ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಹಾಗೂ ಡಿಎಂಕೆ ಶಾಸಕ ಉದಯನಿಧಿ ಸ್ಟಾಲಿನ್ ಮತ್ತೆ ತಮ್ಮ ಸನಾತನ ಧರ್ಮ ವಿರೋಧಿ ಹೇಳಿಕೆಯನ್ನು ಪುನರುಚ್ಚರಿಸಿದ್ದು, ನಿರ್ಮೂಲನೇ ಮಾಡಲೇಬೇಕು ಎಂದು ಹೇಳಿದ್ದಾರೆ.
ತಮಿಳುನಾಡು ವಿಧಾನಸಭೆಯಲ್ಲಿ ಮಾತನಾಡಿದ ಡಿಎಂಕೆ ಶಾಸಕ ಉದಯನಿಧಿ ಸ್ಟಾಲಿನ್, “ಜನರನ್ನು ವಿಭಜಿಸುವ ಸನಾತನವನ್ನು ನಿರ್ಮೂಲನೆ ಮಾಡಬೇಕು. ತಮಿಳುನಾಡಿನಿಂದ ಸನಾತನ ಧರ್ಮವನ್ನು ಸಂಪೂರ್ಣ ನಾಶ ಮಾಡಬೇಕು” ಎಂದು ಹೇಳಿದರು. ಈ ವೇಳೆ ಅವರ ಎದುರಗಡೆ ಆಸನದಲ್ಲಿದ್ದ ಸಿಎಂ ವಿಜಯ್ ಮೌನವಾಗಿ ಕುಳಿತಿದ್ದರು.
ಉದಯ ನಿಧಿ ಸ್ಟಾಲಿನ್ ಮುಂದುವರೆದು, ನಿನ್ನೆ, ನಮ್ಮ ನಾಯಕ ಮತ್ತು ಇತರ ಅನೇಕ ನಾಯಕರಿಂದ ಮುಖ್ಯಮಂತ್ರಿಗಳಿಗೆ ಶುಭಾಶಯಗಳು ಬಂದವು. ಈ ರಾಜಕೀಯ ನಾಗರಿಕತೆಯು ಈ ಸದನದಲ್ಲಿಯೂ ಮುಂದುವರಿಯಬೇಕು. ಆಡಳಿತ ಸರ್ಕಾರ ಮತ್ತು ವಿರೋಧ ಪಕ್ಷವಾಗಿ ನಾವು ಬೇರೆ ಬೇರೆ ಸಾಲುಗಳಲ್ಲಿ ಕುಳಿತಿದ್ದರೂ, ತಮಿಳುನಾಡಿನ ಅಭಿವೃದ್ಧಿಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದರು.
ಅಲ್ಲದೆ ಮುಖ್ಯಮಂತ್ರಿ ಮತ್ತು ನಾನು ಒಂದೇ ಕಾಲೇಜಿನಲ್ಲಿ ಓದಿದ್ದೇವೆ. ನಾವು ನಮ್ಮ ಅನುಭವ ಮತ್ತು ಜ್ಞಾನವನ್ನು ಹಂಚಿಕೊಳ್ಳಲು ಬಯಸುತ್ತೇವೆ. ಮುಖ್ಯಮಂತ್ರಿ ನಮ್ಮ ಸಲಹೆಗಳನ್ನು ಸಹ ಸ್ವೀಕರಿಸಬೇಕು" ಎಂದು ಉದಯನಿಧಿ ಸ್ಟಾಲಿನ್ ಇದೇ ವೇಳೆ ಮನವಿ ಮಾಡಿದರು.
ವಂದೇ ಮಾತರಂಗೆ ವಿರೋಧ
ಅಂತೆಯೇ ಉದಯನಿಧಿ ಸ್ಟಾಲಿನ್, "ವಂದೇ ಮಾತರಂ ನಂತರ ತಮಿಳುನಾಡು ರಾಜ್ಯ ಗೀತೆಯನ್ನು ನುಡಿಸಿದ ನಂತರ ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿವೆ. ಆದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಪ್ರಮಾಣವಚನ ಸಮಾರಂಭದಲ್ಲಿ ವಂದೇ ಮಾತರಂ ನುಡಿಸಲಿಲ್ಲ. ಆದರೆ ಇಲ್ಲಿ ಅದನ್ನು ನುಡಿಸಲಾಯಿತು. ಅಲ್ಲಿನ ರಾಜ್ಯಪಾಲರು ಯಾರು ಎಂದು ನಿಮಗೆಲ್ಲರಿಗೂ ತಿಳಿದಿದೆ.
