ಪಂಜಾಬ್: ಬಿಜೆಪಿ ನಾಯಕ ರವನೀತ್ ಸಿಂಗ್ ಬಿಟ್ಟು ಶನಿವಾರ ಲುಧಿಯಾನದಲ್ಲಿರುವ ಪಂಜಾಬ್ ಕೃಷಿ ವಿವಿ ಆವರಣದ ಹೊರಗೆ ಮದ್ಯದ ಬಾಟಲಿ, ಮೊಟ್ಟೆ ಮತ್ತು ಟೊಮೆಟೊಗಳನ್ನು ಹಿಡಿದುಕೊಂಡು ಸಾಂಕೇತಿಕ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ನಂತರ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಕೃಷಿ ವಿವಿಯಲ್ಲಿ ಕಾರ್ಯಕ್ರಮವೊಂದಕ್ಕೆ ಮುಖ್ಯಮಂತ್ರಿ ಭಗವಂತ್ ಮಾನ್ ಆಗಮಿಸುವ ಮುನ್ನ ಈ ಘಟನೆ ನಡೆದಿದೆ.
ಪಂಜಾಬ್ ಕೃಷಿ ವಿವಿ ಆವರಣದ 8ನೇ ಗೇಟ್ ಬಳಿ ಮದ್ಯದ ಬಾಟಲಿ, ಮೊಟ್ಟೆ ಮತ್ತು ಟೊಮೆಟೊಗಳನ್ನು ಹಿಡಿದುಕೊಂಡ ಬಿಟ್ಟು, ಇವು ಮುಖ್ಯಮಂತ್ರಿಗೆ ಗಿಫ್ಟ್ ಎಂದು ಹೇಳುತ್ತಾ ಪ್ರದರ್ಶಿಸಿದರು. ಬಿಜೆಪಿಯ 'ನಶಾ ಮುಕ್ತ ಪಂಜಾಬ್ ಯಾತ್ರೆ'ಗಾಗಿ ಪಠಾಣ್ಕೋಟ್ಗೆ ಪ್ರಯಾಣಿಸುತ್ತಿದ್ದಾಗ ತಮ್ಮ ಬೆಂಗಾವಲು ಪಡೆಯ ಮೇಲೆ ಮೊಟ್ಟೆ ಮತ್ತು ಟೊಮೆಟೊಗಳನ್ನು ಎಸೆದು ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ ಮರುದಿನವೇ ಅವರು ಈ ಪ್ರತಿಭಟನೆ ನಡೆಸಿದರು.
ಇದೇ ವೇಳೆ ಪಂಜಾಬ್ ಸರ್ಕಾರ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ.
ಮಾನ್, ತಮ್ಮ ಮದ್ಯವನ್ನು ಆನಂದಿಸಲಿ ಮತ್ತು ಕೇಜ್ರಿವಾಲ್ ದೆಹಲಿಯಿಂದಲೇ ಪಂಜಾಬ್ ಅನ್ನು ನಡೆಸಲಿ ಎಂದು ಬಿಟ್ಟು ಹೇಳಿದರು. ಹಿಂದಿನ ದಿನ ತಮ್ಮ ಬೆಂಗಾವಲು ಪಡೆಯ ಮೇಲೆ ಎಸೆಯಲಾದ ಮೊಟ್ಟೆ ಮತ್ತು ಟೊಮೆಟೊಗಳನ್ನೇ ತಾವು ತಂದಿರುವುದಾಗಿಯೂ ಅವರು ತಿಳಿಸಿದರು. ಈ ಪ್ರತಿಭಟನೆಯು ಬಿಟ್ಟು ಮತ್ತು ಪಂಜಾಬ್ನ ಆಡಳಿತಾರೂಢ ಎಎಪಿ (AAP) ನಡುವಿನ ರಾಜಕೀಯ ಸಂಘರ್ಷಕ್ಕೆ ಹೊಸ ತಿರುವು ನೀಡಿತು.
ತಮ್ಮ ಬೆಂಗಾವಲು ಪಡೆಯ ವಾಹನಗಳ ಮೇಲೆ ಮೊಟ್ಟೆ ಮತ್ತು ಟೊಮೆಟೊ, ಅಲ್ಲದೆ, ಕಲ್ಲುಗಳನ್ನು ಎಸೆಯಲಾಗಿದೆ ಮತ್ತು ಕೆಲವು ವಾಹನಗಳು ಜಖಂಗೊಂಡಿವೆ ಎಂದು ಬಿಟ್ಟು ಆರೋಪಿಸಿದ್ದಾರೆ.
ತಮ್ಮ ಭದ್ರತಾ ತಂಡವು ವಶಕ್ಕೆ ಪಡೆದ ಮೂವರು ವ್ಯಕ್ತಿಗಳು 'ಆಮ್ ಆದ್ಮಿ ಪಕ್ಷ'ಕ್ಕೆ (AAP) ಸಂಬಂಧ ಹೊಂದಿದ್ದಾರೆ ಎಂದು ಅವರ ಕಚೇರಿ ಆರೋಪಿಸಿದೆ. ಆದರೆ, ಈ ಘಟನೆಯಲ್ಲಿ ತಮ್ಮ ಪಾತ್ರವಿದೆಯೆಂಬ ಆರೋಪವನ್ನು ಎಎಪಿ ನಿರಾಕರಿಸಿದೆ.