ನಟ-ರಾಜಕಾರಣಿ ವಿಜಯ್ ಅವರ ಪಕ್ಷ ತಮಿಳಿಗ ವೆಟ್ರಿ ಕಳಗಂ (TVK) ತಮಿಳುನಾಡು ವಿಧಾನಸಭೆ ಚುನಾವಣಾ ಫಲಿತಾಂಶಗಳಲ್ಲಿ ಮುನ್ನಡೆ ಸಾಧಿಸಿದ ನಂತರ ದಕ್ಷಿಣ ಭಾರತ ಚಿತ್ರರಂಗದ ಹಲವು ನಟರು ಅಭಿನಂದನೆ ಸಲ್ಲಿಸಿದ್ದಾರೆ. ರಜನಿಕಾಂತ್,ಚಿರಂಜೀವಿ, ರಾಮ್ ಚರಣ್, ರಶ್ಮಿಕಾ ಮಂದಣ್ಣ ಮೊದಲಾದವರು ವಿಜಯ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.
ನಟ ಪ್ರಕಾಶ್ ರಾಜ್ ತಮಿಳು ನಾಡು ಚುನಾವಣಾ ಫಲಿತಾಂಶಗಳ ಬಗ್ಗೆ ಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ರಾಜಕೀಯ ಮತ್ತು ಸಾರ್ವಜನಿಕ ಚರ್ಚೆಗಳ ಸ್ಥಿತಿಯನ್ನು ಉಲ್ಲೇಖಿಸಿ ಸಮಾಜ ಅಭಿಮಾನಿಗಳ ಆಧಿಪತ್ಯಕ್ಕೆ ಒಳಗಾಗಿದೆ ಎಂದು ಅವರು ಟೀಕಿಸಿದ್ದಾರೆ.
ಪ್ರಕಾಶ್ ರಾಜ್ ಅವರು ತಮ್ಮ ಎಕ್ಸ್ ಪೋಸ್ಟ್ನಲ್ಲಿ, ನಮಸ್ಕಾರ ತಮಿಳುನಾಡು.. ಕಾಮರಾಜ್ ಸೋತರು. ಎಂ.ಕೆ. ಸ್ಟಾಲಿನ್ ಸೋತಿದ್ದಾರೆ. ಸಮಾಜ ಅಭಿಮಾನಿಗಳ ಪ್ರಭಾವಕ್ಕೆ ಒಳಗಾಗಿದೆ. ಇದು ರಾಜಕೀಯವಾಗಿಲ್ಲ ಎಂಬುದು ಸಾಬೀತಾಗಿದೆ ಎಂದು ಬರೆದಿದ್ದಾರೆ.
ರಾಜಕೀಯ ಜಾಗೃತಿ ಮೂಡಿಸುವ ಕೆಲಸ ಯಾವಾಗಲೂ ವಿರೋಧ ಪಕ್ಷದ ಕೆಲಸವೇ ಆಗಿರುತ್ತದೆ. ನಮ್ಮ ಪಯಣ ಮುಂದುವರಿಸೋಣ. ಗೆದ್ದವರಿಗೆ ಸಾರ್ವಜನಿಕ ಸೇವೆಯಲ್ಲಿ ಯಶಸ್ಸಿಗಾಗಿ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಒಬ್ಬ X ಬಳಕೆದಾರ, ನೀವು ತಮಿಳಿಗರಲ್ಲ, ನಮ್ಮ ಪರವಾಗಿ ಮಾತನಾಡಬೇಡಿ ಎಂದು ಬರೆದಿದ್ದಾನೆ. ಮತ್ತೊಬ್ಬ ಬಳಕೆದಾರ, ನೀವೂ ನಟರೇ, ಆದರೆ ಚುನಾವಣೆಯಲ್ಲಿ ಭಾರೀ ಸೋಲು ಕಂಡಿದ್ದೀರಿ ಎಂದು ಟೀಕಿಸಿದ್ದಾರೆ. ಮತ್ತೊಬ್ಬ ಅಭಿಮಾನಿ, ನೀವು ಕರ್ನಾಟಕದಲ್ಲಿ ಇರುತ್ತೀರಿ. ತಮಿಳುನಾಡು ರಾಜಕೀಯಕ್ಕೆ ಯಾಕೆ ಪ್ರವೇಶಿಸುತ್ತೀರಿ, ನಮಗೆ ಏನು ಮಾಡಬೇಕು ಎಂಬುದು ಗೊತ್ತಿದೆ. ನಿಮ್ಮ ಸಲಹೆ ಬೇಕಿಲ್ಲ ಎಂದು ಟೀಕಿಸಿದ್ದಾರೆ.
ತಮಿಳುನಾಡು ಚುನಾವಣೆಯಲ್ಲಿ , ವಿಜಯ್ ಅವರ ಟಿವಿಕೆ ಪಕ್ಷವು 108 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದು, ತನ್ನ ಮೊದಲ ಚುನಾವಣೆಯಲ್ಲೇ ಅತಿ ಹೆಚ್ಚು ಶೇಕಡಾವಾರು ಮತ ದಾಖಲಿಸಿದೆ.