ನಾಯಕರ ಭೋಜನಕ್ಕೆ ಸಿದ್ದವಾದ ಬೆಳ್ಳಿ ತಟ್ಟೆ ಮತ್ತು ಪಿಂಗಾಣಿ
ಕಲಬುರಗಿ: ಕಳೆದ ಡಿಸೆಂಬರ್ 16ರಂದು ಕಲಬುರಗಿಯಲ್ಲಿ ಸಾಧನ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮತ್ತು ಅವರ ಸಹೋದ್ಯೋಗಿಗಳು ಹಾಗೂ ಇತರ ಅಧಿಕಾರಿಗಳ ಭೋಜನಕ್ಕೆ ಜಿಲ್ಲಾಡಳಿತ 10 ಲಕ್ಷ ರೂಪಾಯಿ ಖರ್ಚು ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.
ಕಲಬುರಗಿ ಜಿಲ್ಲೆಯ ಬಿಜೆಪಿ ಮಾಜಿ ಅಧ್ಯಕ್ಷ ರಾಜಕುಮಾರ್ ಪಾಟೀಲ್ ಟೆಲ್ಕುರ್, ಸುದ್ದಿಗಾರರ ಜೊತೆ ಮಾತನಾಡಿ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಅವರ ಪರವಾಗಿ ಐವಾನ್ ಇ ಶಾಹಿ ಗೆಸ್ಟ್ ಹೌಸ್ ನಲ್ಲಿ ಮುಖ್ಯಮಂತ್ರಿ ಹಾಗೂ ಇತರರಿಗೆ ರಾತ್ರಿ ಭೋಜನವನ್ನು ಜಿಲ್ಲಾಡಳಿತ ಏರ್ಪಡಿಸಿತ್ತು.
ಪ್ರತಿಯೊಬ್ಬರ ಊಟಕ್ಕೆ ಜಿಲ್ಲಾಡಳಿತ ತಲಾ 800 ರೂಪಾಯಿ ಖರ್ಚು ಮಾಡಿದೆ. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಶರಣ್ ಪ್ರಕಾಶ್ ಪಾಟೀಲ್, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ, ಅಳಂದ ಶಾಸಕ ಬಿ.ಆರ್.ಪಾಟೀಲ್ ಮೊದಲಾದವರು ಅಂದು ಮುಖ್ಯಮಂತ್ರಿಗಳ ಜೊತೆ ಭೋಜನ ಸವಿದಿದ್ದಾರೆ.
ಹೈದರಾಬಾದ್ ಮೂಲದ ಕ್ಯಾಟರಿಂಗ್ ನವರಿಂದ ಭೋಜನವನ್ನು ಪೂರೈಸಲಾಯಿತು. ಊಟ ಮಾಡಲು ಬೆಳ್ಳಿ ತಟ್ಟೆ ಮತ್ತು ಪಿಂಗಾಣಿಯನ್ನು ಬಳಸಲಾಯಿತು. ಈ ನಾಯಕರು ಸಾಮಾನ್ಯ ಜನತೆಗೆ ಏನು ಸಂದೇಶ ಸಾರಲು ಹೊರಟಿದ್ದಾರೆ ಎಂದು ಕೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos