ತಿರುವನಂತಪುರಂ: ಕೇರಳ ರಾಜ್ಯದ ನೂತನ ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಕಳೆದೊಂದು ವಾರದಿಂದ ನಡೆದಿದ್ದ ರಾಜಕೀಯ ಪ್ರಹಸನಕ್ಕೆ ಕೊನೆಗೂ ತೆರೆ ಬಿದ್ದಿದ್ದು ಯುಡಿಎಫ್ ಮತ್ತು ಕಾಂಗ್ರೆಸ್ ಮೈತ್ರಿಕೂಟ ವಿ.ಡಿ. ಸತೀಶನ್ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ.
ಹೌದು.. ಕೇರಳ ಮುಖ್ಯಮಂತ್ರಿ ಆಯ್ಕೆ ಕುರಿತ ಕಾಂಗ್ರೆಸ್ನ ಸಸ್ಪೆನ್ಸ್ಗೆ ಅಂತ್ಯವಾಗಿದ್ದು, ವಿ. ಡಿ. ಸತೀಶನ್ ಅವರೇ ನೂತನ ಮುಖ್ಯಮಂತ್ರಿ ಎಂದು ಘೋಷಣೆ ಮಾಡಲಾಗಿದೆ.
61 ವರ್ಷದ ಮಾಜಿ ವಿರೋಧ ಪಕ್ಷದ ನಾಯಕನಾಗಿದ್ದ V. D. Satheesan ಅವರನ್ನು ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಈ ಮುಖ್ಯಮಂತ್ರಿ ಪದವಿ ರೇಸ್ ನಲ್ಲಿ K. C. Venugopal ಮತ್ತು Ramesh Chennithala ಹೆಸರುಗಳು ಬಲವಾಗಿ ಕೇಳಿಬಂದಿತ್ತಾದರೂ ವಿ.ಡಿ ಸತೀಶನ್ ಮುನ್ನಡೆ ಸಾಧಿಸಿ ಈ ಸ್ಥಾನವನ್ನು ಪಡೆದಿದ್ದಾರೆ.
2026ರ ವಿಧಾನಸಭಾ ಚುನಾವಣೆಯಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಭರ್ಜರಿ ಜಯ ಸಾಧಿಸಿದ ಬಳಿಕ ಮುಖ್ಯಮಂತ್ರಿ ಆಯ್ಕೆ ಕುರಿತು ನಡೆಯುತ್ತಿದ್ದ ಚರ್ಚೆಗೆ ಕಾಂಗ್ರೆಸ್ ಹೈಕಮಾಂಡ್ ಅಂತಿಮ ತೀರ್ಮಾನಕ್ಕೆ ಬಂದಿದೆ.
ಕಾಂಗ್ರೆಸ್ ನೇತೃತ್ವದ UDF ಕೇರಳ ವಿಧಾನಸಭಾ ಚುನಾವಣೆಯಲ್ಲಿ 140 ಸ್ಥಾನಗಳಲ್ಲಿ 102 ಸ್ಥಾನಗಳನ್ನು ಗೆದ್ದು ಭಾರೀ ಜನಾದೇಶ ಪಡೆದಿತ್ತು. ಇದರೊಂದಿಗೆ ಪಿಣರಾಯಿ ನೇತೃತ್ವದ ಎಡಪಕ್ಷದ ಸರ್ಕಾರವನ್ನು ಸೋಲಿಸಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಮರಳಿದೆ.
ದೆಹಲಿನಲ್ಲಿ ಹಲವು ದಿನಗಳಿಂದ ನಡೆದ ಚರ್ಚೆಗಳು, ಲಾಬಿ ಹಾಗೂ ಸಮಾಲೋಚನೆಗಳ ಬಳಿಕ, ಕಾಂಗ್ರೆಸ್ ತನ್ನ ವಿಧಾನಮಂಡಲ ಪಕ್ಷದ ನಾಯಕನ ಹೆಸರನ್ನು ಅಂತಿಮವಾಗಿ ಇಂದು ಘೋಷಣೆ ಮಾಡಿದೆ.
ವಿ.ಡಿ.ಸತೀಶನ್ ಪ್ರಬಲ ಪ್ರಚಾರ
ಹಿಂದಿನ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ V. D. Satheesan ಅವರು ಎಡಪಕ್ಷ ಸರ್ಕಾರದ ವಿರುದ್ಧ ಕಾಂಗ್ರೆಸ್ ನಡೆಸಿದ ಪ್ರಚಾರದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪಕ್ಷದ ಕಾರ್ಯಕರ್ತರು ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಸೇರಿ ಪ್ರಮುಖ ಮೈತ್ರಿ ಪಕ್ಷಗಳ ಬೆಂಬಲವೂ ಅವರಿಗೆ ದೊರಕಿದ್ದು ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಲು ಕಾರಣ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಿರಿಯ ಕಾಂಗ್ರೆಸ್ ನಾಯಕರಾದ ಕೆಸಿ ವೇಣುಗೋಪಾಲ್ ಮತ್ತು ರಮೇಶ್ ಚನ್ನಿತ್ತಲ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಕೆಲವು ಹೊಸ ಶಾಸಕರ ಬೆಂಬಲ ವೆಣುಗೋಪಾಲ್ ಅವರಿಗೆ ಇದ್ದರೂ, ತಳಮಟ್ಟದ ಕಾರ್ಯಕರ್ತರು ಮತ್ತು ಮೈತ್ರಿ ಪಕ್ಷಗಳಲ್ಲಿನ ಸತೀಶನ್ ಅವರ ಜನಪ್ರಿಯತೆ ಅವರಿಗೆ ಹೆಚ್ಚಿನ ಬಲ ನೀಡಿದೆ.
ಅಳೆದು ತೂಗಿ ನಿರ್ಧಾರ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹಿರಿಯ ನಾಯಕ ರಾಹುಲ್ ಗಾಂಧಿ ಕಳೆದ ಕೆಲವು ದಿನಗಳಲ್ಲಿ ಹಲವು ಸುತ್ತಿನ ಚರ್ಚೆಗಳನ್ನು ನಡೆಸಿದ್ದಾರೆ. ಅಂತಿಮ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಈ ಮಾತುಕತೆಗಳು ನಡೆದಿತ್ತು. ತಿರುವನಂತಪುರಂನ KPCC ಕಚೇರಿಯಲ್ಲಿ ಕಾಂಗ್ರೆಸ್ ವಿಧಾನಮಂಡಲ ಪಕ್ಷದ ಸಭೆ ನಡೆದಿದ್ದು, ಅದರಲ್ಲಿ ಅಧಿಕೃತವಾಗಿ ನಾಯಕನ ಆಯ್ಕೆ ಮಾಡಲಾಗಿದೆ.
ರಾಜಕೀಯ ವಿಶ್ಲೇಷಕರ ಪ್ರಕಾರ, V. D. Satheesan ಅವರು ಕಾಂಗ್ರೆಸ್ ಪಕ್ಷವನ್ನು ಪುನರ್ ನಿರ್ಮಿಸಲು ಮತ್ತು ಕೇರಳದಲ್ಲಿ ಪಕ್ಷದ ಬಲವನ್ನು ಮತ್ತಷ್ಟು ಗಟ್ಟಿಗೊಳಿಸಲು ಸಮರ್ಥರಾಗಿರುವ ಯುವ ಹಾಗೂ ಆಕ್ರಮಣಕಾರಿ ನಾಯಕನಾಗಿ ಕಾಣಲಾಗುತ್ತಿದೆ. ಇದೀಗ ಸತೀಶನ್ ಅವರ ನಿವಾಸದ ಹೊರಗೆ ಬೆಂಬಲಿಗರು ಸಂಭ್ರಮಾಚರಣೆ ಆರಂಭಿಸಿದ್ದಾರೆ.