ಬೆಂಗಳೂರು: ನೈಸ್ ಯೋಜನೆ ಒಡಂಬಡಿಕೆಯ ದಿನದಿಂದ ಇಲ್ಲಿಯವರೆಗೆ ನಡೆದಿರುವ ಅಕ್ರಮಗಳನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಸಂಸದ ಎಚ್.ಡಿ ದೇವೇಗೌಡ ಆಗ್ರಹಿಸಿದ್ದಾರೆ.
ನೈಸ್ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ, ನಿಯಮಬಾಹಿರ ವಾಣಿದ್ಯ ಚಟುವಟಿಕೆ, ರಸ್ತೆಗೆ ನೀಡಿದ ಜಾಗ ಮಾರಾಟ ನೀಡಿರುವುದು ಸೇರಿದಂತೆ ಹಲವು ಅಕ್ರಮಗಳನ್ನು ಸಿಬಿಐ ತನಿಖೆಗೆ ವಹಿಸಬೇಕಿದೆ. ಹಿಂದೆ ಈ ಅಕ್ರಮವ್ನು ಸದನ ಸಮಿತಿಗೆ ವಹಿಸಿದ್ದರೂ, ತಪ್ಪಿತಸ್ಥರನ್ನು ಕಂಡು ಹಿಡಿಯಲು ಈವರೆಗೂ ಸಾಧ್ಯವಾಗಿಲ್ಲ. ಸಿಬಿಐ ನಿವೃತ್ತ ಅಧಿಕಾರಿಗಳನ್ನೊಳಗೊಂಡ ವಿಶೇಷ ತಂಡ ರಚಿಸಿ ತನಿಖೆ ನಡೆಸಬೇಕು ಅಥವಾ ನೇರವಾಗಿ ಸಿಬಿಐ ತನಿಖೆಗೆ ವಹಿಸಬೇಕು. ಯೋಜನೆಗೆ ಸಂಬಂಧಿಸಿದ ಹಳೆಯ ಪ್ರಕರಣ ಡಿ.17ಕ್ಕೆ ಹೈಕೋರ್ಟ್ನಲ್ಲಿ ವಿಚಾರಣೆಗೆ ಬರಲಿದ್ದು, ಸರ್ಕಾರ ಈ ವೇಳೆ ಪ್ರಬಲವಾಗಿ ವಾದ ಮಂಡಿಸಬೇಕಿದೆ. ಅಧಿಕಾರಿಗಳು, ರಾಜಕಾರಣಿಗಳು ಅಕ್ರಮದಲ್ಲಿ ಭಾಗಿಯಾಗಿದ್ದು, ಸೂಕ್ತ ತನಿಖೆಯಿಂದ ಮಾತ್ರ ನ್ಯಾಯ ನೀಡಲು ಸಾಧ್ಯ.
ಈ ಬ್ಗಗೆ ಸಿಎಂ ಸಿದ್ಧರಾಮಯ್ಯ ಅವರಿಗೂ ಪತ್ರ ಬರೆಯಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು. ಹಿಂದೊಮ್ಮೆ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ತನಿಖೆಗೆ ಮುಂದಾದಾಗ ನೈಸ್ ಸಂಸ್ಥೆ ತಡೆಯಾಜ್ಞೆ ತಂದಿತ್ತು, 1995ರಿಂದ 2012 ರವರೆಗೆ ಒಂದು ರೂಪಾಯಿಯನ್ನೂ ಯೋಜನೆ ಜಾರಿಗಾಗಿ ಸಂಸ್ಥೆ ಹೂಡಿಕೆ ಮಾಡಿಲ್ಲ. ರಾಜ್ಯ ಸರ್ಕಾರ ನೀಡಿದ ಭೂಮಿಯನ್ನೇ ಐಸಿಐಸಿಐ ಬ್ಯಾಂಕ್ನಲ್ಲಿ ಅಡಮಾನ ಇಟ್ಟು, 150 ಕೋಟಿ ಸಾಲ ಪಡೆಯಲಾಗಿದೆ. ರೈತರ ಹಿತ ಕಾಪಾಡಬೇಕಾದ ಕೆಲವು ಜನಪ್ರತಿನಿಧಿಗಳೂ ಇದರಲ್ಲಿ ಭಾಗಿಯಾಗಿದ್ದಾರೆಯ ಸಂಸ್ಥೆ ಹಣಕ್ಕಾಗಿ ರಸ್ತೆಯ ಕೆಲವು ಭಾಗಗಳನ್ನೇ ಮಾರಿದೆ. ರಸ್ತೆಗಾಗಿ ನೀಡಿದ ಭೂಮಿಯಲ್ಲಿ ಸಾವಿರಾರು ರೈತರು ಕೃಷಿ ನಡೆಸುತ್ತಿದ್ದರು. ರೈತರಿಗೆ ಪುನರ್ವಸತಿ ಕಲ್ಪಿಸಬೇಕು ಅಥವಾ ನಿವೇಶನ ನೀಡಬೇಕು. ಆದರೆ ಈವರೆಗೂ ಪರಿಹಾರ ದೊರೆತಿಲ್ಲ ಎಂದರು. ಸರ್ಕಾರ ಅವರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ದಾಖಲೆ ಕಳವು: ಅಕ್ರಮ ಮುಚ್ಚಿಹಾಕಲು ಕೆಲವು ಅಧಿಕಾರಿ ಹಾಗೂ ಸಂಸ್ಥೆಯವರು 137 ದಾಖಲೆ ಕಣ್ಮರೆಯಾಗುವಂತೆ ಮಾಡಿದ್ದಾರೆ. ಸುಪ್ರೀಂನಲ್ಲಿ ವಿಚಾರಣೆ ಬಾಕಿಯಿರುವಾಗಲೇ ದಾಖಲೆ ಕಳವು ಮಾಡಿದ್ದು, ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಿದೆ. ಯೋಜನೆಯ ಕ್ರಿಯಾ ಒಪ್ಪಂದದ ಪ್ರಕರ ಮೊದಲಿಗೆ 18,500 ಎಕರೆ ಭೂಮಿ ಗುರುತಿಸಲಾಗಿದ್ದು, ಒಪ್ಪಂದದ ಪ್ರಕಾರ ನಾಲ್ಕು ಪಥದ ಸಿಮೆಂಟ್ ರಸ್ತೆ ನಿರ್ಮಿಸಬೇಕಿತ್ತು. ಆದರೆ ಹೆಚ್ಚುವರಿ ಜಾಗ ಕಬಳಿಸಲಾಗಿದೆ. ರಸ್ತೆ ನಿರ್ಮಾಣಕ್ಕೆ ಇಡೀ ಗ್ರಾಮವನ್ನು ನೋಟಿಫೈ ಮಾಡಲಾಗಿದೆ.
ಅಕ್ರಮವಾಗಿ ಭೂ ಪರಿವರ್ತನೆಗೆ ಅವಕಾಶ, ಅಧಿಸೂಚನೆಯಿಂದ ಕೈ ಬಿಡುವಿಕೆ, ನಿರಾಕ್ಷೇಪಣಾ ಪತ್ರ ನೀಡುವ ಮೂಲಕ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಲಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಪ್ರತಿಭಟನೆ: ಕೇಂದ್ರ ಸರ್ಕಾರದ ವೈಫಲ್ಯ ಖಂಡಿಸಿ ಡಿ.22ರಂದು ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ದೇವೇಗೌಡ ತಿಳಿಸಿದರು. ಪ್ರಧಾನಿಯಾಗಿ ಅಧಿಕಾರದಲ್ಲಿದ್ದಾಗ ಎಡಪಂಥೀಯ ಪಕ್ಷಗಳು ಆಡಳಿತ ನಡೆಸಲು ಸಹಕಾರ ನೀಡಿದ್ದವು. ಹೀಗಾಗಿ ಪ್ರತಿಭಟನೆಗೆ ಆ ಪಕ್ಷಗಳನ್ನು ಆಹ್ವಾನಿಸಲಾಗುವುದು. ತೃತೀಯ ರಂಗದ ಪಕ್ಷಗಳೊಂದಿಗೆ ಎಡಪಂಥೀಯ ಪಕ್ಷಗಳನ್ನೂ ಸೇರಿಸಿಕೊಂಡು ಪ್ರತಿಭಟನೆ ನಡೆಸಲಾಗುವುದು ಎಂದರು.