ಕೊಚ್ಚಿ: ಅಭಿವೃದ್ಧಿ ಮತ್ತು ಪಾರಂಪರಿಕ ಸಂರಕ್ಷಣೆಯ ನಡುವಿನ ಸಮತೋಲನ ಹೇಗೆ ಸಾಧಿಸಬಹುದು ಎಂಬುದಕ್ಕೆ ಕೇರಳದ ಕೊಚ್ಚಿ ನಗರವು ಜೀವಂತ ಉದಾಹರಣೆಯಾಗಿದೆ.
ರೈಲ್ವೆ ಹಳಿಗಳ ವಿಸ್ತರಣೆಗೆ ಅಡ್ಡಿಯಾಗಿದ್ದ ಕೊಂತುರುತಿ ಪ್ರದೇಶದಲ್ಲಿರುವ 200 ವರ್ಷಗಳಷ್ಟು ಹಳೆಯದಾದ ಮಂದಿರವನ್ನು ಕೆಡವದೇ, ಸಂಪೂರ್ಣವಾಗಿ ಯಥಾಸ್ಥಿತಿಯಲ್ಲೇ ಸ್ಥಳಾಂತರಿಸುವ ಮಹತ್ವದ ಕಾರ್ಯ ಇಲ್ಲಿ ನಡೆಯುತ್ತಿದೆ.
ಎರ್ನಾಕುಲಂ ಭಾಗದಲ್ಲಿ ನಡೆಯುತ್ತಿರುವ ರೈಲ್ವೆ ಹಳಿಗಳ ವಿಸ್ತರಣಾ ಯೋಜನೆಗಾಗಿ ಈ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡ ನಂತರ, ಮಂದಿರವನ್ನು ಕೆಡವುವ ವಿಚಾರ ಎದುರಾಯಿತು.
ಆದರೆ, ಭಕ್ತರು ಮತ್ತು ಚರ್ಚ್ ಆಡಳಿತ ಮಂಡಳಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಪರ್ಯಾಯವಾಗಿ ಸ್ಥಳಾಂತರ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.
ಈ ಪುರಾತನ ಮಂದಿರವು ಸೇಂಟ್ ಜಾನ್ಸ್ ನೆಪಮ್ಸಿಯನ್ ಚರ್ಚ್ ಗೆ ಸೇರಿದ್ದಾಗಿದ್ದು, ಸುಮಾರು 15 ಅಡಿ ಎತ್ತರ ಹೊಂದಿದೆ. ಇದನ್ನು ಅದರ ಮೂಲ ಸ್ಥಾನದಿಂದ ಸುಮಾರು 26 ಮೀಟರ್ ದೂರದಲ್ಲಿರುವ ಚರ್ಚ್ ಸ್ವಂತ ಜಾಗಕ್ಕೆ ಸ್ಥಳಾಂತರಿಸಲಾಗುತ್ತಿದೆ.
ಸಾಮಾನ್ಯವಾಗಿ ಇಂತಹ ಪುರಾತನ ಕಟ್ಟಡಗಳನ್ನು ಕೆಡವಿ ಹೊಸದಾಗಿ ನಿರ್ಮಿಸುವುದು ಸುಲಭವಾದ ಆಯ್ಕೆಯಾಗಿದ್ದರೂ, ಇಲ್ಲಿ ಭಕ್ತರ ಭಾವನೆಗೆ ಗೌರವ ನೀಡುತ್ತಾ ಅದನ್ನು ಸಂಪೂರ್ಣವಾಗಿ ಉಳಿಸುವ ಪ್ರಯತ್ನ ಮಾಡಲಾಗುತ್ತಿದೆ.
ಯೋಜನೆಯನ್ನು ಹರಿಯಾಣ ಮೂಲದ ಶ್ರೀರಾಮ್ ಬಿಲ್ಡಿಂಗ್ ಮತ್ತು ಲಿಫ್ಟಿಂಗ್ (ಆತ್ಮ ರಾಮ್ ಮತ್ತು ಸನ್ಸ್) ಕೈಗೆತ್ತಿಕೊಂಡಿದ್ದು, ಸ್ಥಳಾಂತರ ಕಾರ್ಯ ಮಾರ್ಚ್ 16 ರಂದು ಆರಂಭವಾಗಿದ್ದು, ಮಾರ್ಚ್ 26 ರೊಳಗೆ ಯೋಜನೆ ಪೂರ್ಣಗೊಳ್ಳಲಿದೆ.
