ಮಂಗಳೂರು: ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರು, ಈ ಮೂವರಿಗೆ ರಾಜೀವ್ ಗಾಂಧಿ ಖೇರ್ ರತ್ನ ಪ್ರಶಸ್ತಿ ನೀಡಬೇಕು ಎಂದು ಲೇವಡಿ ಮಾಡಿದ್ದಾರೆ.
ಇಂದು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪೂಜಾರಿ, ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಸೂಚನೆಯನ್ನು ಪಾಲಿಸುತ್ತಿಲ್ಲ ಮತ್ತು ಕರಾವಳಿಯವರೆ ಆಗಿರುವ ವೀರಪ್ಪ ಮೊಯ್ಲಿ ಹಾಗೂ ಡಿ.ವಿ.ಸದಾನಂದ ಗೌಡರು ಒಳಸಂಚಿಗೆ ಬಲಿಯಾಗಿ ಅಪರಾಧ ಮಾಡುತ್ತಿದ್ದಾರೆ. ಇವರು ಆಡುತ್ತಿರುವ ಆಟಕ್ಕೆ ಇವರಿಗೆ 'ಖೇಲ್ ರತ್ನ' ಪ್ರಶಸ್ತಿ ನೀಡಬೇಕು. ಪ್ರಶಸ್ತಿ ನೀಡದಿದ್ದರೆ ಅಪರಾಧವಾದಿತು' ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಅವರು ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಬದ್ಧರಾಗಿದ್ದು, ಯೋಜನೆಗೆ ಅಡ್ಡ ಬಂದರೆ ಅವರನ್ನು ನನ್ನ ಬಳಿ ಕಳುಹಿಸಿ ನಾನು ಉತ್ತರಿಸುತ್ತೇನೆ ಎಂದಿದ್ದಾರೆ ಮಹಾನ್ ಸುಳ್ಳುಗಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಸೇರಿದಂತೆ ಈ ಇಬ್ಬರು ಮಾಜಿ ಸಿಎಂಗಳು ಕರಾವಳಿ ಪ್ರದೇಶವನ್ನು ಸಹರಾ ಮರುಭೂಮಿ ಮಾಡಲು ಹೊರಟಿದ್ದಾರೆ' ಎಂದು ಪೂಜಾರಿ ಆರೋಪಿಸಿದ್ದಾರೆ.