ಹೈದರಾಬಾದ್: ಬೇರೆ ಪಕ್ಷಗಳಲ್ಲಿ ಕಾರ್ಯಕ್ಷಮತೆ ಹೆಚ್ಚಿರುವ ನಾಯಕರನ್ನು ಬಿಜೆಪಿಗೆ ಸೆಳೆಯುವುದರಲ್ಲಿ ಮೋದಿ- ಅಮಿತ್ ಶಾ ಜೋಡಿಗೆ ಸಾಟಿ ಇಲ್ಲ ಎಂಬುದು ಈಗಾಗಲೇ ಹಲವು ಬಾರಿ ಸಾಮೀತಾಗಿದೆ.
ಹಿಮಂತ ಬಿಸ್ವ ಶರ್ಮಾ, ಸುವೇಂದು ಅಧಿಕಾರಿ, ಹೆಚ್ ಡಿ ಕುಮಾರಸ್ವಾಮಿ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಈಗ ಈ ಸಾಲಿಗೆ ಸೇರಲು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ರೆಡಿ ಇದ್ದಾರಾ? ಎಂಬ ಪ್ರಶ್ನೆ ಮೂಡುತ್ತಿದೆ. ಇದಕ್ಕೆ ಕಾರಣವಾಗಿರುವುದು ಮೋದಿ ರೇವಂತ್ ರೆಡ್ಡಿಗೆ ವೇದಿಕೆಯ ಮೇಲೆಯೇ ತಮ್ಮೊಂದಿಗೆ ಬರುವಂತೆ ಮುಕ್ತ ಆಹ್ವಾನ ನೀಡಿರುವುದಾಗಿದೆ.
ತೆಲಂಗಾಣ ರಾಜ್ಯದ ವಿವಿಧೆಡೆ ಅಂದಾಜು 9,400 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ರೇವಂತ್ ರೆಡ್ಡಿ ಗುಜರಾತ್ ಮಾದರಿ ನಮಗೂ ನೆರವು ಕೊಡಿ ಎಂದು ಮೋದಿ ಅವರೆದುರು ಬೇಡಿಕೆ ಇಟ್ಟರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ರೇವಂತ್ ರೆಡ್ಡಿಗೆ 'ನನ್ನೊಂದಿಗೆ ಕೈಜೋಡಿಸಿ' ಎಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಆಫರ್ ನೀಡಿದ್ದಾರೆ. ಈ ವೇಳೆ ರೆಡ್ಡಿ ಸೇರಿದಂತೆ ಇಡೀ ಸಭೆಯೇ ನಗೆಗಡಲಲ್ಲಿ ತೇಲಿತು.
ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ 10 ವರ್ಷಗಳಲ್ಲಿ ಆ ರಾಜ್ಯವು ಅಭಿವೃದ್ಧಿಯಲ್ಲಿ ದೇಶಕ್ಕೆ ಮಾದರಿಯಾಗಿ ಬೆಳೆಯಿತು. ಅದೇ ಮಾದರಿಯ ನೆರವು ತೆಲಂಗಾಣಕ್ಕೂ ಕೇಂದ್ರದಿಂದ ಸಿಗಬೇಕು" ಎಂದು ಕೇಳಿಕೊಂಡರು. ಇದಕ್ಕೆ ತಮ್ಮ ಭಾಷಣದಲ್ಲಿ ನಗುನಗುತ್ತಲೇ ಉತ್ತರಿಸಿದ ಮೋದಿ, "ತೆಲಂಗಾಣಕ್ಕೆ ಗುಜರಾತ್ ಮಾದರಿಯಲ್ಲೇ ನೆರವು ನೀಡಲು ನಾವು ಸಿದ್ಧರಿದ್ದೇವೆ. ಆದರೆ, ಹಾಗೆ ಮಾಡಿದರೆ ಪ್ರಸ್ತುತ ಕೇಂದ್ರದಿಂದ ತೆಲಂಗಾಣ ಪಡೆಯುತ್ತಿರುವ ನೆರವಿನಲ್ಲಿ ಅರ್ಧದಷ್ಟನ್ನು ರಾಜ್ಯ ಕಳೆದುಕೊಳ್ಳಬೇಕಾಗುತ್ತದೆ! ಅಷ್ಟೇ ಅಲ್ಲದೇ ನೀವು ನನ್ನೊಂದಿಗೆ ಕೈಜೋಡಿಸುವುದು ಉತ್ತಮ," ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಮೋದಿಯವರ ಹಾಸ್ಯಮಿಶ್ರಿತವಾಗಿ ಪ್ರತಿಕ್ರಿಯೆಗೆ ಸಿಎಂ ಸೇರಿ ಎಲ್ಲರೂ ನಕ್ಕರು.
ವಿಕಸಿತ ಭಾರತ ನಿರ್ಮಾಣದ ಗುರಿ
2047ರ ವೇಳೆಗೆ 'ವಿಕಸಿತ ಭಾರತ' ನಿರ್ಮಾಣದ ಗುರಿ ಹೊಂದಿರುವ ಕೇಂದ್ರ ಸರ್ಕಾರ, ರಾಜ್ಯಗಳ ಅಭಿವೃದ್ಧಿಯನ್ನೇ ಬುನಾದಿಯನ್ನಾಗಿ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ತೆಲಂಗಾಣದ ಕ್ಷಿಪ್ರ ಅಭಿವೃದ್ಧಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ಸಂಪೂರ್ಣ ಬೆಂಬಲವನ್ನು ಮುಂದುವರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಹೊಸ ಯೋಜನೆಗಳಿಗೆ ಚಾಲನೆ
ಜಹೀರಾಬಾದ್ ಕೈಗಾರಿಕಾ ಪಾರ್ಕ್ (ರಾಷ್ಟ್ರೀಯ ಕೈಗಾರಿಕಾ ಉತ್ಪಾದನಾ ವಲಯ), ಮಲ್ಕಾಪುರದಲ್ಲಿನ ಐಒಸಿ ಟರ್ಮಿನಲ್ ಮತ್ತು ಕಾಜಿಪೇಟೆ - ವಿಜಯವಾಡ ನಡುವಿನ ರೈಲ್ವೆ ಮಾರ್ಗದ ಮಲ್ಟಿ-ಟ್ರ್ಯಾಕಿಂಗ್ ಮುಂತಾದ ಬೃಹತ್ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.