ಈ ಮಂದಿರವನ್ನು 1823ರಲ್ಲಿ ಪೋರ್ಚುಗೀಸ್ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಮಂದಿರವು ಆರು ಮೀಟರ್ ಅಗಲದ ಅಡಿಪಾಯದೊಂದಿಗೆ 15 ಅಡಿ ಎತ್ತರದಲ್ಲಿದೆ. 1992ರಲ್ಲಿ ಚರ್ಚ್ ಪುನರ್ ನಿರ್ಮಾಣವಾದಾಗಲೂ ಈ ಮಂದಿರವನ್ನು ಅದೇ ಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಿತ್ತು ಎಂದು ಚರ್ಚ್ ಖಜಾಂಚಿ ಪಿ.ಸಿ.ಆ್ಯಂಟನಿ ಅವರು ಹೇಳಿದ್ದಾರೆ.
ಸ್ಥಳಾಂತರ ಪ್ರಕ್ರಿಯೆ ಅತ್ಯಂತ ನಿಖರತೆಯಿಂದ ನಡೆಯುತ್ತಿದೆ. ಸುಮಾರು 25 ಜ್ಯಾಕಿಗಳು, ಗೇರ್ಗಳು ಮತ್ತು ವಿಶೇಷ ತಂತ್ರಜ್ಞಾನವನ್ನು ಬಳಸಿಕೊಂಡು ಕಟ್ಟಡವನ್ನು ಅಡಿಪಾಯದಿಂದಲೇ ನಿಧಾನವಾಗಿ ಮೇಲಕ್ಕೆತ್ತಲಾಗುತ್ತಿದೆ. ನಂತರ ಯಾವುದೇ ಬಿರುಕು ಅಥವಾ ಹಾನಿಯಾಗದಂತೆ, ಚರ್ಚ್ಗೆ ಸೇರಿದ ಪಕ್ಕದ ಭೂಮಿಗೆ ಸುರಕ್ಷಿತವಾಗಿ ಸಾಗಿಸಲಾಗುತ್ತಿದೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವಿಕಾಸ್ ಕುಮಾರ್ ಅವರು ಹೇಳಿದ್ದಾರೆ.
"ನನ್ನ ಅಜ್ಜ ಪ್ರಾರಂಭಿಸಿದ ಈ ಕಾರ್ಯಕ್ರವನ್ನು ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಭುವನೇಶ್ವರದಲ್ಲಿರುವ 650 ವರ್ಷ ಹಳೆಯ ದೇವಾಲಯ ಮತ್ತು ಇತರ ಪರಂಪರೆಯ ತಾಣಗಳು ಸೇರಿದಂತೆ 1973 ರಿಂದ ಭಾರತದಾದ್ಯಂತ ಕಟ್ಟಡಗಳನ್ನು ಸಂರಕ್ಷಿಸಲು ನಾವು ಸಹಾಯ ಮಾಡಿದ್ದೇವೆ. ದೇವಾಲಯವನ್ನು ಐದು ಅಡಿ ಎತ್ತಲು ನಮಗೆ ಒಂಬತ್ತು ದಿನಗಳು ಬೇಕಾಯಿತು. ಸಿದ್ಧತೆಗಳಿಗೆ ಒಟ್ಟು 12 ದಿನಗಳನ್ನು ತೆಗೆದುಕೊಳ್ಳುತ್ತದೆ. ಯೋಜನೆಗೆ ಸುಮಾರು ರೂ.4.5 ಲಕ್ಷ ವೆಚ್ಚವಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಅಪರೂಪದ ಪ್ರಯತ್ನವು ಅಭಿವೃದ್ಧಿ ಮತ್ತು ಪರಂಪರೆಯ ನಡುವಿನ ಸಂಘರ್ಷಕ್ಕೆ ಸಮಾಧಾನಕರ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ಹಾಗೂ ಇಂಜಿನಿಯರಿಂಗ್ ಕೌಶಲ್ಯ ಮತ್ತು ಯೋಜನೆಯ ಸೂಕ್ಷ್ಮತೆಯನ್ನು ತೋರಿಸುತ್ತವೆ.
ಏತನ್ಮಧ್ಯೆ ಸ್ಥಳೀಯರು ಮತ್ತು ಭಕ್ತರು ಈ ಕ್ರಮವನ್ನು ಸಂತಸದಿಂದ ಸ್ವಾಗತಿಸಿದ್ದು, ಇದು ಭವಿಷ್ಯದ ಯೋಜನೆಗಳಿಗೆ ಮಾದರಿಯಾಗಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.