ಬೆಂಗಳೂರು: ಜೆಡಿಎಸ್ ಭಿನ್ನಮತ ತಾರಕಕ್ಕೇರಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಿಜವಾದ ಶನಿ ಅವರ ಸಹೋದರ ಎಚ್.ಡಿ.ರೇವಣ್ಣ ಎಂದು ಜೆಡಿಎಸ್ ಉಚ್ಚಾಟಿತ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಸೋಮವಾರ ಆರೋಪಿಸಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ 8 ಭಿನ್ನಮತೀಯ ಶಾಸಕರನ್ನು ನಿರೀಕ್ಷೆಯಂತೆ ಜೆಡಿಎಸ್ ಪಕ್ಷದಿಂದ ಅಮಾನತುಗೊಳಿಸಿಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಉಚ್ಚಾಟನೆಗೊಂಡ ಶಾಸಕರು ಖಾಸಗಿ ಹೋಟೆಲ್ ನಲ್ಲಿ ಬಾಲಕೃಷ್ಣ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಈ ವೇಳೆ ಮಾತನಾಡಿದ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರು, ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಅವರ ಹಿರಿಯ ಪುತ್ರ ಎಚ್.ಡಿ.ರೇವಣ್ಣ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಯಸಭೆ ಚುನಾವಣೆಯಲ್ಲಿ ರೇವಣ್ಣ ಅವರು ಹಣ ತೆಗೆದುಕೊಂಡಿಲ್ಲವೇ? ಎಂದು ಪ್ರಶ್ನಿಸಿದ ಉಚ್ಚಾಟಿತ ಶಾಸಕ, ಇಲ್ಲಿಯವರೆಗೆ ಹಣ ಪಡೆದಿಲ್ಲ ಎಂದು ಆಣೆ ಮಾಡಲಿ ಎಂದು ರೇವಣ್ಣ ಅವರಿಗೆ ಬಾಲಕೃಷ್ಣ ಸವಾಲು ಹಾಕಿದರು. ಅಲ್ಲದೆ ಮೊದಲು ತಿಕ್ಕಲು ತರಾ ಮಾತನಾಡುವುದನ್ನು ಬಿಡಲಿ ಎಂದರು.
ಇದೇ ವೇಳೆ ದೇವೇಗೌಡರ ವಿರುದ್ಧವೂ ವಾಗ್ದಾಳಿ ನಡೆಸಿದ ಬಾಲಕೃಷ್ಣ, ದೇವೇಗೌಡರು ಕುಮಾರಸ್ವಾಮಿಯನ್ನು ಬೆಳೆಯಲು ಬಿಡುತ್ತಿಲ್ಲ. ಮಗ ಸ್ಟ್ರಾಂಗ್ ಆದರೆ ತಾನೂ ವೀಕ್ ಆಗುತ್ತೇನೆ ಎಂಬ ಭಯ ಇದೆ. ಕುಮಾರಸ್ವಾಮಿಯನ್ನು ನಮ್ಮ ಕೈಗೆ ಕೊಡಿ. ನಾವು 2018ರಲ್ಲಿ ಅವರನ್ನು ಹೇಗಾದರೂ ಮಾಡಿ ಮುಖ್ಯಮಂತ್ರಿ ಮಾಡುತ್ತೇವೆ ಎಂದರು.
ನಾನು ಡಿ.ವಿ. ಸದಾನಂದಗೌಡ ಹಾಗೂ ಜಗದೀಶ್ ಶೆಟ್ಟರ್ ಅವರ ಸಮಕಾಲಿನ ರಾಜಕಾರಣಿ. ನಾನು ಬಿಜೆಪಿಯಲ್ಲಿದ್ದರೆ ಇಂದು ಹಿರಿಯ ನಾಯಕನಾಗುತ್ತಿದ್ದೆ. ಆದರೆ ದೇವಗೌಡರಾಗಿ ನಾನು ಬಿಜೆಪಿ ತೊರೆದು ಜೆಡಿಎಸ್ ಗೆ ಬಂದೆ. ಅಲ್ಲದೆ ಹಿಂದೆ ಬಿ ಎಸ್ ಯಡಿಯೂರಪ್ಪ ಅವರಿಗೆ ಅಧಿಕಾರ ನೀಡಿ. ಈಗ ಅಧಿಕಾರ ಕೊಟ್ಟರೆ ಅದು ನೀವು ಕೊಟ್ಟಂತೆ ಆಗುತ್ತದೆ. ಇಲ್ಲಿದ್ದರೆ ಜನರೇ ಅವರಿಗೆ ಅಧಿಕಾರ ನೀಡುತ್ತಾರೆ ಎಂದು ನಾನು ಎಚ್ಚರಿಸಿದ್ದೆ. ಆದರೆ ನನ್ನ ಮಾತು ಕೇಳಲಿಲ್ಲ. ಹಾಗಲೂ ಬಿಎಸ್ ವೈ ನನಗೆ ಸಚಿವ ಸ್ಥಾನ ಕೊಡುತ್ತೇನೆ ಬಾ ಎಂದರು. ಆದರೆ ಕುಮಾರಣ್ಣನಿಗಾಗಿ ನಾನು ಹೋಗಲಿಲ್ಲ ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos