ಕೋಲ್ಕತ್ತಾ: ಸುವೇಂದು ಅಧಿಕಾರಿ ಅವರು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ರಾಜ್ಯದಲ್ಲಿ ಚುನಾವಣೆ ಆಯೋಗ ನಡೆಸಿದ ಎಸ್ಐಆರ್ ಗೆ ವಿಶೇಷ ವೀಕ್ಷಕರಾಗಿದ್ದ ವ್ಯಕ್ತಿಯನ್ನು ತಮ್ಮ ಸಲಹೆಗಾರರನ್ನಾಗಿ ನೇಮಕ ಮಾಡಿದ್ದಾರೆ. ಸುವೇಂದು ಅಧಿಕಾರಿಯ ಈ ನಡೆ ಎಸ್ಐಆರ್ ಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಆರೋಪಕ್ಕೆ ಪುಷ್ಟಿ ನೀಡುವಂತಿದೆ.
ಅಧಿಸೂಚನೆಯ ಪ್ರಕಾರ, ನಿವೃತ್ತ ಐಎಎಸ್ ಅಧಿಕಾರಿ ಸುಬ್ರತಾ ಗುಪ್ತಾ ಅವರನ್ನು ಇಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಸಲಹೆಗಾರರನ್ನಾಗಿ ನೇಮಿಸಲಾಗಿದೆ.
1990ರ ಬ್ಯಾಚ್ನ ಐಎಎಸ್ ಅಧಿಕಾರಿ ಗುಪ್ತಾ ಅವರನ್ನು ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ನಡೆದ ಎಸ್ಐಆರ್ ಗೆ ವಿಶೇಷ ವೀಕ್ಷಕರಾಗಿ ಚುನಾವಣಾ ಆಯೋಗ ನೇಮಕ ಮಾಡಿತ್ತು.
"ಗುಪ್ತ ಅವರ ಅಪಾರ ಅನುಭವವು ನೀತಿ ಸಮನ್ವಯ ಮತ್ತು ಆಡಳಿತ ಸಂಬಂಧಿತ ವಿಷಯಗಳಲ್ಲಿ ಹೊಸ ಸರ್ಕಾರಕ್ಕೆ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೊಸ ಬಿಜೆಪಿ ಸರ್ಕಾರವು ಮತ್ತೊಂದು ಅಧಿಸೂಚನೆಯ ಪ್ರಕಾರ ಐಎಎಸ್ ಅಧಿಕಾರಿ ಶಾಂತನು ಬಾಲಾ ಅವರನ್ನು ಮುಖ್ಯಮಂತ್ರಿಯವರ ಖಾಸಗಿ ಕಾರ್ಯದರ್ಶಿಯಾಗಿ ನೇಮಿಸಿದೆ.
2017 ರ ಬ್ಯಾಚ್ನ ಅಧಿಕಾರಿ ಬಾಲಾ ಅವರು, ತಮ್ಮ ಕೊನೆಯ ನಿಯೋಜನೆಯಲ್ಲಿ ದಕ್ಷಿಣ 24 ಪರಗಣದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದರು.
ಅಧಿಸೂಚನೆಗಳ ಪ್ರಕಾರ, ಈ ಇಬ್ಬರೂ ಅಧಿಕಾರಿಗಳಿಗೆ ತಮ್ಮ ಹೊಸ ಜವಾಬ್ದಾರಿಯನ್ನು ತಕ್ಷಣವೇ ವಹಿಸಿಕೊಳ್ಳುವಂತೆ ಸೂಚಿಸಲಾಗಿದೆ.