ಸರ್ಕಾರ ಇದು ಮತ್ತೆ ಸಂಭವಿಸಲು ಬಿಡಬಾರದು. ನಮ್ಮ ತಮಿಳುನಾಡು ರಾಜ್ಯ ಗೀತೆಯನ್ನು ಎಂದಿಗೂ ಎರಡನೇ ಸ್ಥಾನಕ್ಕೆ ತಳ್ಳಬಾರದು ಎಂದರು. ಉದಯನಿಧಿ ವಂದೇ ಮಾತರಂ ಗೀತೆ ಬಗ್ಗೆ ಚಕಾರ ಎತ್ತಿದಾಗ, ವಿಜಯ್ ಮೌನವಾಗಿ ಕೇಳಿಸಿಕೊಂಡರೇ ಹೊರತು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್
ಸೋಮವಾರ ಡಿಎಂಕೆ ನಾಯಕ, ಮಾಜಿ ಸಿಎಂ ಸ್ಟಾಲಿನ್ ನಿವಾಸಕ್ಕೆ ನೂತನ ಸಿಎಂ ವಿಜಯ್ ತೆರಳಿದ್ದರು. ವಿಜಯ್ ಅವರ ಈ ಭೇಟಿಯನ್ನು ಉದಯನಿಧಿ political civility ಎಂದು ಉಲ್ಲೇಖಿಸಿದರು. ಸೋಮವಾರ ಉದಯನಿಧಿ ಸ್ಟಾಲಿನ್ ಅವರನ್ನು ಡಿಎಂಕೆ ಶಾಸಕಾಂಗದ ನಾಯಕರನ್ನು ಆಯ್ಕೆ ಮಾಡಲಾಗಿತ್ತು. ನಂತರ ಸದನದ ವಿರೋಧ ಪಕ್ಷದ ನಾಯಕರಾಗಿದ್ದಾರೆ.
ಸನಾತನ ನಿರ್ಮೂಲನೆ ಇದೇ ಮೊದಲೇನಲ್ಲ
ಇನ್ನು ಸನಾತನ ನಿರ್ಮೂಲನೆ ಕುರಿತು ಡಿಎಂಕೆ ನಾಯಕರು ಮಾತನಾಡುತ್ತಿರುವುದು ಇದೇ ಮೊದಲೇನಲ್ಲ..
ಈ ಹಿಂದೆ ಅಂದರೆ 2023ರಲ್ಲಿಯೂ ಉದಯನಿಧಿ ಸ್ಟಾಲಿನ್ “ಸನಾತನ ಧರ್ಮವು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ತತ್ವವಾಗಿದೆ” ಎಂದು ಹೇಳಿ, “ಸನಾತನ ಧರ್ಮವನ್ನು ಬೇರುಸಹಿತ ಕಿತ್ತೊಗೆಯುವುದು ಮಾನವೀಯತೆ ಮತ್ತು ಸಮಾನತೆಯನ್ನು ಉಳಿಸುವಂತಾಗಿದೆ” ಎಂದು ಹೇಳಿದ್ದರಿಂದ ದೇಶವ್ಯಾಪಿ ವ್ಯಾಪಕ ವಿವಾದ ಉಂಟಾಗಿತ್ತು.
ಆ ಸಂದರ್ಭದಲ್ಲಿ ಹಲವು ರಾಜಕೀಯ ಪಕ್ಷಗಳು ಮತ್ತು ಧಾರ್ಮಿಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ಬಿಜೆಪಿ ಪ್ರತಿಕ್ರಿಯೆ
ಉದಯನಿಧಿಯವರ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ M. ಭೋಜರಾಜನ್, “ಇಂದು ಅವಿರೋಧವಾಗಿ ಆಯ್ಕೆಯಾದ ಸ್ಪೀಕರ್ ಮತ್ತು ಡೆಪ್ಯೂಟಿ ಸ್ಪೀಕರ್ ಅವರಿಗೆ ಗೌರವ ಸಲ್ಲಿಸುವ ದಿನ. ಇದಕ್ಕಿಂತ ಹೆಚ್ಚಿನದೇನೂ ಅಗತ್ಯವಿಲ್ಲ. ಕೆಲವು ಘಟನೆಗಳು ನಡೆದಿವೆ. ಆದರೆ ಅದಕ್ಕೆ ಉತ್ತರಿಸಲು ನಾನು ಸಿದ್ಧನಿಲ್ಲ ಎಂದು ಹೇಳಿದರು.