ಪಿ.ಆರ್ ರಮೇಶ್ ಮತ್ತು ಸಿ.ಎಂ ಲಿಂಗಪ್ಪ
ಬೆಂಗಳೂರು: ವಿಧಾನಪರಿಷತ್ತಿನಲ್ಲಿ ಖಾಲಿ ಇರುವ ಮೂರು ಸ್ಥಾನಕ್ಕೆ ರಾಮನಗರ ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಹಾಗೂ ಮಾಜಿ ಮೇಯರ್ ಪಿ.ಆರ್. ರಮೇಶ್ ಮತ್ತು ಮೋಹನ್ ಕೊಂಡಜ್ಜಿ, ಅವರನ್ನು ನಾಮನಿರ್ದೇಶನ ಮಾಡುವಂತೆ ರಾಜ್ಯ ಸರ್ಕಾರ ರಾಜ್ಯಪಾಲರಿಗೆ ಶಿಫಾರಸು ಮಾಡಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾಮನಿರ್ದೇಶನಗೊಂಡಿದ್ದ ಪಿ.ವಿ. ಕೃಷ್ಣಭಟ್, ಜಗ್ಗೇಶ್ ಅವಧಿ 2016ರ ಫೆಬ್ರುವರಿ 2ಕ್ಕೆ, ಲೆಹರ್ಸಿಂಗ್ ಸಿರೋಯ್ ಅವಧಿ 2016 ಮೇ 28ಕ್ಕೆ ಮುಕ್ತಾಯವಾಗಿತ್ತು. ಸುಮಾರು 1 ವರ್ಷದಿಂದ ಈ ಸ್ಥಾನಗಳು ಖಾಲಿ ಇದ್ದವು. ಮೂರೂ ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಮಟ್ಟದ ಲಾಬಿ ನಡೆದಿತ್ತು. ಲಿಂಗಾಯತ ಸಮುದಾಯಕ್ಕೆ ಸೇರಿದ ಮೋಹನ್ ಕೊಂಡಜ್ಜಿ ಹೆಸರು ಬಹುತೇಕ ಅಂತಿಮವಾಗಿತ್ತು.
ಉಳಿದ ಎರಡು ಸ್ಥಾನಗಳಿಗೆ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ, ಚಿನ್ನದ ವ್ಯಾಪಾರಿ ಕೆ.ಪಿ. ನಂಜುಂಡಿ, ಪಿ.ಆರ್. ರಮೇಶ್, ಜಿ.ಸಿ. ಚಂದ್ರಶೇಖರ್, ಸಿ.ಎಂ. ಲಿಂಗಪ್ಪ ಮಧ್ಯೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಒಕ್ಕಲಿಗ ಸಮುದಾಯದಿಂದ ಸಿ.ಎಂ. ಲಿಂಗಪ್ಪ ಮತ್ತು ಜಿ.ಸಿ. ಚಂದ್ರಶೇಖರ್ ಮಧ್ಯೆ ಪೈಪೋಟಿ ಏರ್ಪಟ್ಟಿದ್ದರಿಂದಾಗಿ ಆಯ್ಕೆ ಕಗ್ಗಂಟಾಗಿತ್ತು. ರಾಮನಗರ ದವರಾದ ಲಿಂಗಪ್ಪ ಪರ ಇಂಧನ ಸಚಿವ ಡಿ.ಕೆ. ಶಿವಕುಮಾರ್ ವಕಾಲತ್ತು ವಹಿಸಿ, ಪ್ರಭಾವ ಬೀರಿದ್ದರು.