ಹೈದರಾಬಾದ್: ತಿರುಮಲ ತಿರುಪತಿ ದೇವಸ್ಥಾನಕ್ಕೆ ಕಲಬೆರಕೆ ತುಪ್ಪ ಪೂರೈಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಕಂಪನಿ ಪ್ರಮೋಟರ್ ನನ್ನು ಬಂಧಿಸಿದೆ.
ಕೈಲಾಶ್ ಚಂದ್ ಮಂಗಲಾ ಬಂಧಿತ ಕಂಪನಿ ಪ್ರಮೋಟರ್ ಎಂದು ಗುರುತಿಸಲಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಸೆಕ್ಷನ್ 19ರ ಅಡಿಯಲ್ಲಿ ಮಂಗಲಾ ಅವರನ್ನು ಬಂಧಿಸಲಾಗಿದೆ. ಬಳಿಕ ವಿಶಾಖಪಟ್ಟಣದಲ್ಲಿರುವ ಪಿಎಂಎಲ್ಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಕೈಲಾಶ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ತಿರುಪತಿ ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ಆಧರಿಸಿ ಇಡಿ ತನಿಖೆ ಆರಂಭಿಸಿತ್ತು. ಟಿಟಿಡಿಗೆ ಕಲಬೆರಕೆ ತುಪ್ಪ ಪೂರೈಸಲು ಕ್ರಿಮಿನಲ್ ಸಂಚು, ವಂಚನೆ, ನಕಲಿ ದಾಖಲೆ ಸೃಷ್ಟಿ ಹಾಗೂ ಭ್ರಷ್ಟಾಚಾರ ನಡೆಸಲಾಗಿದೆ ಎಂಬ ಆರೋಪಗಳು ಎಫ್ಐಆರ್ನಲ್ಲಿ ಉಲ್ಲೇಖವಾಗಿದ್ದವು.
ಇಡಿ ತನಿಖೆಯ ಪ್ರಕಾರ, ರಿಫೈನ್ಡ್ ಪಾಮ್ ಆಯಿಲ್, ಪಾಮ್ ಕರ್ನಲ್ ಆಯಿಲ್, ಪಾಮೋಲಿನ್ ಸೇರಿದಂತೆ ಎಂಜಿ-90, ಮೊನೊಗ್ಲಿಸರೈಡ್ಗಳು, ಮಿವಾಸೆಟ್ 400 ಮತ್ತು ಅಸಿಟಿಕ್ ಆಸಿಡ್ ಎಸ್ಟರ್ ಮುಂತಾದ ಹಲವು ರಾಸಾಯನಿಕಗಳನ್ನು ಬಳಸಿ ಕಲಬೆರಕೆ ತುಪ್ಪ ತಯಾರಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ನಂತರ ಈ ಉತ್ಪನ್ನವನ್ನು ‘ಅಗ್ಮಾರ್ಕ್ ಸ್ಪೆಷಲ್ ತುಪ್ಪ’ ಎಂದು ಹೆಸರಿಸಿ ಟಿಟಿಡಿಗೆ ಪೂರೈಸಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
2019ರಿಂದ 2024ರ ಅವಧಿಯಲ್ಲಿ ಈ ವಂಚನೆ ನಡೆದಿದ್ದು, ಒಟ್ಟು ₹230 ಕೋಟಿ ಮೌಲ್ಯದಷ್ಟು ಕಲಬೆರಕೆ ತುಪ್ಪವನ್ನು ಪೂರೈಸಲಾಗಿದೆ ಎಂದು ಇಡಿ ತಿಳಿಸಿದೆ. ಇದರಲ್ಲಿ ಸುಮಾರು ₹96 ಕೋಟಿ ಮೌಲ್ಯದ ಕಲಬೆರಕೆ ತುಪ್ಪವನ್ನು ಕೈಲಾಶ್ ಚಂದ್ ಮಂಗಲಾ ಖುದ್ದು ಉತ್ಪಾದಿಸಿದ್ದರು ಎಂದೂ ಇಡಿ ಹೇಳಿದೆ.
ಎಂ/ಎಸ್ ಸುಕೃತಿ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಪ್ರಮೋಟರ್ ಆಗಿರುವ ಕೈಲಾಶ್ ಚಂದ್ ಮಂಗಲಾ ಈ ಪ್ರಕರಣದಲ್ಲಿ ಸಹ ಸಂಚುಕೋರನಾಗಿದ್ದಾನೆ ಎಂದು ಇಡಿ ಆರೋಪಿಸಿದೆ. ಕಲಬೆರಕೆ ಪದಾರ್ಥಗಳ ಖರೀದಿಗೆ ಕೈಲಾಶ್ ನೆರವಾಗಿದ್ದು, ತಮ್ಮ ಕಾರ್ಖಾನೆಯಲ್ಲಿ ಕಲಬೆರಕೆ ತುಪ್ಪ ತಯಾರಿಸಿದ್ದರು ಎಂದು ಇಡಿ ಹೇಳಿದೆ.