ಟೆಹ್ರಾನ್: ಇರಾನ್ ಅಮೆರಿಕದೊಂದಿಗೆ ಮಾತುಕತೆ ನಡೆಸುವ ಯಾವುದೇ ಉದ್ದೇಶವನ್ನು ನಾವು ಹೊಂದಿಲ್ಲ ಮತ್ತು ಅಗತ್ಯವಿರುವಷ್ಟು ಕಾಲ ಮಧ್ಯಪ್ರಾಚ್ಯ ಯುದ್ಧವನ್ನು ಮುಂದುವರಿಸಬಹುದು ಎಂದು ದಿವಂಗತ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹಿರಿಯ ಸಹಾಯಕ ಮೊಹಮ್ಮದ್ ಮೊಖ್ಬರ್ ರಾಜ್ಯ ಟಿವಿಗೆ ತಿಳಿಸಿದ್ದಾರೆ ಎಂದು ಎಎಫ್ಪಿ ವರದಿ ಮಾಡಿದೆ.
ಇರಾನ್ಗೆ "ಅಮೆರಿಕನ್ನರ ಮೇಲೆ ನಂಬಿಕೆ ಇಲ್ಲ ಮತ್ತು ಅವರೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ. ನಾವು ಬಯಸಿದಷ್ಟು ಕಾಲ ಯುದ್ಧವನ್ನು ಮುಂದುವರಿಸಬಹುದು" ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ, ಇಸ್ಲಾಮಿಕ್ ಗಣರಾಜ್ಯದಲ್ಲಿ ಕ್ಷಿಪಣಿ ಉಡಾವಣಾ ಕೇಂದ್ರಗಳಲ್ಲಿ ಇರಾನ್ ಇನ್ನೂ ಕ್ಷಿಪಣಿಗಳನ್ನು ಉಡಾಯಿಸುವ ಗಮನಾರ್ಹ ಸಾಮರ್ಥ್ಯವನ್ನು ಹೊಂದಿದೆ ಎಂದು ಇಸ್ರೇಲಿ ಮಿಲಿಟರಿ ಬುಧವಾರ ಹೇಳಿದೆ.
"ಇಸ್ರೇಲ್ ಗೆ ಗಮನಾರ್ಹ ಬೆದರಿಕೆಯನ್ನು ಒಡ್ಡಿದ ಡಜನ್ಗಟ್ಟಲೆ ಕ್ಷಿಪಣಿ ಉಡಾವಣಾ ಕೇಂದ್ರಗಳನ್ನು ನಾವು ನಾಶಪಡಿಸಿದ್ದೇವೆ" ಎಂದು ಇಸ್ರೇಲ್ ಮಿಲಿಟರಿ ವಕ್ತಾರ ಬ್ರೀಗಿಡೇರ್ ಜನರಲ್ ಎಫೀ ಡೆಫ್ರಿನ್ ದೂರದರ್ಶನದ ಬ್ರೀಫಿಂಗ್ನಲ್ಲಿ ತಿಳಿಸಿದ್ದಾರೆ.
ಇರಾನ್ ಹಡಗಿನ ಮೇಲೆ ದಾಳಿ; 101 ಜನ ನಾಪತ್ತೆ
ಶ್ರೀಲಂಕಾ ಕರಾವಳಿಯಲ್ಲಿ ಇರಾನಿನ ಹಡಗಿನ ಮೇಲೆ ಜಲಾಂತರ್ಗಾಮಿ ದಾಳಿ ನಡೆಸಲಾಗಿದ್ದು, ಕನಿಷ್ಠ 101 ಜನ ಕಾಣೆಯಾಗಿದ್ದಾರೆ ಮತ್ತು 78 ಜನ ಗಾಯಗೊಂಡಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಈ ಹಡಗು ಇರಾನಿನ ನೌಕಾಪಡೆಯ ಯುದ್ಧನೌಕೆಯಾಗಿದ್ದು, ಫೆಬ್ರವರಿ ಮಧ್ಯದಲ್ಲಿ ವಿಶಾಖಪಟ್ಟಣದಲ್ಲಿ ನಡೆದ ಭಾರತೀಯ ನೌಕಾಪಡೆಯ ಅಂತರರಾಷ್ಟ್ರೀಯ ಫ್ಲೀಟ್ ರಿವ್ಯೂ(IFR) ಮತ್ತು ಬಹುರಾಷ್ಟ್ರೀಯ ಕಾರ್ಯಾಚರಣೆ ಮಿಲನ್ನಲ್ಲಿ ಭಾಗವಹಿಸಿತ್ತು.
ಐರಿಸ್ ದೇನಾ ಯುದ್ಧನೌಕೆಯು ಭಾರತ ಆಯೋಜಿಸಿದ್ದ ನೌಕಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ ನಂತರ ಇರಾನ್ಗೆ ಹಿಂದಿರುಗುತ್ತಿದ್ದ ವೇಳೆ ಇಂದು ಬೆಳಗಿನ ಜಾವ ಈ ದುರಂತ ಸಂಭವಿಸಿದೆ.
ಶ್ರೀಲಂಕಾ ಸೇನೆಯು ಹಡಗಿನಲ್ಲಿದ್ದ ಕನಿಷ್ಠ 30 ಜನರನ್ನು ರಕ್ಷಿಸಿದೆ ಮತ್ತು ಗಾಯಾಳುಗಳನ್ನು ಗ್ಯಾಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಶ್ರೀಲಂಕಾ ವಿದೇಶಾಂಗ ಸಚಿವೆ ವಿಜಿತಾ ಹೆರಾತ್ ಅವರು ಹೇಳಿದ್ದಾರೆ.