ರಾಜಕೀಯ

ಜಾತಿ ಒಡೆಯುವ ಉದ್ದೇಶದಿಂದ ಗಣತಿ ಮಾಡುತ್ತಿಲ್ಲ: ಸಿಎಂ

Srinivasamurthy VN

ಮೈಸೂರು: ಜಾತಿಗಳನ್ನು ಒಡೆಯುವ ಉದ್ದೇಶದಿಂದ ಜಾತಿ ಗಣತಿ ನಡೆಸುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1891 ರಿಂದ 1931 ರವರೆಗೆ ಪ್ರತಿ ಹತ್ತು ವರ್ಷಗಳಿಗೊಮ್ಮೆ ಜಾತಿ ಜನಗಣತಿ ನಡೆಯುತ್ತಿತ್ತು. ಆದರೆ ನಂತರ ಸ್ಥಗಿತಗೊಂಡಿತ್ತು. ಸಾಮಾಜಿಕ ಕಾರ್ಯಕ್ರಮಗಳನ್ನು ರೂಪಿಸಲು ಹೊರಟರೇ ಯಾವ ಆಧಾರದ ಮೇಲೆ ಮಾಡುತ್ತೀರಿ? ಎಂದು ಪ್ರಶ್ನಿಸಲಾಗುತ್ತಿದೆ. ಹೀಗಾಗಿ ಜನರ ಆರ್ಥಿಕ ಪರಿಸ್ಥಿತಿ ತಿಳಿಯಲು ಜಾತಿ ಜನಗಣತಿ ಮಾಡಲಾಗುತ್ತಿದೆ ಎಂದು ಸಮರ್ಥಿಸಿಕೊಂಡರು.

ಶಾಂತಿ ಕಾಪಾಡಲು ಮನವಿ
ಶಿವಮೊಗ್ಗದ ಜನತೆ ಯಾವುದೇ ಪ್ರಚೋದನೆಗೆ ಒಳಗಾಗದೆ ಶಾಂತಿ, ಸಾಮರಸ್ಯ ಕಾಪಾಡಬೇಕು ಎಂದು ಮನವಿ ಮಾಡಿದರು. ಪಿಎಫ್ಐ ಮೆರವಣಿಗೆ ಶಿವಮೊಗ್ಗದಲ್ಲಿ ನಡೆದಿದೆ. ಆದರೆ ಅಲ್ಲಿಂದ 10 ಕಿ.ಮೀ. ದೂರದಲ್ಲಿ ಒಬ್ಬರ ಹತ್ಯೆಯಾಗಿದೆ. ಈ ಘಟನೆ ನಡೆಯಬಾರದಿತ್ತು ಎಂದ ಅವರು, ಕೋಮುಭಾವನೆಗಳನ್ನು ಕೆರಳಿಸುವವರ ವಿರುದ್ಧ ಸರ್ಕಾರ ಕಠಿಣ
ಕ್ರಮ ಜರುಗಿಸುತ್ತದೆ ಎಂದರು.

ಗಣಿ ಲೈಸೆನ್ಸ್
ಗಣಿ ಲೈಸೆನ್ಸ್ ನೀಡಿಕೆ ಸಂಬಂಧ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ಕಾನೂನು ಪ್ರಕಾರ, ಗಣಿ ಪರವಾನಗಿ ನೀಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇದೆ.  ಅದರಂತೆ ಪರವಾನಗಿ ನೀಡಲಾಗುತ್ತಿದೆ. ಹೀರೊ ಮೋಟಾರ್ಸ್ ಧಾರವಾಡದಿಂದ ಹೋಗುವುದಿಲ್ಲ. ಆಂಧ್ರ ಮುಖ್ಯಮಂತ್ರಿ ಊಹಾಪೋಹದ ಮಾತುಗಳನ್ನಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ಬಿಡಿಎದಲ್ಲಿ ಫೈಲ್‍ಗಳು ನಾಪತ್ತೆಯಾಗುತ್ತಿರುವ ಬಗ್ಗೆ ಪರಿಶೀಲಿಸಿ, ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.

SCROLL FOR NEXT