ರಾಜಕೀಯ

700 ಗ್ರಾಮಗಳಿಗೆ ಟ್ಯಾಂಕರ್ ನೀರು

Rashmi Kasaragodu

ವಿಧಾನಸಭೆ: ರಾಜ್ಯದ ಏಳು ತಾಲೂಕುಗಳ 700 ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದೆ. ಟ್ಯಾಂಕರ್‍ಗಳಲ್ಲಿ ನೀರು ಒದಗಿಸಲಾಗುತ್ತಿದೆ ಎಂದು ಕಂದಾಯ ಸಚಿವ ಶ್ರೀನಿವಾಸಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಇನ್ನುಳಿದ ಕಡೆಯಲ್ಲೂ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾ„ಕಾರಿಗಳಿಗೆ ಸೂಚಿಸಲಾಗಿದೆ. ಈ ಕಾರ್ಯಕ್ಕೆ ಹಣಕಾಸು ಕೊರತೆ ಇಲ್ಲ ಎಂದಿದ್ದಾರೆ. ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹಾಗೂ ಬಿಜೆಪಿ ಸದಸ್ಯರು ನಿಯಮ 69ರಲ್ಲಿ ವಿಷಯ ಪ್ರಸ್ತಾಪಿಸಿ, ರಾಜ್ಯದಲ್ಲಿ ಕುಡಿಯುವ ನೀರಿಗೆ ತೊಂದರೆ ಇದ್ದು, ಅಂತರ್ಜಲ ಕುಸಿಯುತ್ತಿದೆ. ಕೆರೆಗಳು ಒಣಗುತ್ತಿವೆ. ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದ್ದರು. ಇದಕ್ಕೆ ಉತ್ತರ ನೀಡಿದ ಸಚಿವರು, 2014-15ನೇ ಸಾಲಿನಲ್ಲಿ 9 ಜಿಲ್ಲೆಗಳ 35 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ತುರ್ತು ಕುಡಿಯುವ ನೀರು ಪೂರೈಕೆ ಹಾಗೂ ಗೋ-ಶಾಲೆ ನಿರ್ವಹಣೆಗೆ ರು. 42 ಕೋಟಿ ಬಿಡುಗಡೆ ಮಾಡಲಾಗಿದೆ. ರಾಜ್ಯದಾದ್ಯಂತ 700 ಗ್ರಾಮಗಳಿಗೆ 1140 ಟ್ಯಾಂಕರ್‍ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ವಿವರ ನೀಡಿದರು.
ರಾಜ್ಯದ ಯಾವ ಭಾಗದಲ್ಲಿ ನೀರಿನ ಸಮಸ್ಯೆ ಇದ್ದರೂ ಅದನ್ನು ಪರಿಹರಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಇದಕ್ಕಾಗಿ ಯಾವುದೇ ರೀತಿಯಲ್ಲಿ ಹಣದ ಕೊರತೆ ಇಲ್ಲ ಎಂದರು. ಶಾಸಕರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಟಾಸ್ಕ್ ಫೋರ್ಸ್ ಬಾಬ್ತಿನಲ್ಲೇ ಹಣ ಇಲ್ಲ. ಶಾಸಕರು ನಿರ್ಧರಿಸುವ ಊರುಗಳಿಗೆ ನೀರು ನೀಡಲು ಹಣ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಬಿಜೆಪಿಯ ಬಸವರಾಜಬೊಮ್ಮಾಯಿ, ಸಿ.ಟಿ. ರವಿ, ಸುನೀಲ್‍ಕುಮಾರ್, ಜೆಡಿಎಸ್‍ನ ಚಲುವರಾಯಸ್ವಾಮಿ ಅವರು ಆಗ್ರಹಿಸಿದರು. ಟಾಸ್ಕ್ ಫೋರ್ಸ್ ಗೆ ಸಂಬಂಧಿಸಿದಂತೆ ಶಾಸಕರೊಂದಿಗೆ ಅಧಿಕಾರಿಗಳ ಸಭೆಯನ್ನು ಜಿಲ್ಲಾ ಮಟ್ಟದಲ್ಲಿ ಕರೆದು ಎಲ್ಲವನ್ನೂ ಸರಿಗೊಳಿಸಿ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ತಾಕೀತು ಮಾಡಿದರು.
ಟಾಸ್ಕ್ ಫೋರ್ಸ್ ನಲ್ಲಿ ಹಣವಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ಸಮರ್ಥಿಸಿಕೊಂಡರು. ಇದಕ್ಕೆ ಶಾಸಕರು ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳು ಹಣ ಇಲ್ಲ ಎಂದು ಹೇಳುತ್ತಿದ್ದಾರಲ್ಲ ಎಂದು ಪ್ರಶ್ನಿಸಿದರು. ಮಾ.28ರಂದೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆಯಾಭಾಗದ ಶಾಸಕರ ಸಭೆ ನಡೆಸಲಾಗುತ್ತಿದೆ. ಟಾಸ್ಕ್  ಫೋರ್ಸ್ ಗೆ ಸಂಬಂಧಿಸಿದ ನಿಧಿಯೇ ಪ್ರಥಮ ಅಜೆಂಡಾ ಆಗಿರುತ್ತದೆ. ಅಲ್ಲಿ ಪೂರ್ಣ ಮಾಹಿತಿ ಪಡೆದುಕೊಳ್ಳಿ. ನಂತರ ಸೋಮವಾರ ಸದನದಲ್ಲಿ ಇದನ್ನು ಚರ್ಚಿಸೋಣ. ಅಧಿಕಾರಿಗಳು ಸುಳ್ಳು ಹೇಳುತ್ತಿದ್ದರೆ ಕ್ರಮ ಕೈಗೊಳ್ಳೋಣ ಎಂದು ಸಚಿವರು ನುಡಿದರು. ಇದಕ್ಕೆ ಎಲ್ಲರೂ ಸಮ್ಮತಿಸಿದರು.


SCROLL FOR NEXT