ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಹೊರತಾಗಿಯೂ ಭಾರತ ಸಮಾನ ನೆಲೆಯಲ್ಲಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಭರವಸೆ ನೀಡಿದೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಉದ್ಭವಿಸುವ ಒಟ್ಟಾರೆ ಪರಿಸ್ಥಿತಿ ನಿಯಂತ್ರಣದಲ್ಲಿರುವುದರಿಂದ ಆತಂಕಕ್ಕೆ ಯಾವುದೇ ಕಾರಣವಿಲ್ಲ ಎಂದು ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆಯಲ್ಲಿ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಿದೆ.
ಮೂಲಗಳ ಪ್ರಕಾರ, ಸರ್ವಪಕ್ಷಗಳ ಸಭೆಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ವಿಸ್ತೃತ ಮಾಹಿತಿ ನೀಡಿದ್ದಾರೆ. ತದನಂತರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮಾತನಾಡಿ, ಕಚ್ಚಾ ತೈಲ, ಎಲ್ ಪಿಜಿ ಮತ್ತಿತರ ಅಗತ್ಯ ವಸ್ತುಗಳು ಸಮರ್ಪಕ ರೀತಿಯಲ್ಲಿ ದೊರೆಯುತ್ತಿದ್ದು, ಇಂಧನ ಭದ್ರತೆ ಸ್ಥಿರವಾಗಿದೆ. ರಸಗೊಬ್ಬರ ಸೇರಿದಂತೆ ಭಾರತದ ಬಲವಾದ ಸಂಸ್ಕರಣಾ ಸಾಮರ್ಥ್ಯವು ನಿರಂತರ ಪೂರೈಕೆಯನ್ನು ಖಚಿತಪಡಿಸುತ್ತದೆ ಎಂದು ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕರು ಸಂಘರ್ಷದಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆ ಪಾತ್ರವನ್ನು ಉಲ್ಲೇಖಿಸಿದ್ದಾರೆ. ಇದಕ್ಕೆ ಸರ್ಕಾರ ಅಂತಹ ಉಲ್ಲೇಖಗಳು ಹೊಸದಲ್ಲ ಎಂದು ಉತ್ತರಿಸಿದ್ದು, US-ಇರಾನ್ ರಾಜತಾಂತ್ರಿಕ ಸ್ಥಗಿತದ ಸಮಯದಲ್ಲಿ 1981 ರಿಂದಲೂ ಪಾಕಿಸ್ತಾನ ಆ ಕೆಲಸ ಮಾಡುತ್ತಾ ಬಂದಿದೆ. ಐದು ದಿನಗಳ ನಂತರ ಇರಾನ್ ಮತ್ತೆ ಪ್ರವೇಶಕ್ಕೆ ಅವಕಾಶ ನೀಡಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ಸರ್ಕಾರ ಹೇಳಿದೆ.
ಭಾರತ ಎಲ್ಲಾ ಕಡೆಗಳೊಂದಿಗೆ ಸಂಪರ್ಕದಲ್ಲಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದೆ. ಹಡಗುಗಳು ಬರುತ್ತಿದ್ದು, ಪೂರೈಕೆ ಮಾರ್ಗಗಳು ಸಕ್ರಿಯವಾಗಿವೆ. ಇದು ದೇಶದ ರಾಜತಾಂತ್ರಿಕತೆಯ ಯಶಸ್ಸು ಎಂದು ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ.