ಜೆಡಿಎಸ್ ಪಕ್ಷ ಸೇರಿದ ಮಾಜಿ ಸಂಸದ ಎಚ್. ವಿಶ್ವನಾಥ್
ಬೆಂಗಳೂರು: ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವುದೇ ನನ್ನ ಪ್ರಮುಖ ಅಜೆಂಡಾ. ಇನ್ನು ಮುಂದೆ ಜೆಡಿಎಸ್ ಗೆ ನನ್ನ ನಿಷ್ಠೆ ಎಂದು ಮಾಜಿ ಸಂಸದ ಎಚ್. ವಿಶ್ವನಾಥ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಸೇರಿದ ನಂತರ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ, ಪಕ್ಷದ ಎಲ್ಲಾ ಚಟುವಟಿಕೆಗಳಿಂದ ನನ್ನನ್ನು ದೂರ ಇಡಲಾಗಿತ್ತು ಎಂದು ವಿಶ್ವನಾಥ್ ದೂರಿದ್ದಾರೆ.
ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ರಾಜ್ಯಾದ್ಯಂತ ಸಂಚರಿಸುವುದಾಗಿ ಹೇಳಿದ ಅವರು ಕುಮಾರ ಸ್ವಾಮಿ 2006 ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಕುಮಾರ ಸ್ವಾಮಿ ಅವರ ಬಗ್ಗೆ ಅಪಾರ ಗೌರವವಿದ್ದು, ನನಗೆ ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ ಮೂರು ತಿಂಗಳ ಹಿಂದೆ ಪಕ್ಷದ ಮುಖಂಡರಿಂದ ನನಗೆ ಪಕ್ಷ ಸೇರಲು ಆಹ್ವಾನ ಬಂತು, ನಂತರ ನಾನು ಶಾಸಕ ಬಸವರಾಜ ಹೊರಟ್ಟಿ, ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಜೊತೆ ಮಾತುಕತೆ ನಡೆಸಿದೆ, ನಾನು ಜೆಡಿಎಸ್ ಸೇರಲೇಬೇಕೆಂದು ಕುಮಾರಸ್ವಾಮಿ ನನಗೆ ಮನವೊಲಿಸಿದರು ಎಂದು ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ,
ವಿಶ್ವನಾಥ್ ಅವರು ಸುಮಾರು 40 ವರ್ಷಗಳ ಕಾಲ ಪಕ್ಷಕ್ಕಾಗಿ ಅವಿರತವಾಗಿ ಶ್ರಮಿಸಿದ್ದಾರೆ. ಆದರೆ ಅವರು ಎಷ್ಟು ನೋವು ಅನುಭವಿಸಿದ್ದಾರೆ ಎಂಬುದು ನನಗೆ ಗೊತ್ತು. ಅವರು ಪಕ್ಷ ಸೇರಿರುವುದರಿಂದ ಮೈಸೂರು ಭಾಗದಲ್ಲಿ ಪಕ್ಷ ಮತ್ತಷ್ಟು ಬಲವರ್ಧನೆಗೊಳ್ಳಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ವಿರಾಜಪೇಟೆ ಮಾಜಿ ಶಾಸಕ ಎಚ್.ಡಿ.ಬಸವರಾಜ್, ತೇರದಾಳದ ಮಾಜಿ ಶಾಸಕ ಬಸವರಾಜ ಕನ್ನೂರು, ಕೆಪಿಸಿಸಿ ಸದಸ್ಯ ಎ.ಎಸ್.ಚನ್ನಬಸಪ್ಪ ಇದೇ ವೇಳೆ ಜೆಡಿಎಸ್ ಸೇರ್ಪಡೆಗೊಂಡರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos