ಲಖನೌ: ನೈತಿಕ ಬಾಧ್ಯತೆಯನ್ನು ಕಾನೂನು ಬಾಧ್ಯತೆಯಾಗಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಅಲಹಾಬಾದ್ ಹೈಕೋರ್ಟ್, ಮಗನ ಮರಣದ ನಂತರ ತಮ್ಮ ಸೊಸೆಯೇ ಜೀವನಾಂಶ ನೀಡಬೇಕೆಂದು ಒತ್ತಾಯಿಸಿ ವೃದ್ಧ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಕಳೆದ ವರ್ಷ ಆಗಸ್ಟ್ನಲ್ಲಿ ಕೌಟುಂಬಿಕ ನ್ಯಾಯಾಲಯವು ತಮ್ಮ ಅರ್ಜಿಯನ್ನು ತಿರಸ್ಕರಿಸಿದ ನಂತರ ವೃದ್ಧ ದಂಪತಿ ಹೈಕೋರ್ಟ್ನ ಮೊರೆ ಹೋಗಿದ್ದರು. ಅರ್ಜಿದಾರರು ವೃದ್ಧರು ಮತ್ತು ಅನಕ್ಷರಸ್ಥರಾಗಿದ್ದು, ಉತ್ತರ ಪ್ರದೇಶದಲ್ಲಿ ಪೊಲೀಸ್ ಕಾನ್ಸ್ಟೆಬಲ್ ಆಗಿದ್ದ ತಮ್ಮ ಮಗನ ಮೇಲೆ ಅವಲಂಬಿತರಾಗಿದ್ದರು. ಆದರೆ, ಅವರ ಮಗ 2016ರಲ್ಲಿ ವಿವಾಹವಾದರು ಮತ್ತು 2021ರಲ್ಲಿ ಅವರು ನಿಧನರಾದರು. ಅವರ ಪತ್ನಿ ಕೂಡ ಉತ್ತರ ಪ್ರದೇಶ ಪೊಲೀಸ್ನಲ್ಲಿ ಕಾನ್ಸ್ಟೆಬಲ್ ಆಗಿದ್ದಾರೆ ಎಂದು ಅವರ ಪರ ವಕೀಲರು ವಾದಿಸಿದರು.
ತಮ್ಮ ಸೊಸೆಗೆ ಸಾಕಷ್ಟು ಸ್ವತಂತ್ರ ಆದಾಯವಿದೆ ಮತ್ತು ಮಗನ ಮರಣದ ನಂತರ ಸೇವಾ ಸೌಲಭ್ಯಗಳನ್ನು ಸಹ ಪಡೆದಿದ್ದಾರೆ. 'ವಯಸ್ಸಾದ ಅತ್ತೆ-ಮಾವನನ್ನು ನೋಡಿಕೊಳ್ಳುವುದು ಸೊಸೆಯ ನೈತಿಕ ಕರ್ತವ್ಯವಾಗಿದ್ದು, ಇದನ್ನು ಕಾನೂನು ಬಾಧ್ಯತೆ ಎಂದು ಗುರುತಿಸಬೇಕು ಎಂದು ಅವರು ವಾದಿಸಿದರು. ಆದಾಗ್ಯೂ, ನ್ಯಾಯಾಲಯವು ಈ ವಾದವನ್ನು ತಿರಸ್ಕರಿಸಿತು.
ಕೌಟುಂಬಿಕ ನ್ಯಾಯಾಲಯವು ಈ ಬಗ್ಗೆ ಈಗಾಗಲೇ ನಿರ್ಧಾರ ಕೈಗೊಂಡಿದೆ ಮತ್ತು ಇದೀಗ ಯಾವುದೇ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ಸೊಸೆ ಪರ ವಕೀಲರು ಹೇಳಿದರು.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 144ರ ಅಡಿಯಲ್ಲಿ ವೃದ್ಧ ದಂಪತಿ ಅರ್ಜಿ ಸಲ್ಲಿಸಿದ್ದಾರೆ. ಇದು ನ್ಯಾಯಾಲಯಗಳು ಪತ್ನಿ, ಮಗು ಅಥವಾ ಪೋಷಕರಂತಹ ಅವಲಂಬಿತ ಕುಟುಂಬ ಸದಸ್ಯರಿಗೆ ಜೀವನಾಂಶವನ್ನು ಒದಗಿಸಲು ಒಬ್ಬ ವ್ಯಕ್ತಿಗೆ ಆದೇಶಿಸಲು ಅನುವು ಮಾಡಿಕೊಡುತ್ತದೆ. ಆದಾಗ್ಯೂ, ಅತ್ತೆ-ಮಾವಂದಿರನ್ನು ಈ ಕಾನೂನಿನಲ್ಲಿ ಸೇರಿಸಲಾಗಿಲ್ಲ, ಆದ್ದರಿಂದ ದಂಪತಿಯ ಅರ್ಜಿಯು ಕಾನೂನುಬದ್ಧವಾಗಿ ಮಾನ್ಯವಾಗಿಲ್ಲ ಎಂದು ನ್ಯಾಯಾಲಯ ವಿವರಿಸಿದೆ.
'ಕಾನೂನು ಸೊಸೆಯು ತನ್ನ ಅತ್ತೆ-ಮಾವಂದಿರಿಗೆ ಆರ್ಥಿಕವಾಗಿ ಬೆಂಬಲ ನೀಡುವುದನ್ನು ಕಡ್ಡಾಯಗೊಳಿಸುವುದಿಲ್ಲ. ಶಾಸಕಾಂಗವು ಉದ್ದೇಶಪೂರ್ವಕವಾಗಿ ಅತ್ತೆ-ಮಾವಂದಿರನ್ನು ಈ ನಿಬಂಧನೆಯಿಂದ ಹೊರಗಿಟ್ಟಿದೆ. ಆದ್ದರಿಂದ ಸೊಸೆಯು ಅವರಿಗೆ ಜೀವನಾಂಶ ಒದಗಿಸುವುದು ಕಾನೂನುಬದ್ಧವಲ್ಲ' ಎಂದು ನ್ಯಾಯಮೂರ್ತಿ ಮದನ್ ಪಾಲ್ ಸಿಂಗ್ ಫೆಬ್ರುವರಿ 4 ರಂದು ನೀಡಿದ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.
ಸೊಸೆಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ಸಿಕ್ಕಿದೆ. ನೈತಿಕ ಕರ್ತವ್ಯದ ಪರಿಕಲ್ಪನೆಯನ್ನು ಶಾಸನಬದ್ಧ ಆದೇಶದ ಅನುಪಸ್ಥಿತಿಯಲ್ಲಿ ಅದನ್ನು ಕಾನೂನು ಬಾಧ್ಯತೆಯಾಗಿ ಜಾರಿಗೊಳಿಸಲಾಗುವುದಿಲ್ಲ. ಈ ನಿಬಂಧನೆಯ ಅಡಿಯಲ್ಲಿ ಜೀವನಾಂಶವನ್ನು ನಿರ್ದಿಷ್ಟವಾಗಿ ಪಟ್ಟಿ ಮಾಡಲಾದ ವರ್ಗಗಳಿಗೆ ಸೇರುವ ವ್ಯಕ್ತಿಗಳು ಮಾತ್ರ ಪಡೆಯಬಹುದು' ಎಂದು ನ್ಯಾಯಾಲಯವು ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದು ವೃದ್ಧ ದಂಪತಿಯ ಅರ್ಜಿಯನ್ನು ವಜಾಗೊಳಿಸಿತು.