ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಮೊದಲ ಸಿಎಂ ಆಗಿ ಸುವೇಂದು ಅಧಿಕಾರಿ ಇಂದು ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇತಿಹಾಸ ನಿರ್ಮಾಣವಾಗಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವರು ಭಾಗವಹಿಸಿದ್ದಾರೆ.
ನರೇಂದ್ರ ಮೋದಿ ಅವರು ಸಾರ್ವಜನಿಕ ಸಭೆಯಲ್ಲಿ ಪಶ್ಚಿಮ ಬಂಗಾಳದ ಜನರಿಗೆ ಆಳವಾದ ಗೌರವ ವ್ಯಕ್ತಪಡಿಸಿ, ರಾಜ್ಯದ “ಜನಶಕ್ತಿ”ಗೆ ತಲೆಬಾಗುತ್ತೇನೆ ಎಂದು ಹೇಳಿ ಸಾಷ್ಠಾಂಗ ನಮಸ್ಕಾರ ಮಾಡಿದ್ದಾರೆ. ಜನರ ಶಕ್ತಿ ಮತ್ತು ಪ್ರಜಾಪ್ರಭುತ್ವದ ಮನೋಭಾವವನ್ನು ಅವರು ಪ್ರಶಂಸಿಸಿದರು.
ಪಶ್ಚಿಮ ಬಂಗಾಳದ ಜನರು ನೀಡಿದ ಭಾರೀ ಜನಾದೇಶ ಐತಿಹಾಸಿಕವಾಗಿದ್ದು, ಅದಕ್ಕೆ ಕೃತಜ್ಞತೆಯ ಸೂಚಕವಾಗಿ ಮೋದಿ ಕೈಮುಗಿದು ಜನರಿಗೆ ಗೌರವ ಸಲ್ಲಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಕೇಂದ್ರ ಸಚಿವರು ಮತ್ತು ಎನ್ಡಿಎ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು, ಮುಖ್ಯಮಂತ್ರಿ-ನಿಯೋಜಿತ ಸುವೇಂದು ಅಧಿಕಾರಿ ಹಾಗೂ ಅವರ ಸಚಿವ ಸಂಪುಟದ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದರು.
ಪಶ್ಚಿಮ ಬಂಗಾಳದಲ್ಲಿ ಮೊದಲ ಬಿಜೆಪಿ ಸರ್ಕಾರ ರಚನೆಯ ಹಿನ್ನೆಲೆ ದೇಶದ ವಿವಿಧ ಭಾಗಗಳಿಂದ ಹಾಗೂ ವಿದೇಶಗಳಿಂದ ಸಾವಿರಾರು ಬಿಜೆಪಿ ಬೆಂಬಲಿಗರು ನಗರಕ್ಕೆ ಆಗಮಿಸಿದ್ದು, ಬ್ರಿಗೇಡ್ ಮೈದಾನ ಕೇಸರಿ ಬಣ್ಣದ ಸಮುದ್ರದಂತಾಗಿದೆ.
ನರೇಂದ್ರ ಮೋದಿ
ಅಮಿತ್ ಶಾ
ರಾಜನಾಥ್ ಸಿಂಗ್
ನಿತಿನ್ ನಬಿನ್
ಆರ್ ಎನ್ ರವಿ
ಜೆ ಪಿ ನಡ್ಡಾ
ಯೋಗಿ ಆದಿತ್ಯನಾಥ್
ರೇಖಾ ಗುಪ್ತಾ
98 ವರ್ಷದ ಹಿರಿಯ ಬಿಜೆಪಿ ಕಾರ್ಯಕರ್ತ ಮಖನ್ ಲಾಲ್ ಸರ್ಕಾರ್
ನಗರದ ವಿವಿಧ ಭಾಗಗಳಲ್ಲಿ ಬಿಜೆಪಿ ಧ್ವಜಗಳು ಮತ್ತು ಕೇಸರಿ ಬ್ಯಾನರ್ಗಳನ್ನು ಹಿಡಿದ ಬೆಂಬಲಿಗರು “ಜೈ ಶ್ರೀ ರಾಮ್” ಘೋಷಣೆಗಳ ನಡುವೆ ಸಮಾರಂಭ ಸ್ಥಳದತ್ತ ಮೆರವಣಿಗೆಯಲ್ಲಿ ತೆರಳಿದರು. ಪ್ರಧಾನಿ ಮೋದಿ ಮತ್ತು ಸುವೇಂದು ಅಧಿಕಾರಿಗೆ ಬೆಂಬಲ ಸೂಚಿಸುವ ಘೋಷಣೆಗಳೂ ಮೊಳಗಿದವು.
ಇದು ಐತಿಹಾಸಿಕ ದಿನ. ಪಶ್ಚಿಮ ಬಂಗಾಳವು ಟಿಎಂಸಿಯ ಹಿಡಿತದಿಂದ ಮುಕ್ತವಾಗುತ್ತಿರುವ ಕ್ಷಣವನ್ನು ನೋಡಲು ನಾವು ಬಂದಿದ್ದೇವೆ,” ಎಂದು ಜಾರ್ಖಂಡ್ ನಿಂದ ಬಂದ ಬಿಜೆಪಿ ಬೆಂಬಲಿಗರೊಬ್ಬರು ಹೇಳಿದರು. ಮತ್ತೊಬ್ಬ ಮಧ್ಯವಯಸ್ಕ ವ್ಯಕ್ತಿ, ಧೋತಿ-ಪೈಜಾಮಾ ಧರಿಸಿ, ಈ ಐತಿಹಾಸಿಕ ಕ್ಷಣವನ್ನು ನೇರವಾಗಿ ನೋಡುವುದಕ್ಕಾಗಿ ಕೆನಡಾದಿಂದ ಬಂದಿದ್ದೇನೆ ಎಂದು ಹೇಳಿದರು.
