ಇಂದು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ವಿಡಿಯೊ ಮೂಲಕ ದೇಶದ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ನಿರೀಕ್ಷೆಗಿಂತ ಉತ್ತಮವಾಗಿ ದೇಶದ ಆರ್ಥಿಕತೆ ಕಾರ್ಯನಿರ್ವಹಿಸಿತ್ತಿದೆ ಎಂದು ಶ್ಲಾಘಿಸಿದ್ದಾರೆ. ಏಪ್ರಿಲ್–ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ.7.8ರಷ್ಟಾಗಿದ್ದು, ಆರ್ಥಿಕತೆ ಬಗ್ಗೆ ಕೆಲವರು ನಿರಾಶಾದಾಯಕ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಟೀಕಾಕಾರರ ವಿರುದ್ಧವೂ ಮೋದಿ ವಾಗ್ದಾಳಿ ನಡೆಸಿದರು.
ಇತ್ತೀಚಿನ ಜಿಡಿಪಿ ಅಂಕಿಅಂಶಗಳಿಗೆ ಪ್ರತಿಕ್ರಿಯಿಸಿದ ಮೋದಿ, ಈ ಸಾಧನೆಗೆ ಭಾರತೀಯರ ಸಂಕಲ್ಪ ಮತ್ತು ಕಠಿಣ ಪರಿಶ್ರಮವೇ ಕಾರಣ ಎಂದು ಹೇಳಿದರು. ಕಠಿಣ ಜಾಗತಿಕ ಪರಿಸ್ಥಿತಿಯ ನಡುವೆಯೂ ಭಾರತದ ಸಾಮರ್ಥ್ಯವನ್ನು ಈ ಅಂಕಿಅಂಶಗಳು ತೋರಿಸಿವೆ ಎಂದು ಅವರು ತಿಳಿಸಿದರು.
ನನ್ನ ಸಹ ನಾಗರಿಕರಿಗೆ ಹೃತ್ಪೂರ್ವಕ ಅಭಿನಂದನೆಗಳು. ಶೇ.7.8ರ ಬೆಳವಣಿಗೆ ದರ—ದೇಶವೇ ಸಂತಸದಿಂದ ತುಂಬಿದೆ. ದೇಶದ ಜನರ ಸಂಕಲ್ಪ ಮತ್ತು ಪರಿಶ್ರಮದ ಮನೋಭಾವಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಇದು ನಮ್ಮ ಸಾಮೂಹಿಕ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.
ಜಗತ್ತು ಸಂಘರ್ಷದಲ್ಲಿ ಸಿಲುಕಿದೆ. ಎಲ್ಲ ದಿಕ್ಕುಗಳಿಂದಲೂ ಯುದ್ಧದ ಸುದ್ದಿಗಳು ಬರುತ್ತಿವೆ ಹಾಗೂ ಜಗತ್ತು ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಪೂರೈಕೆ ಸರಪಳಿಗಳು ತೀವ್ರವಾಗಿ ಅಸ್ತವ್ಯಸ್ತಗೊಂಡಿವೆ. 2020ರ ಕೋವಿಡ್ ಅವಧಿಯಿಂದಲೂ ಎಲ್ಲೆಡೆ ಸ್ಥಿರತೆ ಕಾಣುವುದು ಕಷ್ಟವಾಗಿದೆ.
ಆದರೂ ಭಾರತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಮತ್ತೊಂದೆಡೆ, ದೇಶದೊಳಗೇ ಕೆಲವರು ನಿರಾಶಾವಾದದ ಕೂಪದಲ್ಲಿ ಸಿಲುಕಿ, ಸುಳ್ಳುಗಳನ್ನು ಪ್ರತಿಧ್ವನಿಸುತ್ತಾ ನಿರಾಶೆಯನ್ನು ಹರಡುತ್ತಿದ್ದಾರೆ. ಇವೆಲ್ಲವನ್ನೂ ಮೀರಿ, ಎಲ್ಲ ಅಡೆತಡೆಗಳನ್ನು ದಾಟಿ ದೇಶವು ಶೇ.7.8ರ ಬೆಳವಣಿಗೆ ದರವನ್ನು ಸಾಧಿಸಿದೆ.
ನಾವು ಈ ವೇಗವನ್ನು ಕಾಯ್ದುಕೊಳ್ಳಬೇಕು. ನಾವು ಮುಂದೆ ಸಾಗುತ್ತಲೇ ಇರಬೇಕು. ಅದಕ್ಕಾಗಿ ಆತ್ಮನಿರ್ಭರ ಭಾರತವಾಗುವುದು ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇನ್ಸ್ಟಾಗ್ರಾಂ ಮತ್ತು ಎಕ್ಸ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.