ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕೆಲ ತಿಂಗಳುಗಳು ಮಾತ್ರ ಬಾಕಿ ಉಳಿದಿರುವಾಗ ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನಗಳ ಭರ್ತಿಗೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ನೀಡಿದೆ.
ಮೂರು ಖಾಲಿ ಇರುವ ಸ್ಥಾನಗಳನ್ನು ತುಂಬುವುದಲ್ಲದೆ ಕೆಲವು ಖಾತೆಗಳ ಮರು ಹಂಚಿಕೆ ಮಾಡುವ ಸಾಧ್ಯತೆಯಿದೆ. ಅತ್ಯಂತ ಪ್ರಮುಖ ಗೃಹ ಖಾತೆಯನ್ನು ರಮನಾಥ್ ರೈಗೆ ನೀಡುವ ಸಾಧ್ಯತೆಯಿದೆ. ಅವರು ಈಗಾಗಲೇ ಅರಣ್ಯ ಮತ್ತು ಪರಿಸರ ಖಾತೆಯನ್ನು ಹೊಂದಿದ್ದಾರೆ.
ಹೊಸ ಸಚಿವರ ಪ್ರಮಾಣವಚನ ನಾಳೆ ಅಥವಾ ಇದೇ 21ರಂದು ನಡೆಯುವ ಸಾಧ್ಯತೆಯಿದೆ.
ತಿಪಟೂರು ಶಾಸಕ ಕೆ. ಷಡಕ್ಷರಿ, ಮುಧೋಳದ ಆರ್.ಬಿ.ತಿಮ್ಮಾಪುರ ಮತ್ತು ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಅವರು ರಾಜ್ಯ ಸಚಿವ ಸಂಪುಟ ಸೇರುವ ಸಾಧ್ಯತೆಯಿದೆ. ಗೃಹ ಸಚಿವರಾಗಿದ್ದ ಡಾ.ಜಿ.ಪರಮೇಶ್ವರ್, ಅಬಕಾರಿ ಖಾತೆ ಸಚಿವ ಎಚ್.ವೈ.ಮೇಟಿ ಅವರ ರಾಜಿನಾಮೆ ಹಾಗೂ ಸಹಕಾರ ಖಾತೆ ಸಚಿವ ಮಹದೇವ ಪ್ರಸಾದ್ ಅವರ ಸಾವಿನಿಂದ ಆ ಖಾತೆಗಳು ಖಾಲಿ ಉಳಿದುಕೊಂಡಿವೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರೊಂದಿಗೆ ಚರ್ಚೆ ನಡೆಸಿದ್ದು, ಸಚಿವಾಲಯದ ವಿಸ್ತರಣೆ ಪ್ರಸ್ತಾವನೆಗೆ ಹೈಕಮಾಂಡ್ ಒಪ್ಪಿಗೆ ನೀಡಿದ್ದಾರೆ ಎಂದಿದ್ದಾರೆ. ಆದರೆ ಯಾವ ಶಾಸಕರನ್ನು ಸಂಪುಟಕ್ಕೆ ಸೇರಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಹೆಸರು ಬಹಿರಂಗಪಡಿಸಿಲ್ಲ.
ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಮೂರು ಸ್ಥಾನಗಳನ್ನು ಲಿಂಗಾಯತ, ಕುರುಬ ಮತ್ತು ದಲಿತ ಸಮುದಾಯಕ್ಕೆ ನೀಡಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.ಎಚ್.ಎಂ.ರೇವಣ್ಣ ಮತ್ತು ಶಡಕ್ಷರಿ ಸಂಪುಟ ಸೇರುವುದು ಬಹುತೇಕ ಖಚಿತವಾಗಿದ್ದು ಆರ್.ಬಿ.ತಿಮ್ಮಾಪುರ ಅವರಿಗೆ ಮಳವಳ್ಳಿ ಶಾಸಕ ಪಿಎಂ ನರೇಂದ್ರಸ್ವಾಮಿಯವರ ಮಧ್ಯೆ ಪೈಪೋಟಿ ಜೋರಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos