ಮೈಸೂರು: ವಾಚ್ ಮತ್ತು ಕನ್ನಡ ವಿಚಾರ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನಡುವೆ ನಡೆಯುತ್ತಿರುವ ವಾಕ್ಸಮರ ಶನಿವಾರ ಕೂಡ ಮುಂದುವರೆದಿದೆ.
ತಮ್ಮ ಕನ್ನಡಕ ಹಾಗೂ ವಾಚ್ ಕುರಿತಂತೆ ಕುಮಾರಸ್ವಾಮಿ ಅವರು ನೀಡಿದ್ದ ಹೇಳಿಕೆ ಕುರಿತಂತೆ ಮೈಸೂರಿನಲ್ಲಿ ನಡೆದ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಮಾತನಾಡಿರುವ ಸಿದ್ದರಾಮಯ್ಯ ಅವರು, ಕುಮಾರಸ್ವಾಮಿ ಅವರು ತಮ್ಮ ಮಗನಿಗೆ ರು.5 ಕೋಟಿ ಕಾರು ತೆಗೆದುಕೊಟ್ಟವರಾಗಿದ್ದು, ನಾನು ದುಬಾರಿ ಕನ್ನಡ ಹಾಗೂ ವಾಚ್ ಹಾಕಿಕೊಳ್ಳುತ್ತಿದ್ದೇನೆಂದು ಆರೋಪಿಸಿದ್ದಾರೆ. ಸಾರ್ವಜನಿಕರ ಜೀವನದಲ್ಲಿರುವವರು ಈ ರೀತಿಯಾಗಿ ಮಾತನಾಡಬಾರದು. ತಮ್ಮ ಮಗನಿಗೆ 5 ಕೋಟಿ ಕಾರು ಕೊಡಿಸಿದವರು ನನ್ನ ಆಸ್ತಿ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಅವರಿಗಿಲ್ಲ ಎಂದು ಹೇಳಿದ್ದಾರೆ.
ಇದರಂತೆ ದೇವದುರ್ಗ ಉಪ ಚುನಾವಣೆ ಪ್ರಚಾರಕ್ಕಾಗಿ ರಾಯಚೂರಿಗೆ ಆಗಮಿಸಿದ್ದ ಕುಮಾರಸ್ವಾಮಿ ಅವರೂ ಕೂಡ ಸಿಎಂ ಸಿದ್ದು ವಿರುದ್ಧ ಕಿಡಿಕಾರಿದ್ದಾರೆ. ಸಿಎಂ ಅವರು ತಮ್ಮ ದುಬಾರಿ ಬೆಲೆಯ ಕನ್ನಡಕ, ವಾಚ್ ನನಗೆ ಮಾರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ. ನನಗೆ ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಖರೀದಿಸುವ ಅಭ್ಯಾಸವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಈ ಹಿಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರು.1.5 ಲಕ್ಷದ ಕನ್ನಡಕ ಹಾಗೂ ರು.50 ಲಕ್ಷದ ವಾಚ್ ಅನ್ನು ಹಾಕಿಕೊಳ್ಳುತ್ತಾರೆ. ಇಂತಹ ವ್ಯಕ್ತಿಯ ಸಮಾಜವಾದಿ ವ್ಯಕ್ತಿ ಎಂದು ಹೇಗೆ ಕರೆದುಕೊಳ್ಳಲು ಸಾಧ್ಯ ಎಂದು ಪ್ರಶ್ನೆ ಹಾಕಿದ್ದರು.
ಈ ಪ್ರಶ್ನೆಗೆ ಉತ್ತರಿಸಿದ್ದ ಸಿದ್ದರಾಮಯ್ಯ ಅವರು, ನನ್ನ ಕನ್ನಡಕವನ್ನು ರು. 50,000 ಹಾಗೂ ವಾಚ್ ಅನ್ನು ರು.10 ಲಕ್ಷಕ್ಕೆ ಕುಮಾರಸ್ವಾಮಿ ಅವರಿಗೆ ಮಾರಾಟ ಮಾಡುತ್ತೇನೆಂದು ತಿರುಗೇಟು ನೀಡಿದ್ದಾರೆ. ಈ ಹೇಳಿಕೆ ಇದೀಗ ಇಬ್ಬರ ನಡುವಿನ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.