ಹುಬ್ಬಳ್ಳಿ: ಸಂವಿಧಾನದ ಆಶಯ ಈಡೇರಬೇಕಾದರೆ ಜನಸಂಖ್ಯೆ ಆಧಾರಿತ ಮೀಸಲಾತಿ ಜಾರಿಗೆ ಬರಬೇಕು ಎಂಬುದು ನನ್ನ ಸ್ಪಷ್ಟ ನಿಲುವು. ಎಂತಹ ಅಡ್ಡಿ ಆತಂಕಗಳು ಎದುರಾದರೂ ಅದನ್ನು ಅನುಷ್ಠಾನಕ್ಕೆ ತರಲು ಸರಕಾರ ಬದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಮಾದಿಗರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ನಾವೇನಿದ್ದರೂ ಅದನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಹುದಷ್ಟೇ’ ಎಂದರು.
ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಮಾತ್ರವಲ್ಲ, ಸಕಲ ಸೌಲಭ್ಯವೂ ಸಿಗಬೇಕು ಎನ್ನುವುದರ ಪರ ಇರುವವನು ನಾನು. ಹೀಗಾಗಿ ನನ್ನ ಮಾತನ್ನು ನಂಬಿ. ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಸಂಪುಟದಲ್ಲಿ ತೆಗೆದುಕೊಳ್ಳುವ ತೀರ್ಮಾನಗಳನ್ನು ಸಮಾವೇಶದಲ್ಲಿ ಘೋಷಿಸಲು ಆಗುವುದಿಲ್ಲ ಎಂದು ಮನವೊಲಿಸುವ ಪ್ರಯತ್ನ ಮಾಡಿದರು.
ಜನಸಂಖ್ಯೆ ಆಧಾರದ ಮೇಲೆ ಸವಲತ್ತು ಸಿಗಬೇಕು ಎನ್ನುವ ಕಾರಣದಿಂದಲೇ ಜಾತಿ ಜನಗಣತಿ ಮಾಡಿಸಲಾಗಿದೆ. ಅದರ ವರದಿಯೂ ಜನವರಿಗೆ ಸಿಗಲಿದೆ. ಆ ವರದಿಯನ್ನೂ ಗಮನದಲ್ಲಿ ಇಟ್ಟುಕೊಂಡು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ಸದ್ಯ ಶೇ 50ರಷ್ಟು ಮೀಸಲಾತಿ ಇದ್ದು, ಅದನ್ನು ಶೇ 70ಕ್ಕೆ ಹೆಚ್ಚಿಸುವ ಸಂಬಂಧ ಸಂವಿಧಾನ ತಿದ್ದುಪಡಿಗೆ ಶಿಫಾರಸು ಮಾಡಲಾಗುವುದು. ಈ ವಿಷಯವನ್ನು ವಿಧಾನ ಪರಿಷತ್ತಿನಲ್ಲಿಯೂ ಪ್ರಸ್ತಾಪ ಮಾಡಿದ್ದು, ಮುಂದಿನ ಅಧಿವೇಶನದಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಭಾಷಣದ ವೇಳೆ ಮಾದಿಗ ಸಮುದಾಯವನ್ನು ಸಿಎಂ ಸಿದ್ದರಾಮಯ್ಯ ಆದಿ ಜಾಂಬವ ಸಮುದಾಯ ಎಂದು ಕರೆದರು. ಈ ವೇಳೆ ಮಾದಿಗ ಎಂದು ಕರೆಯುವಂತೆ ನೆರೆದಿದ್ದವರು ಒತ್ತಾಯಿಸಿದರು. ಇದಕ್ಕೊಪ್ಪದ ಸಿಎಂ ಸಿದ್ದರಾಮಯ್ಯ, ಬೇರೆ ಯಾವುದೇ ನಾಯಕರು ಬೇಕಾದರೆ ಹಾಗೆ ಕರೆಯಲಿ. ನಾನು ರಾಜ್ಯದ ಮುಖ್ಯಮಂತ್ರಿ. ಆ ಪದವನ್ನು ನಾನು ಹೇಳಬಾರದು. ದಯವಿಟ್ಟು ನನಗೆ ಬಲವಂತ ಮಾಡಬೇಡಿ ಎಂದು ಸಿ.ಎಂ ಮನವಿ ಮಾಡಿದರು.