ನವದೆಹಲಿ: ಪಂಚರಾಜ್ಯ ಚುನಾವಣೆಗಳಲ್ಲಿನ ಕಾಂಗ್ರೆಸ್ ಪಕ್ಷದ ಪ್ರದರ್ಶನ ಕುರಿತು ಸಂಸದ ಶಶಿತರೂರ್ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್ಗೆ ಗಂಭೀರ ಆತ್ಮಪರಿಶೀಲನೆ ಅಗತ್ಯವಿದೆ ಎಂದು ಹೇಳಿದ್ದಾರೆ.
ANI ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, 'ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮಿಶ್ರ ಫಲಿತಾಂಶಗಳ ಹಿನ್ನೆಲೆ ಕಾಂಗ್ರೆಸ್ ಪಕ್ಷವು “ಗಂಭೀರ ಆತ್ಮಪರಿಶೀಲನೆ” ನಡೆಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ತನ್ನ ತಂತ್ರಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಬೇಕು ಎಂದ ಅವರು, ಇದೇ ವೇಳೆ Kerala ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲುವು ಸಾಧಿಸಿ, ಎಲ್ಡಿಎಫ್ ಆಡಳಿತದ 10 ವರ್ಷಗಳ ಬಳಿಕ ಮತ್ತೆ ಅಧಿಕಾರಕ್ಕೆ ಬಂದಿರುವುದನ್ನು ಅವರು ಸ್ವಾಗತಿಸಿದರು. ಆದರೆ ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಪಕ್ಷದ ಸಾಧನೆ ನಿರಾಶಾಜನಕವಾಗಿದೆ ಎಂದು ಒಪ್ಪಿಕೊಂಡರು.
ಪಕ್ಷವು ಖಂಡಿತವಾಗಿಯೂ ಗಂಭೀರ ಆತ್ಮಪರಿಶೀಲನೆ ಮಾಡಬೇಕಾಗಿದೆ. ಕೇರಳದಲ್ಲಿ ನಾವು ಸರಿಯಾಗಿ ಮಾಡಿದದ್ದೇನು ಎಂಬುದಕ್ಕೆ ಉತ್ತಮ ಉದಾಹರಣೆ ಇದೆ. ಅದೇ ರೀತಿಯಲ್ಲಿ ಇತರಡೆ ಹೇಗೆ ಯಶಸ್ಸು ಸಾಧಿಸಬಹುದು ಎಂಬುದನ್ನು ಕಲಿಯಬೇಕು ಎಂದು ಅವರು ಹೇಳಿದರು.
ಮೋದಿ ಅಂಡ್ ಟೀಂಗೆ ಪ್ರಶಂಸೆ
ಇದೇ ವೇಳೆ ಶಶಿತರೂರ್ ಮೋದಿ ಅಂಡ್ ಟೀಂಗೆ ಪ್ರಶಂಸೆ ವ್ಯಕ್ತಪಡಿಸಿದರು. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಚುನಾವಣಾ ತಂತ್ರಗಳನ್ನು, ವಿಶೇಷವಾಗಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಉತ್ತಮವಾಗಿತ್ತು ಎಂದು ಪ್ರಶಂಸಿಸಿದರು.
“ಅವರು ಚುನಾವಣೆಗಳನ್ನು ಅತ್ಯಂತ ವೃತ್ತಿಪರವಾಗಿ ನಡೆಸುತ್ತಾರೆ. ಬಲವಾದ ಸಂಘಟನೆ ಮತ್ತು ಸಾಕಷ್ಟು ಸಂಪನ್ಮೂಲಗಳಿವೆ. ಅದರಿಂದ ಎಲ್ಲರೂ ಕಲಿಯಬೇಕಾದ ವಿಷಯಗಳಿವೆ. ಆದರೆ ರಾಜಕೀಯ ಸಂದೇಶಗಳು ಜನರನ್ನು ಒಂದಾಗಿಸುವಂತಿರಬೇಕು ಎಂಬುದನ್ನು ಅವರು ಒತ್ತಿಹೇಳಿದರು. ಭಾರತೀಯರನ್ನು ವಿಭಜಿಸುವುದಕ್ಕಿಂತ ಒಂದಾಗಿಸುವ ಸಂದೇಶವೇ ಇರಲಿ ಎಂದು ನಾನು ಆಶಿಸುತ್ತೇನೆ ಎಂದರು.
99 ಸೋಲು: ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವ್ಯಂಗ್ಯ
ಈ ನಡುವೆ ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷವು ಸತತವಾಗಿ ಸೋಲುಗಳನ್ನು ಎದುರಿಸುತ್ತಿರುವುದನ್ನು ಬಿಜೆಪಿ ನಾಯಕರು '99 ಸೋಲು' ಅಥವಾ '95ನೇ ಸೋಲು' ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿ ನಾಯಕರು ರಾಹುಲ್ ಗಾಂಧಿ ಅವರನ್ನು 'ಸೋಲಿನ ಸರದಾರ' ಎಂದು ಸಂಬೋಧಿಸಿ, ಅವರ ನಾಯಕತ್ವದಲ್ಲಿ ಪಕ್ಷವು 95ಕ್ಕೂ ಹೆಚ್ಚು ಸೋಲುಗಳನ್ನು ಕಂಡಿದೆ ಎಂದು ಆರೋಪಿಸಿದ್ದಾರೆ.
ಬಂಗಾಳದಲ್ಲಿ ಬಿಜೆಪಿ 100 ಸ್ಥಾನಗಳನ್ನು ಅಕ್ರಮವಾಗಿ ಲೂಟಿ ಮಾಡಿದೆ ಎಂಬ ಮಮತಾ ಬ್ಯಾನರ್ಜಿ ಅವರ ಆರೋಪದ ನಂತರ, ಬಿಜೆಪಿ, ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಕಾಂಗ್ರೆಸ್ 99 ಸೋಲುಗಳನ್ನು ಕಂಡಿದೆ. ಸೋಲುಗಳ ಸಂಖ್ಯೆ ಸೆಂಚುರಿಯತ್ತ ಸಾಗುತ್ತಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.