ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೇ 9ರಂದು ಕೊಲ್ಕತ್ತಾದ ಕೇಂದ್ರ ಭಾಗದಲ್ಲಿರುವ ಬ್ರಿಗೇಡ್ ಪೆರೇಡ್ ಗ್ರೌಂಡ್ ನಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಈ ಸಮಾರಂಭವನ್ನು ಐತಿಹಾಸಿಕ ಕ್ಷಣವೆಂದು ಪರಿಗಣಿಸಲಾಗುತ್ತಿದೆ. ದೀರ್ಘಕಾಲ ಪಶ್ಚಿಮ ಬಂಗಾಳದಲ್ಲಿ ಬಲವಾದ ನೆಲೆ ನಿರ್ಮಿಸಲು ಹೋರಾಡಿದ್ದ ಭಾರತೀಯ ಜನತಾ ಪಾರ್ಟಿ ಈಗ ರಾಜ್ಯದಲ್ಲಿ ಅಧಿಕಾರಕ್ಕೆ ಏರುತ್ತಿದೆ. ಹಲವಾರು ಕೇಂದ್ರ ಸಚಿವರು, ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಹಾಗೂ ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಯಾರಾಗುತ್ತಾರೆ ಬಂಗಾಳ ಮುಖ್ಯಮಂತ್ರಿ?
ಮುಖ್ಯಮಂತ್ರಿಯ ಹೆಸರನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ. ಆದರೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಪ್ರಮುಖ ಸ್ಪರ್ಧಿಯಾಗಿದ್ದಾರೆ ಎಂದು ವ್ಯಾಪಕವಾಗಿ ಹೆಸರು ಕೇಳಿಬರುತ್ತಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ , ಕೇಂದ್ರ ಸಚಿವ ಸುಕಂತ ಮಜುಂದಾರ್ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಸ್ವಪನ್ ದಾಸ್ ಗುಪ್ತ ಅವರ ಹೆಸರೂ ಪರಿಗಣನೆಯಲ್ಲಿದೆ.
ಕಾರ್ಯಕ್ರಮದ ಘೋಷಣೆ ವೇಳೆ ಭಟ್ಟಾಚಾರ್ಯ ಅವರು, ಹೊಸ ಬಿಜೆಪಿ ಸರ್ಕಾರ ಮೇ 9ರಂದು ಬೆಳಗ್ಗೆ 10 ಗಂಟೆಗೆ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಪ್ರಮಾಣವಚನ ಸ್ವೀಕರಿಸಲಿದೆ ಎಂದು ಹೇಳಿದರು. ವಿಶೇಷವಾಗಿ, ಈ ಸಮಾರಂಭವು ಬಂಗಾಳಿ ಕ್ಯಾಲೆಂಡರ್ನ ಬೈಶಾಖ ಮಾಸದ 25ನೇ ದಿನ ನಡೆಯಲಿದ್ದು, ರಾಜ್ಯಾದ್ಯಂತ ರವೀಂದ್ರ ಜಯಂತಿ ಎಂದು ಆಚರಿಸಲಾಗುವ ರವೀಂದ್ರನಾಥ್ ಠ್ಯಾಗೋರ್ ಅವರ ಜನ್ಮದಿನದಂದೇ ಕೂಡಿಬಂದಿದೆ. ಇದರಿಂದ ಕಾರ್ಯಕ್ರಮಕ್ಕೆ ಹೆಚ್ಚಿನ ಸಾಂಸ್ಕೃತಿಕ ಮಹತ್ವ ಲಭಿಸಿದೆ.
ಚುನಾವಣಾ ಪ್ರಚಾರದ ವೇಳೆ ಅಮಿತ್ ಶಾ, ಮುಖ್ಯಮಂತ್ರಿ ರಾಜ್ಯದ ಮಣ್ಣಿನ ಮಗನಾಗಿರುತ್ತಾನೆ; ಅವರು ಪಶ್ಚಿಮ ಬಂಗಾಳದಲ್ಲೇ ಹುಟ್ಟಿ, ಅಲ್ಲಿಯೇ ಶಿಕ್ಷಣ ಪಡೆದಿರುತ್ತಾರೆ” ಎಂದು ಪದೇಪದೇ ಹೇಳುತ್ತಿದ್ದರು. ಇದು ಬಿಜೆಪಿ ಹೊರಗಿನವರ ರಾಜಕೀಯ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ ಎಂಬ ತೃಣಮೂಲ ಕಾಂಗ್ರೆಸ್ನ ಆರೋಪಕ್ಕೆ ಪ್ರತಿಕ್ರಿಯೆಯಾಗಿ ನೋಡಲಾಗುತ್ತಿದೆ.
ಪಕ್ಷದ ನಾಯಕರ ಪ್ರಕಾರ, ದಿನಾಂಕದ ಆಯ್ಕೆ ಮತ್ತು ಸಂದೇಶವು ರಾಜ್ಯದ ಸಾಂಸ್ಕೃತಿಕ ಹಾಗೂ ಬೌದ್ಧಿಕ ಪರಂಪರೆಯೊಂದಿಗೆ ಸಂಪರ್ಕ ಸಾಧಿಸುವ ವಿಸ್ತೃತ ರಾಜಕೀಯ ತಂತ್ರದ ಭಾಗವಾಗಿದೆ.
ಇದರ ನಡುವೆ, ಭಾವನಿಪುರ ಹಾಗೂ ನಂದಿಗ್ರಾಮ ಎರಡೂ ಕ್ಷೇತ್ರಗಳಲ್ಲಿ ಜಯಗಳಿಸಿದ ಸುವೇಂದು ಅಧಿಕಾರಿ ಅವರು, ಪಕ್ಷದ ಸೂಚನೆಯಂತೆ ಒಂದು ಕ್ಷೇತ್ರವನ್ನು 10 ದಿನಗಳೊಳಗೆ ತ್ಯಜಿಸುವುದಾಗಿ ಹೇಳಿದ್ದಾರೆ. ಯಾವ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂಬುದನ್ನು ಪಕ್ಷವೇ ನಿರ್ಧರಿಸುತ್ತದೆ. ಭಾವನಿಪುರ ಮತ್ತು ನಂದಿಗ್ರಾಮದ ಜನರ ಮೇಲಿನ ನನ್ನ ಜವಾಬ್ದಾರಿಯನ್ನು ನಾನು ಮರೆಯುವುದಿಲ್ಲ ಎಂದು ಹೇಳಿದ್ದಾರೆ.