ವಿಶಾಲ ಬ್ರಿಗೇಡ್ ಪೆರೇಡ್ ಮೈದಾನವು ಹಬ್ಬದ ವಾತಾವರಣ ತಾಳಿದ್ದು, ಜನಪದ ಕಲಾ ಪ್ರದರ್ಶನಗಳು ಮತ್ತು ಭಕ್ತಿಗೀತೆಗಳು ಸಮಾರಂಭಕ್ಕೆ ರಂಗು ತುಂಬಿದವು. ಸಾಂಪ್ರದಾಯಿಕ ಛೌ ನೃತ್ಯ ತಂಡಗಳು ಹಾಗೂ ಆದಿವಾಸಿ ನೃತ್ಯ ಪ್ರದರ್ಶನಗಳು ಜನರನ್ನು ರಂಜಿಸಿದವು.
ಮುಖ್ಯ ವೇದಿಕೆಯ ಹಿನ್ನೆಲೆಯು ಪಶ್ಚಿಮ ಬಂಗಾಳದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸಿತು. ದಕ್ಷಿಣೇಶ್ವರ ದೇವಸ್ಥಾನ, ದುರ್ಗಾ ಮಾತೆ ಹಾಗೂ ರಾಜ್ಯದ ಸಾಂಸ್ಕೃತಿಕ ಗುರುತಿನ ಪರಂಪರೆಯ ಚಿಹ್ನೆಗಳು ಅಲಂಕರಿಸಿದ್ದವು. ಡೊಳ್ಳು ಬಾರಿಸಿ, ನೃತ್ಯ ಮಾಡುತ್ತಾ ಬೆಂಬಲಿಗರು ಸಂಭ್ರಮಿಸಿದರು. ಅನೇಕರಿಗೆ ಇದು ರಾಜ್ಯದಲ್ಲಿ ರಾಜಕೀಯ ಬದಲಾವಣೆಯ ಹಬ್ಬದಂತಿತ್ತು.
ವೇದಿಕೆಯ ಮೇಲೆ ಪ್ರಧಾನಿ ಮೋದಿ ಅವರು ಪಶ್ಚಿಮ ಬಂಗಾಳದ ಹಿರಿಯ ಬಿಜೆಪಿ ಕಾರ್ಯಕರ್ತರಲ್ಲಿ ಒಬ್ಬರಾದ ಮಖನ್ ಲಾಲ್ ಸರ್ಕಾರ್ ಅವರ ಆಶೀರ್ವಾದ ಪಡೆದರು.
98 ವರ್ಷದ ಮಖನ್ಲಾಲ್ ಸರ್ಕಾರ್ ಅವರು ಸ್ವಾತಂತ್ರ್ಯಾನಂತರ ಭಾರತದ ರಾಷ್ಟ್ರೀಯ ಚಳವಳಿಯ ಆರಂಭಿಕ ಹಂತದ ಪ್ರಮುಖ ತಳಮಟ್ಟದ ಕಾರ್ಯಕರ್ತರಲ್ಲಿ ಒಬ್ಬರಾಗಿದ್ದಾರೆ.
1952ರಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಅವರೊಂದಿಗೆ ಕಾಶ್ಮೀರದಲ್ಲಿ ಭಾರತೀಯ ತ್ರಿವರ್ಣ ಧ್ವಜ ಹಾರಿಸುವ ಚಳವಳಿಯಲ್ಲಿ ಭಾಗವಹಿಸಿದ್ದಾಗ ಅವರನ್ನು ಬಂಧಿಸಲಾಗಿತ್ತು. 1980ರಲ್ಲಿ ಬಿಜೆಪಿ ಸ್ಥಾಪನೆಯಾದ ಬಳಿಕ ಅವರು ಪಶ್ಚಿಮ ದಿನಾಜ್ಪುರ, ಜಲ್ಪೈಗುರಿ ಮತ್ತು ದಾರ್ಜಿಲಿಂಗ್ ಜಿಲ್ಲೆಗಳ ಸಂಘಟನಾ ಸಂಯೋಜಕರಾಗಿ ಕಾರ್ಯನಿರ್ವಹಿಸಿದರು. ಕೇವಲ ಒಂದು ವರ್ಷದಲ್ಲಿ ಸುಮಾರು 10,000 ಸದಸ್ಯರನ್ನು ಸೇರ್ಪಡೆಗೊಳಿಸಲು ಸಹಾಯ ಮಾಡಿದರು.
1981ರಿಂದ ಏಳು ವರ್ಷಗಳ ಕಾಲ ನಿರಂತರವಾಗಿ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಆ ಕಾಲದಲ್ಲಿ ಬಿಜೆಪಿ ನಾಯಕರಿಗೆ ಒಂದೇ ಹುದ್ದೆಯಲ್ಲಿ ಎರಡು ವರ್ಷಕ್ಕಿಂತ ಹೆಚ್ಚು ಕಾಲ ಉಳಿಯುವುದು ಅಪರೂಪವಾಗಿದ್ದ ಸಂದರ್ಭದಲ್ಲಿ ಇದು ವಿಶಿಷ್ಟ ಸಾಧನೆ ಎಂದು ಪರಿಗಣಿಸಲಾಗಿದೆ.