ಲಖನೌ: ಆಘಾತಕಾರಿ ಘಟನೆಯೊಂದರಲ್ಲಿ ಪತಿಯೋರ್ವ ಪತ್ನಿ ಕೊಲೆ ಕೇಸ್ ಅಲ್ಲಿ ಜೈಲುಪಾಲಾಗಿದ್ದರೆ, ಕೊಲೆಯಾಗಿದ್ದಾಳೆ ಎಂದು ಹೇಳಲಾಗಿದ್ದ ಪತ್ನಿ ಆಕೆಯ ಲವರ್ ಮನೆಯಲ್ಲಿ ಪತ್ತೆಯಾಗುವ ಮೂಲಕ ಅಚ್ಚರಿಗೆ ಕಾರಣವಾಗಿದ್ದಾಳೆ.
ಉತ್ತರ ಪ್ರದೇಶದ ಕೌಶಂಬಿಯಲ್ಲಿ ಈ ಘಟನೆ ನಡೆದಿದ್ದು, ದೆಹಲಿಯಲ್ಲಿ ಪತ್ನಿ ಜೀವಂತ ಪತ್ತೆಯಾಗಿ ಪೊಲೀಸರೇ ಹೌಹಾರುವಂತೆ ಮಾಡಿದ್ದಾಳೆ. ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಆರೋಪ ಹೊತ್ತು ಜೈಲು ಪಾಲಾಗಿದ್ದ 32 ವರ್ಷದ ಕೌಶಂಬಿ ಮೂಲದ ವ್ಯಕ್ತಿ ಇದೀಗ ನಿರಾಳನಾಗಿದ್ದಾನೆ.
ಮೂಲಗಳ ಪ್ರಕಾರ ರಾಜು ತಿವಾರಿ ಎಂಬ ಹರ್ಯಾಣದ ಕೌಶಂಬಿಯ ಮಹವಾಗತ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅಲ್ವಾರ ಗ್ರಾಮದ ನಿವಾಸಿಯನ್ನು ಪೊಲೀಸರು ಒಂದು ತಿಂಗಳ ಹಿಂದೆ ಪತ್ನಿ ಕೊಲೆ ಕೇಸ್ ನಲ್ಲಿ ಬಂಧಿಸಿದ್ದರು. ರಾಜು ತಿವಾರಿ ತನ್ನ ಪತ್ನಿ ಅಂಕಿತಾಳನ್ನು ವರದಕ್ಷಿಣ ಕಿರುಕುಳ ನೀಡಿ ಹೊಡೆದು ಕೊಂದಿದ್ದಾನೆ ಮತ್ತು ಶವ ನಾಪತ್ತೆ ಮಾಡಿದ್ದಾನೆ ಎಂಬ ಆರೋಪದ ಮೇರೆಗೆ ಆತ ಮತ್ತು ಆತನ ಸಹೋದರನನ್ನು ಪೊಲೀಸರು ಬಂಧಿಸಿದ್ದರು.
ಈ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರಿಗೆ ಇದೀಗ ಅಂಕಿತಾ ದೆಹಲಿ ಇರುವುದು ಪತ್ತೆಯಾಗಿದೆ. ದೆಹಲಿಯಲ್ಲಿರುವ ಆಕೆಯ ಲವರ್ ಮನೆಯಲ್ಲಿ ಪತ್ನಿ ಬಿಂದಾಸ್ ಜೀವನ ನಡೆಸುತ್ತಿರುವುದನ್ನು ಕಂಡ ಪೊಲೀಸರೇ ಹೌಹಾರಿದ್ದಾರೆ. ಸಂಬಂಧದಲ್ಲಿ ಸಹೋದರನಾಗಿರುವ ಆಕೆಯ ಚಿಕ್ಕಮ್ಮನ ಮಗ ರಾಮು ಅಲಿಯಾಸ್ ಸಂಕಲ್ಪ್ ಮಿಶ್ರಾ ಜೊತೆ ಅಂಕಿತಾ ಇದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯನ್ನು ಹರಿಯಾಣದಿಂದ ಕರೆತರಲಾಗಿದೆ ಎಂದು ಎಸ್ಪಿ ರಾಜೇಶ್ ಕುಮಾರ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದೀಗ ಪತ್ನಿ ಜೀವಂತ ಪತ್ತೆಯಾದ ಹಿನ್ನಲೆಯಲ್ಲಿ ಪೊಲೀಸರು ಪತಿ ರಾಜು ತಿವಾರಿಯನ್ನು ಜೈಲಿನಿಂದ ಬಿಡುಗಡೆ ಮಾಡಿದ್ದಾರೆ. ಅಂತೆಯೇ ಅಂಕಿತಾ, ಆಕೆಯ ತಂದೆ ಸೇರಿದಂತೆ 4 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಆಗಿದ್ದೇನು?
2016 ರಲ್ಲಿ ರಾಜು ತಿವಾರಿ ಮತ್ತು ಅಂಕಿತಾ ಅವರನ್ನು ವಿವಾಹವಾದರು. ಅಂಕಿತಾ ಅವರು ಸದರ್ ಕೋಟ್ವಾಲಿ ಪ್ರದೇಶದ ತೆವಾನ್ ಗ್ರಾಮದ ನಿವಾಸಿಯಾಗಿದ್ದಾರೆ. ಮದುವೆಯ ನಂತರ ಸೊಸೆಯ ವರ್ತನೆ ಉತ್ತಮವಾಗಿರಲಿಲ್ಲ. ಅವರು ಹೆಚ್ಚಿನ ಸಂದರ್ಭಗಳಲ್ಲಿ, ತನ್ನ ತಾಯಿ ಮನೆಯಲ್ಲೇ ವಾಸಿಸುತ್ತಿದ್ದರು.
2024ರಲ್ಲಿ ಸೊಸೆ ಅಂಕಿತಾ ತನ್ನ ಚಿಕ್ಕಮ್ಮನ ಮಗ ಫತೇಪುರದ ನಿವಾಸಿ ರಾಮು ಅಲಿಯಾಸ್ ಸಂಕಲ್ಪ್ ಮಿಶ್ರಾ ಅವರೊಂದಿಗೆ ದೆಹಲಿಗೆ ತೆರಳಿದ್ದರು. ಕುಟುಂಬಸ್ಥರಿಗೆ ಮಾಹಿತಿ ನೀಡದೆ ದೆಹಲಿಗೆ ಓಡಿ ಹೋಗಿದ್ದಳು ಎಂದು ಕುಟುಂಬಸ್ಥರು ಹೇಳಿದ್ದಾರೆ.
ಬಳಿಕ ಪಂಚಾಯಿತಿ ನಡೆದು ಸಂಕಲ್ಪ್ ಜೊತೆ ಹೋಗುವುದಿಲ್ಲ ಎಂದು ಭರವಸೆ ನೀಡಿದ ಬಳಿಕ ಆಕೆಯನ್ನು ರಾಜು ತಿವಾರಿ ಕುಟುಂಬಸ್ಥರು ವಾಪಸ್ ಕರೆದುಕೊಂಡಿದ್ದರು. ಆದರೆ ಕಳೆದ ಜನವರಿ 21, 2026 ರಂದು, ಸೊಸೆ ತನ್ನ ಬಗ್ಗೆ ತಿಳಿಸದೆ ಮನೆಯಿಂದ ಹೊರಟುಹೋದಳು. ಈ ವೇಳೆ ಆಕೆ ತನ್ನೊಂದಿಗೆ ನಗದು ಮತ್ತು ಚಿನ್ನಾಭರಣಗಳನ್ನು ಕೂಡ ತೆಗೆದುಕೊಂಡು ಹೋಗಿದ್ದಳು. ಜನವರಿ 22 ರಂದು ರಾಜು ಕುಟುಂಬ ದೂರು ದಾಖಲಿಸಿದ್ದರು. ಪೊಲೀಸರು ಹುಡುಕಾಟ ನಡೆಸುತ್ತಿದ್ದರು.
ಲವರ್ ಮನೆಯಲ್ಲಿ ಪತ್ನಿ ಬಿಂದಾಸ್ ಜೀವನ
ಬಳಿಕ ಫೆಬ್ರವರಿ 20, 2026 ರಂದು, ಅಂಕಿತಾ ಪೋಷಕರು ಯೋಗೇಂದ್ರ ತಿವಾರಿ, ಪತಿ ರಾಜು ತಿವಾರಿ, ಪತಿ ರಾಜು ತಿವಾರಿ, ಮಗಳು ಮತ್ತು ಇತರ ಅಳಿಯಂದಿರು, ಮಗಳನ್ನು ಕೊಂದು ಶವವನ್ನು ಕಣ್ಮರೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು.
ಈ ವೇಳೆ ಬಂಧನ ಭೀತಿಯಿಂದ ರಾಜು ತಿವಾರಿ ಕುಟುಂಬ ಮನೆ ಬಿಟ್ಟು ಹೋಗಿತ್ತು. ಬಳಿಕ ಪೊಲೀಸ್ ಒತ್ತಡದಿಂದಾಗಿ ರಾಜು ತಿವಾರಿ ಫೆಬ್ರವರಿ 27 ರಂದು ನ್ಯಾಯಾಲಯದ ಮುಂದೆ ಶರಣಾಗಿದ್ದರು.
ಇದೀಗ ಅಂಕಿತಾ ತನ್ನ ಲವರ್ ಮನೆಯಲ್ಲಿ ಪತ್ತೆಯಾಗಿದ್ದು, ಪೊಲೀಸರು ರಾಜು ತಿವಾರಿಯನ್ನು ನ್ಯಾಯಾಲಯದ ಆದೇಶದ ಮೇರೆಗೆ ಬಿಡುಗಡೆ ಮಾಡಿದ್ದಾರೆ.