನ್ನು "ನೋಡಲೂ" ಬಯಸುವುದಿಲ್ಲ ಎಂದು ಆರೋಪಿಸಿದರು ಮತ್ತು ಪಕ್ಷದಲ್ಲಿ ಶಿವಪಾಲ್ ಅವರ ಪಾತ್ರವನ್ನು ಪ್ರಶ್ನಿಸಿ ವಿಧಾನಸಭೆಯಲ್ಲಿ ಅಖಿಲೇಶ್ ಅವರು ಮಾಡಿದ್ದ ಹಿಂದಿನ ಹೇಳಿಕೆಗಳನ್ನು ನೆನಪಿಸಿಕೊಂಡರು.
"ಮುಂಬರುವ ದಿನಗಳಲ್ಲಿ, ಪಕ್ಷವನ್ನು ಉಳಿಸಲು ಅಖಿಲೇಶ್ ಯಾದವ್ ಪಕ್ಷದ ಮುಖ್ಯಸ್ಥ ಸ್ಥಾನದಿಂದ ಹಿಂದೆ ಸರಿಯಬೇಕಾಗುತ್ತದೆ ಮತ್ತು ಶಿವಪಾಲ್ ಸಿಂಗ್ ಯಾದವ್ ಅವರು ಪಕ್ಷವನ್ನು ಮುನ್ನಡೆಸುತ್ತಾರೆ" ಎಂದು ರಾಜ್ಭರ್ ಹೇಳಿದರು.
ವಿರೋಧ ಪಕ್ಷದಲ್ಲಿ ಒಡಕು ಉಂಟಾಗಲಿದೆ ಎಂದು ಪದೇ ಪದೇ ಹೇಳಿಕೊಳ್ಳುತ್ತಿರುವ ರಾಜ್ಭರ್ ಮತ್ತು ಎಸ್ಪಿ ನಾಯಕರ ನಡುವೆ ಮಾತಿನ ಚಕಮಕಿ ನಡೆಯುತ್ತಿರುವ ಮಧ್ಯೆ ಈ ಹೇಳಿಕೆ ಹೆಚ್ಚು ಮಹತ್ವ ಪಡೆದುಕೊಂಡಿದೆ.