ರಾಜಕೀಯ

ಉಪಲೋಕಾಯುಕ್ತ ಅಡಿ ಪದಚ್ಯುತಿಗೆ ಮೇಲ್ಮನೆಯಲ್ಲಿ ಬೀಳದ ಸಹಿ

Srinivas Rao BV

ಬೆಂಗಳೂರು: ಉಪ ಲೋಕಾಯುಕ್ತ ಸುಭಾಷ್ ಬಿ.ಅಡಿ ಅವರ ಪದಚ್ಯುತಿಗೊಳಿಸುವ ಪ್ರಸ್ತಾವಕ್ಕೆ ಇತ್ತ ವಿಧಾನಸಭೆಯಲ್ಲಿ ಆಡಳಿತ ಪಕ್ಷದ 103 ಮಂದಿ ಸಹಿ ಹಾಕಿ ಸಭಾಧ್ಯಕ್ಷರಿಗೆ ಪತ್ರ ಸಲ್ಲಿಸಿದರೆ, ಅತ್ತ ಮೇಲ್ಮನೆಯಲ್ಲಿ ಪದಚ್ಯುತಿಗೆ ಸಹಿ ಸಂಗ್ರಹಿಸುವ ಕೆಲಸವನ್ನೇ ಕಾಂಗ್ರೆಸ್ ಕೈಬಿಟ್ಟಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಒಂದು ರೀತಿ ಒಡೆದ ಮನೆಯಾದಂತೆ ಕಾಣುತ್ತಿದೆ.
ಆದರೆ, ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ ಅವರ ಪದಚ್ಯುತಿ ಸಂಬಂಧ ವಿಧಾನಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಪ್ರತ್ಯೇಕವಾಗಿ ಸಲ್ಲಿಸಿದ್ದ ಪ್ರಸ್ತಾವನೆಗೆ ಮಾತ್ರ ಉಭಯ ಸದನಗಳಲ್ಲಿ ಕಾಂಗ್ರೆಸ್ ಬೆಂಬಲ ಸೂಚಿಸಿತು. ಅಲ್ಲದೆ, ಅದನ್ನು ಸದನದ ಸರ್ವಾನುಮತದ ಅಭಿಪ್ರಾಯವೆಂದು ರೂಪಿಸುವಲ್ಲಿ ಯಶಸ್ವಿಯಾಯಿತು. ಆದರೆ, ಉಪ ಲೋಕಾಯುಕ್ತ ವಿಚಾರದಲ್ಲಿ ಮಾತ್ರ ವಿಪಕ್ಷಗಳು ಕಾಂಗ್ರೆಸ್ ಪ್ರಯತ್ನಕ್ಕೆ ವಿರುದ್ಧವಾಗಿವೆ.
ಸಾಮಾನ್ಯವಾಗಿ ಯಾವುದೇ ವಿಧೇಯಕದ ಬಗ್ಗೆ ಆಡಳಿತ ಪಕ್ಷದ ಉಭಯ ಸದನಗಳಲ್ಲಿ ಒಂದೇ ನಿಲುವಿರುತ್ತದೆ.  ಆದರೆ, ಉಪ ಲೋಕಾಯುಕ್ತ ಸುಭಾಷ್ ಬಿ.ಅಡಿ ಅವರ ವಿಷಯದಲ್ಲಿ ಮಾತ್ರ ಕಾಂಗ್ರೆಸ್ ವಿಧಾನಸಭೆಯಲ್ಲಿ ಒಂದು ತೀರ್ಮಾನ, ಮೇಲ್ಮನೆಯಲ್ಲಿ ಮತ್ತೊಂದು ತೀರ್ಮಾನ ಕೈಗೊಳ್ಳುವ ಮೂಲಕ ವಿಭಿನ್ನ ಹಾದಿ ತುಳಿದಿದೆ. ಸದ್ಯ ಮೇಲ್ಮನೆಯಲ್ಲಿ ಕಾಂಗ್ರೆಸ್ 28 ಸದಸ್ಯರನ್ನು ಹೊಂದಿದೆ. ಜತೆಗೆ ರಘು ಆಚಾರ್, ಸುರೇಶ್ ಹಾಗೂ ಎಂ.ಡಿ. ಲಕ್ಷ್ಮಿನಾರಾಯಣ ಅವರು ಕಾಂಗ್ರೆಸ್ ಜತೆ ಗುರುತಿಸಿಕೊಂಡಿರುವುದರಿಂದ ಆ ಪಕ್ಷದ ಸಂಖ್ಯಾಬಲ 31 ಆಗಿದೆ. ಜೆಡಿ ಎಸ್ 12,ಬಿಜೆಪಿಯಿಂದ ಸಭಾಪತಿ ಸೇರಿದಂತೆ 31 ಮಂದಿ ಇದ್ದಾರೆ. ಮತ್ತೊಬ್ಬರು ಪಕ್ಷೇತರ. ಇಲ್ಲಿ ಸಭಾಪತಿ, ಉಪಸಭಾಪತಿ ಸ್ಥಾನ ಹಂಚಿಕೆ ವಿಷಯದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿ ಕೊಂಡಿರುವುದರಿಂದ ಈ ಕೂಟದ ಸಂಖ್ಯಾಬಲ 43 ಆಗುತ್ತದೆ. ಲೋಕಾಯುಕ್ತ ಕಾಯ್ದೆ ಪ್ರಕಾರ ಪ್ರಸ್ತಾವನೆ ಸ್ವೀಕಾರಗೊಳ್ಳಲು 3ನೇ ಒಂದರಷ್ಟು ಸಹಿ ಸಾಕು. ಆ ಸಂಖ್ಯಾಬಲ ಕಾಂಗ್ರೆಸ್ ನಲ್ಲಿದೆ. ಆದರೂ ಪ್ರಸ್ತಾವಕ್ಕೆ ಸಹಿ ಸಂಗ್ರಹಿಸುವ ಕೆಲಸ ಕೈಬಿಟ್ಟಿರುವುದು ಕುತೂಹಲ ಕೆರಳಿಸಿದೆ.
ಇನ್ನೊಂದು ಮೂಲದ ಪ್ರಕಾರ ಸಿಎಂ ಸಿದ್ದರಾಮಯ್ಯ ಅವರೇ ವಿಧಾನಸಭೆ ಯಲ್ಲಿ ಪ್ರಸ್ತಾವದ ಸ್ಥಿತಿಗತಿ ನೋಡಿಕೊಂಡು ಗುರುವಾರ ನಡೆಯುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿಯೇ ಸಹಿ ಸಂಗ್ರಹಿಸುವಂತೆ ಸೂಚಿಸಿದ್ದಾರೆ. ಮೇಲ್ಮನೆಯ ಕಾಂಗ್ರೆಸ್‍ನ ಕೆಲವು ಸದಸ್ಯರು ಉಪ ಲೋಕಾಯುಕ್ತ ಪದಚ್ಯುತಿ ಪ್ರಯತ್ನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಒಂದು ವೇಳೆ ಈ ಪ್ರಯತ್ನಕ್ಕೆ ಕೈ ಹಾಕಿದರೆ ಕಾಂಗ್ರೆಸ್‍ಗೆ ರಾಜಕೀಯ ವಾಗಿ ತೀವ್ರ ಹಿನ್ನಡೆ ಆಗಲಿದೆ.

SCROLL FOR NEXT