ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಿಂದಿನ ಎಲ್ಲಾ ಮುಖ್ಯಮಂತ್ರಿಗಳಿಗಿಂತ ಅತ್ಯಧಿಕ ಪ್ರಮಾಣದಲ್ಲಿ ಸಾಲ ಮಾಡಿ ರಾಜ್ಯವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ 1.29 ಲಕ್ಷ ಕೋಟಿ ರು. ಸಾಲ ಮಾಡಿದೆ, ಇದು ಹಿಂದಿನ ಎಲ್ಲ ಸರ್ಕಾರಗಳ ಅವಧಿಗಿಂತ ಅತ್ಯಧಿಕವಾಗಿದೆ. 12 ಸಲ ಬಜೆಟ್ ಮಂಡಿಸಿದ ಅನುಭವವಿರುವ ಸಿದ್ದರಾಮಯ್ಯ ಅವರು ಸಾಲ ಮಾಡುವುದಿಲ್ಲ ಎಂಬ ನಿರೀಕ್ಷೆಯಿತ್ತು, ಆದರೆ ಸಿಎಂ ರಾಜ್ಯವನ್ನು ಮತ್ತೆ ಸಾಲದ ಸುಳಿಗೆ ಸಿಲುಕಿಸಿದ್ದಾರೆ ಎಂದು ದೂರಿದ್ದಾರೆ.
ಸಿದ್ದರಾಮಯ್ಯ ಅವರು ಹಲವು ಭಾಗ್ಯ ಯೋಜನೆಗಳಿಗಾಗಿ ರಾಜ್ಯವನ್ನು ಸಾಲದ ಕೂಪದಲ್ಲಿ ತಳ್ಳಿದ್ದಾರೆ. 2013-14 ನೇ ಸಾಲಿನಲ್ಲಿ 18,590 ಕೋಟಿ ರು ಸಾಲ ಮಾಡಿದ್ದಾರೆ, ಆ ನಂತರದ ಆರ್ಥಿಕ ವರ್ಷಗಳಲ್ಲಿಯೂ ಗಣನೀಯವಾಗಿ ಸಾಲ ಮಾಡಲಾಗಿದೆ, 2013ರಲ್ಲಿ ರಾಜ್ಯದ ಒಟ್ಟು ಸಾಲ 1,12 ಲಕ್ಷ ಕೋಟಿ ಇದ್ದರೇ, 2014 ರಲ್ಲಿ 1.36 ಲಕ್ಷ ಕೋಟಿ, 2015 ರಲ್ಲಿ 1.55 ಲಕ್ಷ ಕೋಟಿ, 2016 ರಲ್ಲಿ 1.80 ಲಕ್ಷ ಕೋಟಿ ಹಾಗೂ 2017 ರಲ್ಲಿ ಈ ತನಕ 2.42 ಲಕ್ಷ ಕೋಟಿ ರು ಇದೆ. ಹೀಗಾಗಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾಡಿದ ಸಾಲ ಒಟ್ಟು 1.29 ಲಕ್ಷ ಕೋಟಿ ರು.ಗಳಾಗಿದೆ. ಇದು ಎಲ್ಲಾ ದಾಖಲೆಗಳನ್ನು ಮೀರಿಸಿದೆ ಎಂದು ಟೀಕಿಸಿದ್ದಾರೆ.
ಆರ್ಥಿಕವಾಗಿ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿರುವ ರಾಜ್ಯ ಸರ್ಕಾರ ರಾಜ್ಯದ ಪ್ರತಿಯೊಬ್ಬ ಪ್ರಜೆಯ ಮೇಲೆ 32 ರಿಂದ 35 ಸಾವಿರ ರು ಸಾಲದ ಹೊರೆ ಹೇರಿದೆ ಎಂದು ಕಳವಳ ವ್ಯಕ್ತ ಪಡಿಸಿದ್ದಾರೆ.
ಎಸ್ ಎಂ ಕೃಷ್ಣ ಅವಧಿಯಲ್ಲಿ 35,902 ಕೋಟಿ ರು, ಧರ್ಮಸಿಂಗ್ ಅವಧಿಯಲ್ಲಿ 15,635 ಕೋಟಿ, ಎಚ್ .ಡಿ ಕುಮಾರಸ್ವಾಮಿ 3,545 ಕೋಟಿ ರು. ಬಿ.ಎಸ್ ಯಡಿಯೂರಪ್ಪ 25,653 ಕೋಟಿ, ಡಿ.ವಿ ಸದಾನಂದಗೌಡರು 9357 ಕೋಟಿ ರು. ಜಗದೀಶ್ ಶೆಟ್ಟರ್ 13,646 ಕೋಟಿ ರು. ಸಾಲ ಮಾಡಲಾಗಿದೆ ಎಂದು ವಿವರ ನೀಡಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos