ಮಖನ್ ಲಾಲ್ ಕಾಲಿಗೆರಗಿದ ಪ್ರಧಾನಿ ಮೋದಿ ANI
ದೇಶ

ತುಂಬಿದ ವೇದಿಕೆಯಲ್ಲಿ 97 ವರ್ಷ ವಯಸ್ಸಿನ ವೃದ್ಧರ ಕಾಲಿಗೆ ಬಿದ್ದ ಪ್ರಧಾನಿ ಮೋದಿ, ಯಾರು ಈ ಮಖನ್ ಲಾಲ್?

98 ವರ್ಷದ ವಯಸ್ಸಿನಲ್ಲಿಯೂ ಮಖನ್‌ಲಾಲ್ ಸರ್ಕಾರ್ ಸ್ವಾತಂತ್ರ್ಯಾನಂತರ ಭಾರತದ ರಾಷ್ಟ್ರವಾದಿ ಚಳವಳಿಗೆ ಸಂಬಂಧಿಸಿದ ಆರಂಭಿಕ ತಳಮಟ್ಟದ ನಾಯಕರಲ್ಲಿ ಒಬ್ಬರಾಗಿದ್ದಾರೆ.

ಕೊಲ್ಕತ್ತಾ: ಶನಿವಾರ ಬೆಳಿಗ್ಗೆ ಕೊಲ್ಕತ್ತಾದಲ್ಲಿ ನಡೆದ ಸುವೇಂದು ಅಧಿಕಾರಿ ಅವರ ಪ್ರಮಾಣವಚನ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 97 ವರ್ಷದ ಹಿರಿಯ ವ್ಯಕ್ತಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಘಟನೆ ವ್ಯಾಪಕ ವೈರಲ್ ಆಗುತ್ತಿದೆ.

ಕೊಲ್ಕತ್ತಾದ ಕೇಂದ್ರ ಭಾಗದಲ್ಲಿರುವ ಐತಿಹಾಸಿಕ ಬ್ರಿಗೇಡ್ ಪೆರೇಡ್ ಮೈದಾನವು ಶನಿವಾರ ಮತ್ತೊಮ್ಮೆ ಪಶ್ಚಿಮ ಬಂಗಾಳದ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿ ಹೊರಹೊಮ್ಮಿತ್ತು. ರಾಜ್ಯದ ಮೊದಲ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಸರ್ಕಾರದ ಪ್ರಮಾಣವಚನ ಸಮಾರಂಭಕ್ಕೆ ಈ ಮೈದಾನ ವೇದಿಕೆಯಾಗಿತ್ತು.

ಈ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ಆರ್‌ಎನ್ ರವಿ ಅವರು ಬಿಜೆಪಿಯ ಸುವೇಂದು ಅಧಿಕಾರಿಗೆ ಹುದ್ದೆ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ಸುವೇಂದು ಮಾತ್ರವಲ್ಲದೇ ಇತರೆ ಐದು ಶಾಸಕರು ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆ ಮೂಲಕ ಪಶ್ಚಿಮ ಬಂಗಾಳದಲ್ಲಿ ರಾಜ್ಯದಲ್ಲಿ ಹೊಸ ರಾಜಕೀಯ ಯುಗಕ್ಕೆ ಚಾಲನೆ ನೀಡಿದಂತಾಗಿದೆ.

ಈ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಎನ್‌ಡಿಎ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಹಿರಿಯ ಬಿಜೆಪಿ ನಾಯಕರು ಸೇರಿದಂತೆ ಗಣ್ಯ ರಾಜಕೀಯ ನಾಯಕರು ಉಪಸ್ಥಿತರಿದ್ದರು.

ವೇದಿಕೆಯಲ್ಲಿ ನೋಡುತ್ತಲೇ ಕಾಲಿಗೆರಗಿದ ಪ್ರಧಾನಿ ಮೋದಿ

ಇನ್ನು ಗಣ್ಯ ವ್ಯಕ್ತಿಗಳಿಂದ ತುಂಬಿದ್ದ ವೇದಿಕೆಯಲ್ಲಿ ಪ್ರಧಾನಿ ಮೋದಿ 97 ವರ್ಷದ ಹಿರಿಯ ವ್ಯಕ್ತಿ ಮಖನ್‌ಲಾಲ್ ಸರ್ಕಾರ್ ರನ್ನು ನೋಡಿ ಅವರ ಕಾಲಿಗೆರಗಿ ಆಶೀರ್ವಾದ ಪಡೆದರು. ಈ ವೇಳೆ ಮಖನ್ ಲಾಲ್ ಸರ್ಕಾರ್ ಕೂಡ ಭಾವನಾತ್ಮಕವಾಗಿ ಪ್ರಧಾನಿ ಮೋದಿ ಅವರನ್ನು ಅಪ್ಪಿಕೊಂಡು ಆಶೀರ್ವಾದ ನೀಡಿದರು.

ಇನ್ನು ವರ್ಷಗಳ ಕಾಲ ವಿರೋಧ ಪಕ್ಷಗಳು ಬಿಜೆಪಿಯನ್ನು “ಹೊರಗಿನ ರಾಜಕೀಯ ಶಕ್ತಿ” ಎಂದು ಟೀಕಿಸುತ್ತಿದ್ದರೂ, ಬಂಗಾಳದ ಸಾಂಸ್ಕೃತಿಕ ಮತ್ತು ಸಾಮಾಜಿಕ ಬೇರುಗಳೊಂದಿಗೆ ನಾವು ಆಳವಾಗಿ ಜೋಡಿಸಿಕೊಂಡಿದ್ದೇವೆ ಎಂಬ ಸಂದೇಶವನ್ನು ಬಿಜೆಪಿ ನೀಡಲು ಪ್ರಯತ್ನಿಸಿತು.

ಬಂಗಾಳಿ ಸಾಂಸ್ಕೃತಿಕ ಅಸ್ತಿತ್ವದೊಂದಿಗೆ ರಾಜಕೀಯ ಸಂಕೇತಗಳನ್ನು ಮಿಶ್ರಣಗೊಳಿಸುವ ಉದ್ದೇಶದಿಂದ ಬಿಜೆಪಿ ಹಲವು ಗಣ್ಯರನ್ನು ಆಹ್ವಾನಿಸಿತ್ತು. ಅವರಲ್ಲಿ ಪಶ್ಚಿಮ ಬಂಗಾಳ ಬಿಜೆಪಿಯ ಅತ್ಯಂತ ಹಿರಿಯ ಕಾರ್ಯಕರ್ತರಲ್ಲಿ ಒಬ್ಬರಾದ ಮಖನ್‌ಲಾಲ್ ಸರ್ಕಾರ್ ಕೂಡ ಸೇರಿದ್ದರು.

ಯಾರು ಈ ಮಖನ್ ಲಾಲ್?

ಈ ಮಖನ್‌ಲಾಲ್ ಸರ್ಕಾರ್ ಅವರು ಸಿಲಿಗುರಿ ನಿವಾಸಿ ಹಾಗೂ ಬಿಜೆಪಿ ಆರಂಭಿಕ ದಿನಗಳಲ್ಲಿನ ಹಿರಿಯ ರಾಜ್ಯ ನಾಯಕರಲ್ಲಿ ಒಬ್ಬರಾಗಿದ್ದಾರೆ. 98 ವರ್ಷದ ವಯಸ್ಸಿನಲ್ಲಿಯೂ ಮಖನ್‌ಲಾಲ್ ಸರ್ಕಾರ್ ಸ್ವಾತಂತ್ರ್ಯಾನಂತರ ಭಾರತದ ರಾಷ್ಟ್ರವಾದಿ ಚಳವಳಿಗೆ ಸಂಬಂಧಿಸಿದ ಆರಂಭಿಕ ತಳಮಟ್ಟದ ನಾಯಕರಲ್ಲಿ ಒಬ್ಬರಾಗಿದ್ದಾರೆ.

ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಅವರ ಪ್ರಕಾರ, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ದೇಶಭಕ್ತಿ ಗೀತೆ ಹಾಡಿದ ಕಾರಣಕ್ಕೆ ಸರ್ಕಾರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. 1952ರಲ್ಲಿ ಕಾಶ್ಮೀರದಲ್ಲಿ ಭಾರತೀಯ ತ್ರಿವರ್ಣ ಧ್ವಜ ಹಾರಿಸುವ ಚಳವಳಿಯ ಸಂದರ್ಭದಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿ ಅವರೊಂದಿಗೆ ತೆರಳಿದ್ದ ಮಖನ್‌ಲಾಲ್ ಸರ್ಕಾರ್ ಅವರನ್ನು ಬಂಧಿಸಲಾಗಿತ್ತು. ನಂತರ ಅವರನ್ನು ನ್ಯಾಯಾಲಯಕ್ಕೆ ಕರೆದೊಯ್ದು ಕ್ಷಮೆಯಾಚಿಸುವಂತೆ ಕೇಳಲಾಯಿತು. ಆದರೆ ಅವರು ಅದನ್ನು ನಿರಾಕರಿಸಿದರು.

“ನಾನು ಯಾವುದೇ ಅಪರಾಧ ಮಾಡಿಲ್ಲ, ಕೇವಲ ಒಂದು ಹಾಡನ್ನು ಹಾಡಿದ್ದೇನೆ,” ಎಂದು ಸರ್ಕಾರ್ ನ್ಯಾಯಾಧೀಶರಿಗೆ ತಿಳಿಸಿದ್ದಾರೆ ಎಂದು ಸಮಿಕ್ ಭಟ್ಟಾಚಾರ್ಯ ಹೇಳಿದರು. ನ್ಯಾಯಾಧೀಶರು ಆ ಹಾಡನ್ನು ಕೇಳಲು ಬಯಸಿದಾಗ, ಸರ್ಕಾರ್ ನ್ಯಾಯಾಲಯದಲ್ಲೇ ಮತ್ತೊಮ್ಮೆ ಅದನ್ನು ಹಾಡಿದರು. ಅದಾದ ಬಳಿಕ ನ್ಯಾಯಾಧೀಶರು ಪೊಲೀಸರಿಗೆ ಸರ್ಕಾರ್ ಅವರಿಗೆ ಪ್ರಥಮ ದರ್ಜೆಯ ರೈಲು ಟಿಕೆಟ್ ನೀಡಿ ಮನೆಗೆ ಕಳುಹಿಸುವಂತೆ ಹಾಗೂ ಪ್ರಯಾಣಕ್ಕಾಗಿ 100 ರೂಪಾಯಿ ನೀಡುವಂತೆ ಸೂಚಿಸಿದರು ಎಂದು ಬಿಜೆಪಿ ಅಧ್ಯಕ್ಷರು ವಿವರಿಸಿದರು.

ಬಿಜೆಪಿ ಹಿರಿಯ ಹೋರಾಟಗಾರ

ಸರ್ಕಾರ್ ಅವರು ಸಿಲಿಗುರಿ ಸಂಘಟನಾ ಜಿಲ್ಲೆಯ ಮೊದಲ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿದ್ದರು. ಅವರು ಶ್ಯಾಮ ಪ್ರಸಾದ್ ಮುಖರ್ಜಿ ಅವರ ಐತಿಹಾಸಿಕ ಕಾಶ್ಮೀರ ಪ್ರವಾಸದ ಸಹಯಾತ್ರಿಯಾಗಿದ್ದರು. 97 ವರ್ಷದ ವಯಸ್ಸಿನಲ್ಲಿಯೂ ಅವರು ಸ್ವಾತಂತ್ರ್ಯಾನಂತರ ಭಾರತದ ರಾಷ್ಟ್ರವಾದಿ ಚಳವಳಿಯ ಆರಂಭಿಕ ತಳಮಟ್ಟದ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

7 ವರ್ಷ ಸಂಘಟನಾ ಹುದ್ದೆಯಲ್ಲಿದ್ದ ಮಖನ್ ಲಾಲ್

1952ರಲ್ಲಿ ಕಾಶ್ಮೀರದಲ್ಲಿ ಭಾರತೀಯ ತ್ರಿವರ್ಣ ಧ್ವಜ ಹಾರಿಸುವ ಚಳವಳಿಯ ವೇಳೆ ಮುಖರ್ಜಿ ಅವರೊಂದಿಗೆ ತೆರಳಿದ್ದಾಗ ಅವರನ್ನು ಬಂಧಿಸಲಾಗಿತ್ತು. 1980ರಲ್ಲಿ ಬಿಜೆಪಿ ಸ್ಥಾಪನೆಯಾದ ನಂತರ, ಅವರು ಪಶ್ಚಿಮ ದಿನಾಜ್‌ಪುರ, ಜಲ್ಪೈಗುರಿ ಮತ್ತು ದಾರ್ಜಿಲಿಂಗ್ ಜಿಲ್ಲೆಗಳ ಸಂಘಟನಾ ಸಂಯೋಜಕರಾಗಿ ಕಾರ್ಯನಿರ್ವಹಿಸಿದರು.

ಕೇವಲ ಒಂದು ವರ್ಷದೊಳಗೆ ಅವರು ಸುಮಾರು 10,000 ಸದಸ್ಯರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲು ನೆರವಾದರು. 1981ರಿಂದ ಆರಂಭಿಸಿ ಅವರು ನಿರಂತರವಾಗಿ ಏಳು ವರ್ಷಗಳ ಕಾಲ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಆ ಕಾಲದಲ್ಲಿ ಬಿಜೆಪಿ ನಾಯಕರಿಗೆ ಒಂದೇ ಸಂಘಟನಾ ಹುದ್ದೆಯಲ್ಲಿ ಎರಡು ವರ್ಷಕ್ಕಿಂತ ಹೆಚ್ಚು ಕಾಲ ಉಳಿಯುವುದು ಅಪರೂಪವಾಗಿದ್ದ ಸಂದರ್ಭದಲ್ಲಿ ಇದು ವಿಶೇಷ ಸಾಧನೆಯಾಗಿ ಪರಿಗಣಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು: ಕಿಂಗ್ ಮೇಕರ್ ಆದ VCK, ಸಂಜೆ ವೇಳೆಗೆ ಘೋಷಣೆ ಸಾಧ್ಯತೆ, ಅಸಹಾಯಕ ವಿಜಯ್ ಮುಂದೆ ಅಗ್ನಿ ಪರೀಕ್ಷೆ!

ಐತಿಹಾಸಿಕ: ಪ.ಬಂಗಾಳದ ನೂತನ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕಾರ, ಹೊಸ ರಾಜಕೀಯ ಯುಗಕ್ಕೆ ಚಾಲನೆ

ಝಲ್ ಮುರಿ, ಸಿಹಿತಿನಿಸು ಮತ್ತು ರವೀಂದ್ರನಾಥ ಟಾಗೋರ್: ಬಿಜೆಪಿ ಬಂಗಾಳ ಪ್ರಮಾಣವಚನ ಸಮಾರಂಭದಲ್ಲಿ ಬಂಗಾಳಿ ಸೊಗಡು

ತಮಿಳುನಾಡಿನಲ್ಲಿ ರಾಜಕೀಯ, ಸಂವಿಧಾನಿಕ ಬಿಕ್ಕಟ್ಟು: ರಾಷ್ಟ್ರಪತಿ ಆಡಳಿತ ಜಾರಿಯಾಗುತ್ತಾ? ಹಿಂದಿನ ಸೂತ್ರಧಾರ ಯಾರು?

ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕಾರ: ಕೋಲ್ಕತಾದ ಬ್ರಿಗೇಡ್ ಪರೇಡ್ ಮೈದಾನದ ಐತಿಹಾಸಿಕ ಇತಿಹಾಸ

SCROLL FOR NEXT